ಬಿಜೆಪಿ, ಕಾಂಗ್ರೆಸ್ ಮುಖಂಡರ ಮಾತಿಗೆ ಏಕಕಾಲಕ್ಕೆ ಉತ್ತರ ಕೊಟ್ಟ ಎಚ್ ಡಿಕೆ
ಹುಬ್ಬಳ್ಳಿ, ಡಿಸೆಂಬರ್ 2: ಮಾಜಿ ಸಿಎಂ ಕುಮಾರಸ್ವಾಮಿ ಅವರು ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಏಕಕಾಲದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕೈ ಹಾಗೂ ಕಮಲ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ತಾವು ಈ ಉಪಚುನಾವಣೆಯಲ್ಲಿ ಹದಿನೈದು ಕ್ಷೇತ್ರಗಳಲ್ಲಿ ಗೆಲುವು ಪಡೆಯುತ್ತೇವೆ ಎನ್ನುತ್ತಿದ್ದು, ಎಚ್ ಡಿ ಕುಮಾರಸ್ವಾಮಿ ಆ ಮಾತಿಗೆ ವ್ಯಂಗ್ಯದ ಧಾಟಿಯಲ್ಲಿ ಮಾತನಾಡಿದ್ದಾರೆ.
ಕೂಸು ಹುಟ್ಟುವ ಮುನ್ನ ಕುಲಾವಿ ಯಾಕೆ?
ಈ ಉಪ ಚುನಾವಣೆಯಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ತಾವು 15 ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ. ನಮಗೆ ಯಾವ ಪಕ್ಷದ ಸಪೋರ್ಟ್ ಬೇಕಾಗಿಲ್ಲಾ ಎನ್ನುತ್ತಾರೆ. ಕಾಂಗ್ರೆಸ್ ಪಕ್ಷದ ನಾಯಕ, ನಾವು 15 ಕ್ಷೇತ್ರದಲ್ಲಿ ಗೆಲುವ ಸಾಧಿಸಿ ಅಧಿಕಾರಕ್ಕೆ ಬರುತ್ತೇವೆ ಅಂತಾರೆ. ಕೂಸು ಹುಟ್ಟುವ ಮುನ್ನ ಕುಲಾವಿ ಯಾಕೆ ಹೊಲಿಸಬೇಕು? ಯಾವ ಯಾವ ಪಕ್ಷಕ್ಕೆ ಎಷ್ಟು ನಂಬರ ಬರ್ತಾವೆ ಕಾಯ್ದು ನೋಡೋಣ. ಆದರೆ, ಈ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಿಗೆ ಅಚ್ಚರಿ ಫಲಿತಾಂಶ ಬರುತ್ತದೆ. ಇದು ಭವಿಷ್ಯದ ದೃಷ್ಟಿಯಿಂದ ಸೂಕ್ಷ್ಮವಾದ ಚುನಾವಣೆ ಆಗಲಿದೆ ಎಂದರು.
ತುರ್ತಾಗಿ ಹುಬ್ಬಳ್ಳಿಯಲ್ಲಿ ಇಳಿದ ಎಚ್ಡಿಕೆ; ಡಿಕೆಶಿ ಭೇಟಿ!
ಇಂಥವರಿಂದ ಬಿಜೆಪಿ ಒಳ್ಳೇ ಸರ್ಕಾರ ನೀಡಲು ಸಾಧ್ಯವೇ?
ಬಿಜೆಪಿಯ 15 ಅನರ್ಹ ಶಾಸಕರನ್ನು ಮುಂದೆ ಮಂತ್ರಿ ಮಾಡುವುದಾಗಿ ಹೇಳುತ್ತಿದ್ದು, ಇವರನ್ನು ಇಟ್ಕೊಂಡು ರಾಜ್ಯದ ಜನತೆಗೆ ಒಳ್ಳೆಯ ಸರ್ಕಾರ ನೀಡಲು ಸಾಧ್ಯವೇ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ನಾಯಕರು ಮುಂದಾಗಿದ್ದು, ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರ ಉಳಿಸಿಕೊಳ್ಳುವ ಯಾವ ವ್ಯಕ್ತಿಗಳ ಜೊತೆ ಕೈ ಜೋಡಿಸಲು ಮುಂದಾಗಿದ್ದಾರೆ ನೋಡಿ ಎಂದು ವ್ಯಂಗ್ಯ ಮಾಡಿದ್ದಾರೆ.
"ನಮ್ಮ ಛತ್ರಿಯನ್ನು ಕಾಂಗ್ರೆಸ್, ಬಿಜೆಪಿ ಬಳಸುತ್ತಿದೆ"
ಶ್ರೀನಿವಾಸ ಪ್ರಸಾದ್ ತಮ್ಮ ಜೀವನದಲ್ಲಿ ಎಷ್ಟು ಪಕ್ಷ ಬದಲಾವಣೆ ಮಾಡಿದ್ದಾರೆ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲಾ ಪಕ್ಷಗಳು ಮುಗಿದು ಹೋಗಿವೆ. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹೋಗಿದ್ದಾರೆ. ನಮ್ಮ ಪಕ್ಷ ಕಷ್ಟದಿಂದ ದುಡಿದಿದೆ. ಶ್ರೀನಿವಾಸ ಪ್ರಸಾದ್ ಗೆ ಎಲ್ಲಿ ಬೇಕು ಅಲ್ಲಿ ಕೊಡೆ ಹಿಡಿಯುತ್ತಾರೆ. ಸುಮ್ಮನೆ ಸುಮ್ಮನೆ ಛತ್ರಿ ಹಿಡಿದರೆ ಹುಚ್ಚರು ಅಂತಾರೆ. ಚಪಲಕ್ಕೆ ಶ್ರೀನಿವಾಸ ಪ್ರಸಾದ ಮಾತನಾಡಬಾರದು. ಅಧಿಕಾರಕ್ಕಾಗಿ ಎಲ್ಲಿ ಬೇಕಾದ್ರೂ ಹೋಗ್ತಾರೆ, ನಮ್ಮ ಛತ್ರಿಯನ್ನು ಕಾಂಗ್ರೆಸ್ ಅಂಡ್ ಬಿಜೆಪಿ ಉಪಯೋಗ ಮಾಡುತ್ತಿದೆ ಎಂದು ಅಣಕಿಸಿದರು.
ದೇಶದ ಮಣ್ಣು ಮಾರಿದವರಿಗೆ ನನ್ನ ಬಗ್ಗೆ ಮಾತನಾಡುವ ಹಕ್ಕಿಲ್ಲ: ಕುಮಾರಸ್ವಾಮಿ
ಅಪ್ಪ ಮಕ್ಕಳ ಪಕ್ಷ ಕಿತ್ತೊಗೆಯುತ್ತೇವೆ ಎಂದವರು ಮನೆಯಲ್ಲಿದ್ದಾರೆ
ಬಿಜೆಪಿ ಹಾಗೂ ಕಾಂಗ್ರೆಸ್ 15 ಕ್ಷೇತ್ರದಲ್ಲಿ ಗೆಲುವಿಗಾಗಿ ಹೋರಾಟ ಮಾಡುತ್ತಿದ್ದಾರೆ. ನಾವು ಸಹ 12 ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲುವು ಸಾಧಿಸಬೇಕು ಎಂದು ಹೋರಾಟ ಮಾಡುತ್ತಿದ್ದೇವೆ. ನಾವು ಯಾರ ಒಳ ಒಪ್ಪಂದ ಹಾಗೂ ಹೊರ ಒಪ್ಪಂದ ಮಾಡಿಕೊಂಡಿಲ್ಲ. ನಮ್ಮ ಪಕ್ಷದಿಂದ 6 ರಿಂದ 8 ಕ್ಷೇತ್ರದಲ್ಲಿ ಗೆಲುವು ಪಡೆಯುವ ವಾತಾವರಣ ನಿರ್ಮಾಣವಾಗಿದ್ದು, ಜನರ ಆಶೀರ್ವಾದ ಪಡೆಯುತ್ತೇವೆ ಎಂದರು.
ಅಪ್ಪ ಮಕ್ಕಳ ಪಕ್ಷವನ್ನು ಕಿತ್ತು ಹಾಕುತ್ತೇವೆ ಎಂದು ಹೇಳಿದ ಸಾಕಷ್ಟು ನಾಯಕರು ಮನೆಗೆ ಹೋಗಿದ್ದಾರೆ. ಈ ವಾರ ರಮೇಶ ಜಾರಕಿಹೊಳಿ ಅಪ್ಪ ಮಕ್ಕಳ ಪಕ್ಷವನ್ನು ಕಿತ್ತು ಹಾಕುತ್ತೇವೆ ಎನ್ನುವ ಮೂಲಕ ಸ್ವತಃ ಮನೆಗೆ ಹೋಗಲು ರೆಡಿಯಾಗಿದ್ದಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ.