ಜೇನುಹುಳ ಬಂದವು ಓಡ್ರೋ: ಶಿವನೇ, ವಿದ್ಯಾರ್ಥಿಗಳಿಗೆ ಇದೆಂಥಾ ಶಿಕ್ಷೆ?
ಹುಬ್ಬಳ್ಳಿ, ನವೆಂಬರ್.28: ಮಕ್ಕಳು ಶಾಲೆಗೆ ಹೋದರೆ ಪೋಷಕರು ಖುಷಿ ಪಡುತ್ತಾರೆ. ಆದರೆ, ಈ ಊರಿನಲ್ಲಿ ತಮ್ಮ ಮಕ್ಕಳು ಶಾಲೆಗೆ ಹೋಗಿದ್ದಕ್ಕೆ ಹೆತ್ತವರು ಆತಂಕಪಡುವಂತಾ ವಾತಾವರಣ ನಿರ್ಮಾಣವಾಗಿದೆ. ಇಂದು ನಡೆದ ಒಂದೇ ಒಂದು ಘಟನೆಯಿಂದ ಪೋಷಕರು ಬೆಚ್ಚಿ ಬೀಳುವಂತೆ ಮಾಡಿದೆ.
ಎಂದಿನಂತ ಶಾಲೆಗೆ ತೆರಳಿದ್ದ ವಿದ್ಯಾರ್ಥಿಗಳು ಹೀಗೆ ಆಗುತ್ತೆ ಎಂದು ಕನಸು-ಮನಸಿನಲ್ಲೂ ಅಂದುಕೊಂಡಿರಲಿಲ್ಲ. ಬೆಳಗ್ಗೆ ಪಾಠ ಕೇಳುತ್ತಾ ಕುಳಿತಿದ್ದ ವಿದ್ಯಾರ್ಥಿಗಳು ಸಂಜೆ ವೇಳೆ ಆಟವಾಡಲು ಮೈದಾನಕ್ಕೆ ಇಳಿದಿದ್ದೇ ತಪ್ಪಾಯಿತು.
ಅದೆಲ್ಲಿದ್ದವೋ ಏನೋ ಗೊತ್ತಿಲ್ಲ ಕಣ್ರಿ. ದಿಢೀರ್ ಅಂತಾ ದಾಳಿಯಿಟ್ಟ ಜೇನುಹುಳುಗಳ ಹಾವಳಿಗೆ ವಿದ್ಯಾರ್ಥಿಗಳು ಇದೀಗ ಹಾಸ್ಪತ್ರೆ ಸೇರುವಂತೆ ಮಾಡಿವೆ. ಅಸಲಿದೆ ಇಂಥದೊಂದು ಘಟನೆ ನಡೆದಿದ್ದು, ಹುಬ್ಬಳ್ಳಿ ನಗರದಲ್ಲಿರುವ ಕುಸುಗಲ್ ರಸ್ತೆಯ ಖಾಸಗಿ ಶಾಲೆಯಲ್ಲಿ.
ಹೌದು, ಸಂಜೆ ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಜೇನುಹುಳುಗಳು ದಿಢೀರ್ ದಾಳಿ ನಡೆಸಿವೆ. ಹುಳಗಳಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಓಡಿದ್ದಾರೆ. ಹೀಗಿದ್ದರೂ, ಶಾಲೆಯ ಮೈದಾನದಲ್ಲಿದ್ದ 240 ರಿಂದ 300 ವಿದ್ಯಾರ್ಥಿಗಳ ಮೇಲೆ ಜೇನುಹುಳ ದಾಳಿ ನಡೆಸಿವೆ. ಇದರಿಂದ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ನಡೆದ ಘಟನೆಗೆ ಶಾಲೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣವೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.