ಹುಬ್ಬಳ್ಳಿ: ಸಾಯಿಬಾಬಾ ಭಜನೆ, ದುರ್ಗಾದೇವಿ ಆರಾಧನೆ
ಹುಬ್ಬಳ್ಳಿ,ಜುಲೈ,19: ನಗರದಲ್ಲಿ ಮಂಗಳವಾರ ಆಷಾಢ ಹುಣ್ಣಿಮೆದಂದು ಗುರು ಪೂರ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗಿನಿಂದಲೇ ಸಾರ್ವಜನಿಕರು ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತುಕೊಂಡಿದ್ದರು.
ನಗರದ ಶಿರಡಿ ನಗರದ ಸಾಯಿಬಾಬಾ ಮಂದಿರ, ಕೋರ್ಟ್ ವೃತ್ತ ಸಾಯಿಮಂದಿರದಲ್ಲಿ ಸಾವಿರಾರು ಭಕ್ತ ಸಮೂಹ ಬಾಬಾ ದರ್ಶನ ಪಡೆದುಕೊಂಡು ಗುರು ಕಾಣಿಕೆ ಸಲ್ಲಿಸಿದರು.[ಸನ್ಮಾರ್ಗ ತೋರಿದವರಿಗೆ ನಮೋ ನಮಃ]
ಐದು ದೇವಿಯವರ ದರ್ಶನ: ಇನ್ನು ನಗರದ ಮುತ್ತೈದೆಯರು ಐದು ದೇವಿಯವರ ದೇವಸ್ಥಾನಕ್ಕೆ ಭೇಟಿ ನೀಡಿ ಉಡಿ ತುಂಬಿದರು. ಆಷಾಢದಲ್ಲಿ ಐದು ದೇವಿಗಳಿಗೆ ಉಡಿ ತುಂಬುವ ಪದ್ಧತಿ ಎರಡು ವಾರಗಳ ಹಿಂದಿನಿಂದ ನಡೆಯುತ್ತಿದ್ದು, ಇನ್ನೆರಡು ವಾರ ಉಡಿ ತುಂಬುವ ಕಾರ್ಯ ಮಾಡಿಕೊಂಡು ನಂತರ ಶ್ರಾವಣ ಮಾಸದಲ್ಲಿ ವೃತ ಪೂರ್ಣಗೊಳಿಸುತ್ತಾರೆ.
ಗುರು ಕಾಣಿಕೆ :ಗುರು ಪೂರ್ಣಿಮೆಯಂದು ಹಲವಾರು ಜನರು ತಮ್ಮ ಇಚ್ಛಿತ ವಿದ್ಯೆ ಕಲಿಸಿದ ಗುರುಗಳಿಗೆ, ಗುರು ಸ್ಥಾನ ಕೊಟ್ಟಿರುವ ಸ್ವಾಮೀಜಿಗಳಿಗೆ ಗುರು ಕಾಣಿಕೆ ಸಲ್ಲಿಸಿ ಸಂಭ್ರಮ ಪಟ್ಟು ಆಶೀರ್ವಾದ ಪಡೆದುಕೊಂಡರು.[ಹೀಗಿದ್ದರು ನಮ್ಮ ಎಚ್ಚೆನ್ ಮೇಷ್ಟ್ರು]
ಚಾತುರ್ಮಾಸ್ಯ ಆರಂಭ: ಆಷಾಢ ಏಕಾದಶಿ ಆಚರಿಸಿದ್ದ ವೈಷ್ಣವ ಸಮುದಾಯದವರು ಮಂಗಳವಾರದಿಂದ ಚಾತುರ್ಮಾಸ್ಯ ಆಚರಣೆ ಆರಂಭಿಸಿದರು. ಈ ಹಿನ್ನೆಲೆಯಲ್ಲಿ ನಗರದ ಹಲವಾರು ದೇವಸ್ಥಾನಗಳಲ್ಲಿ ಚಾತುರ್ಮಾಸ್ಯದಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದುರ್ಗಾದೇವಿ ಜಾತ್ರೆ: ನಗರದ ಹೊಸುರು ಬಳಿಯ ದುರ್ಗಾದೇವಿಯ ಜಾತ್ರೆಯು ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಭಕ್ತರು ಜಾತ್ರೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದುಕೊಂಡರು.
ಮಂಗಳವಾರ ಸಂಜೆ ದೇವಿಯ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಪ್ರಸಾದ ಸ್ವೀಕರಿಸಲು ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ.