ಎನ್ಎಂಪಿಗೆ ಹುಬ್ಬಳ್ಳಿ ಏರ್ಪೋರ್ಟ್ ಆಯ್ಕೆ; ಹೇಗಿರಲಿದೆ ಖಾಸಗೀಕರಣ?
ಹುಬ್ಬಳ್ಳಿ, ಆಗಸ್ಟ್ 25; ಮೂಲ ಸೌಕರ್ಯ ಕ್ಷೇತ್ರಕ್ಕೆ ಆರ್ಥಿಕ ಸಂಪನ್ಮೂಲ ಆಕರ್ಷಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ನಗದೀಕರಣ ಯೋಜನೆ (ಎನ್ಎಂಪಿ) ರೂಪಿಸಿದೆ. ಈ ಯೋಜನೆಯಡಿ ಖಾಸಗಿಯವರಿಗೆ ವಹಿಸಿಕೊಡಲು ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಗುರುತಿಸಲಾಗಿದೆ.
ದೇಶದ 25 ವಿಮಾನ ನಿಲ್ದಾಣಗಳನ್ನು ಎನ್ಎಂಪಿ ಯೋಜನೆಯಡಿ ಖಾಸಗಿಗೆ ವಹಿಸಲಾಗುತ್ತದೆ. ಇವುಗಳಲ್ಲಿ ಕರ್ನಾಟಕದ ಏಕೈಕ ನಿಲ್ದಾಣವಾಗಿ ಉತ್ತರ ಕರ್ನಾಟಕ ಭಾಗದ ಪ್ರಮುಖ ವಿಮಾನ ನಿಲ್ದಾಣವಾದ ಹುಬ್ಬಳ್ಳಿ ಆಯ್ಕೆ ಮಾಡಲಾಗಿದೆ.
ಬೆಳಗಾವಿ ಕರ್ನಾಟಕದ 3ನೇ ಬ್ಯುಸಿಯೆಸ್ಟ್ ವಿಮಾನ ನಿಲ್ದಾಣ
25 ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಿದರೆ 20,782 ಕೋಟಿ ರೂ. ಆದಾಯ ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು 130 ಕೋಟಿ ರೂ.ಗಳಿಗೆ ಖಾಸಗಿಯವರಿಗೆ ವಹಿಸಲಾಗುತ್ತದೆ.
ಹುಬ್ಬಳ್ಳಿ; ಆಗಸ್ಟ್ 1ರಿಂದ ವಿವಿಧ ನಗರಗಳಿಗೆ ಪ್ರತಿದಿನ ವಿಮಾನ ಸಂಚಾರ
2021-22 ರಿಂದ 2024-25ರ ತನಕ 25 ವಿಮಾನ ನಿಲ್ದಾಣಗಳನ್ನು ಹಂತ-ಹಂತವಾಗಿ ಖಾಸಗಿಯವರಿಗೆ ವಹಿಸಲಾಗುತ್ತದೆ. ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು 2023-24ನೇ ಸಾಲಿನಲ್ಲಿ 4,193 ಕೋಟಿ ಆದಾಯದ ನಿರೀಕ್ಷೆ ಮಾಡಲಾಗಿದ್ದು, ಇದೇ ವರ್ಷಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣ ಆಯ್ಕೆಯಾಗಿದೆ.
ಸರಕು ಸಾಗಣೆ ಕೇಂದ್ರವಾಗುತ್ತಿರುವ ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಹುಬ್ಬಳ್ಳಿ ಉತ್ತರ ಕರ್ನಾಟಕದ ಭಾಗದ ಪ್ರಮುಖ ವಿಮಾನ ನಿಲ್ದಾಣವಾಗಿದೆ. ಬೆಂಗಳೂರು, ಮುಂಬೈ ಸೇರಿದಂತೆ ವಿವಿಧ ನಗರಗಳಿಗೆ ಹುಬ್ಬಳ್ಳಿಯಿಂದ ವಿಮಾನಗಳು ಹಾರಾಟ ನಡೆಸುತ್ತವೆ. 2019ರಲ್ಲಿ ರಾಜ್ಯದ ಬ್ಯುಸಿಯೆಸ್ಟ್ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣ 3ನೇ ಸ್ಥಾನದಲ್ಲಿತ್ತು.
ಕೋವಿಡ್ ಪರಿಸ್ಥಿತಿ ಬಳಿಕ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರ ಸಂಖ್ಯೆ ಕುಸಿತವಾಯಿತು. 2021ರ ಏಪ್ರಿಲ್ನಿಂದ ಜೂನ್ ತನಕ 928 ವಿಮಾನಗಳು ಬಂದಿದ್ದು, 27,352 ಪ್ರಯಾಣಿಕರು ಆಗಮಿಸಿದ್ದಾರೆ. 2019ರಲ್ಲಿ ಇದೇ ಅವಧಿಯಲ್ಲಿ 1,928 ವಿಮಾನಗಳು ಬಂದಿದ್ದು, 1.50 ಲಕ್ಷ ಪ್ರಯಾಣಿಕರು ನಿಲ್ದಾಣಕ್ಕೆ ಭೇಟಿ ಕೊಟ್ಟಿದ್ದರು.
ವಿಮಾನ ನಿಲ್ದಾಣ ಅಭಿವೃದ್ಧಿ; ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಸುಮಾರು 150 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮಾಡಲಾಗಿದೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಸೇರಿದ ಬಳಿಕ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿಮಾನಗಳ ಸಂಖ್ಯೆ ಸಹ ಹೆಚ್ಚಾಗಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಲಾಜಿಸ್ಟಿಕ್ ಅಲೈಡ್ ಸರ್ವೀಸಸ್ ಕಂಪನಿ ಲಿಮಿಟೆಡ್ ಸಹಯೋಗದೊಂದಿಗೆ ದೇಶಿಯ ವಾಯು ಸರಕು ಟರ್ಮಿನಲ್ ಸಹ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಆರಂಭವಾಗಿದೆ.
ನಿಲ್ದಾಣದಲ್ಲಿ ಹೊಸ ಟರ್ಮಿನಲ್ ನಿರ್ಮಾಣವಾದ ಬಳಿಕ ಹಳೆ ಟರ್ಮಿನಲ್ ಕಟ್ಟಡವನ್ನು 60.6 ಲಕ್ಷ ರೂ. ವೆಚ್ಚದಲ್ಲಿ ಸರಕು ಟರ್ಮಿನಲ್ ಆಗಿ ಪರಿವರ್ತಿಸಲಾಗಿದೆ. ಕೋಲ್ಡ್ ಸ್ಟೋರೇಜ್, ಅಪಾಯಕಾರಿ ಸರಕುಗಳು, ಬೆಳೆಬಾಳುವ ವಸ್ತುಗಳನ್ನು ಶೇಖರಣೆ ಮಾಡಲು ಪ್ರತ್ಯೇಕ ವಿಭಾಗ ಮಾಡಲಾಗಿದೆ.
ಏರ್ ಇಂಡಿಯಾ, ಇಂಡಿಗೋ, ಸ್ಟಾರ್ ಏರ್ ಲೈನ್ ಮುಂತಾದ ವಿಮಾನಯಾನ ಸಂಸ್ಥೆಗಳು ವಿಮಾನ ನಿಲ್ದಾಣದಿಂದ ಪ್ರಯಾಣಿಕರ ಜೊತೆ ಸರಕುಗಳನ್ನು ಸಹ ಹೊತ್ತು ಸಾಗಲಿವೆ. ಬೆಂಗಳೂರು, ಚೆನ್ನೈ, ಮುಂಬೈ ಮುಂತಾದ ನಗರಳಿಗೆ ಸರಕುಗಳನ್ನು ಸಾಗಣೆ ಮಾಡಲಾಗುತ್ತದೆ.
4 ಹಂತಗಳು; ರಾಷ್ಟ್ರೀಯ ನಗದೀಕರಣ ಯೋಜನೆ (ಎನ್ಎಂಪಿ) ಅಡಿ ನಾಲ್ಕು ಹಂತಗಳಲ್ಲಿ ವಿಮಾನ ನಿಲ್ದಾಣ ಖಾಸಗೀಕರಣಗೊಳ್ಳಲಿದೆ. ಮೊದಲ ಹಂತದಲ್ಲಿ ಅಂದರೆ 2021-22ನೇ ಸಾಲಿನಲ್ಲಿ ವಾರಾಣಸಿ, ನಾಗ್ಪುರ, ಭುವನೇಶ್ವರ, ಅಮೃತಸರ, ತಿರುಚ್ಚಿ, ಇಂಧೋರ್, ರಾಯ್ಪುರ ನಿಲ್ದಾಣಗಳು ಆಯ್ಕೆಯಾಗಿವೆ.
Recommended Video
2022-23ನೇ ಸಾಲಿನಲ್ಲಿ ಕ್ಯಾಲಿಕಟ್, ಕೊಯಮತ್ತೂರ್, ಪಾಟ್ನಾ, ಮಧುರೈ, ಸುರತ್, ರಾಂಚಿ, ಜೋಧಪುರ್ ವಿಮಾನ ನಿಲ್ದಾಣ ಖಾಸಗಿಕರಣಗೊಳ್ಳಲಿವೆ. 2023-24ರಲ್ಲಿ ಚೆನ್ನೈ, ವಿಜಯವಾಡ, ತಿರುಪತಿ, ವಡೋದರ, ಭೋಪಾಲ್, ಹುಬ್ಬಳ್ಳಿ ಆಯ್ಕೆಗೊಂಡಿವೆ. 2024-25ರಲ್ಲಿ ಇಂಪಾಲ, ಅಗರ್ತಲಾ, ಉದಯಪುರ್, ಡೆಹ್ರಾಡೂನ್ ಆಯ್ಕೆಗೊಂಡಿವೆ.