ಉದ್ಯೋಗಕ್ಕೆ ವೀರ ಯೋಧ ಹನುಮಂತಪ್ಪ ಪತ್ನಿ ಮನವಿ
ಹುಬ್ಬಳ್ಳಿ, ಫೆಬ್ರವರಿ, 18 : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ನನಗೆ ಉದ್ಯೋಗ ನೀಡಬೇಕೆಂದು ಹುತಾತ್ಮ ವೀರಯೋಧ ಹನುಮಂತಪ್ಪ ಕೊಪ್ಪದ ಪತ್ನಿ ಮಹಾದೇವಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ತನ್ನ ಪತಿ ಹುತಾತ್ಮನಾದ ನಂತರ ಜೀವನ ನಡೆಸುವುದು ನನಗೆ ಕಷ್ಟವಾಗಿದೆ ಎಂದು ಮನವಿಯಲ್ಲಿ ಕೋರಿರುವ ಮಹಾದೇವಿಯವರು ಅನಾರೋಗ್ಯದ ನಿಮಿತ್ಯ ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣನವರ ಮೂಲಕ ಮನವಿ ಮಾಡಿದ್ದಾರೆ. [ಹನುಮಂತಪ್ಪನ ಸಾವಿಗೆ ವರ್ಷವಾದರೂ ಪತ್ನಿಗೆ ಕೆಲಸವಿಲ್ಲ!]
ನನಗೆ ಮೂರು ವರ್ಷದ ಮಗಳಿದ್ದು, ಅವಳನ್ನು ಸಾಕಿ ಸಲುಹಿ ವಿದ್ಯಾಭ್ಯಾಸ ಕೊಡಿಸಬೇಕಾಗಿದೆ. ಆದ್ದರಿಂದ ನನಗೆ ಉದ್ಯೋಗದ ಅವಶ್ಯಕತೆ ಇದೆ. ಈ ಕುರಿತು ಧಾರವಾಡ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಅವರಿಗೆ ಮನವಿ ಸಲ್ಲಿಸಿದ್ದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಅಳಲು ತೋಡಿಕೊಂಡರು.
ಶಾಸಕ ಅರವಿಂದ ಬೆಲ್ಲದ ಕೂಡ ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿದ್ದರು. ಅವರ ಸಲಹೆಯಂತೆ ಪಾಲಿಕೆ ಆಯುಕ್ತರಿಗೆ ಮನವಿ ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ನಾನೇ ಸ್ವತಃ ತಮ್ಮನ್ನು ಮುಖತಃ ಭೇಟಿಯಾಗಿ ಮನವಿ ಸಲ್ಲಿಸುತ್ತೇನೆ ಎಂದು ಕೂಡ ತಿಳಿಸಿದ್ದಾರೆ.
ಕಳೆದ ವರ್ಷದ ಫೆಬ್ರವರಿಯಲ್ಲಿ ಹನುಮಂತಪ್ಪ ಸಿಯಾಚಿನ್ ನ ಹಿಮಪಾತದಲ್ಲಿ ಸಿಲುಕಿ 25 ಅಡಿ ಆಳದಲ್ಲಿ 6 ದಿನಗಳ ಸಿಲುಕಿದ್ದರು. ಅವರನ್ನು ಪತ್ತೆ ಹಚ್ಚಿ ನವದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಹನುಮಂತಪ್ಪ ಫೆಬ್ರವರಿ 11ರಂದು ಕೊನೆಯುಸಿರೆಳೆದಿದ್ದರು. ಹನುಮಂತಪ್ಪನವರ ನಿಧನಕ್ಕೆ ಇಡೀ ದೇಶವೇ ಕಣ್ಣೀರಿಟ್ಟಿತ್ತು. [ಹುಟ್ಟಿ ಬಾ ಹನುಮಂತಪ್ಪ ದೇಶದ ಹಣತೆಯ ಬೆಳಗಲು]