ಪೊಲೀಸರಿಗೆ ಗುಣಮಟ್ಟದ ತರಬೇತಿಗೆ ಸರ್ಕಾರದ ಒತ್ತು; ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ, ಸೆಪ್ಟೆಂಬರ್ 29: "ವಿದೇಶದಲ್ಲಿರುವ ಅತ್ಯುತ್ತಮ ಗುಣಮಟ್ಟದ ಪೊಲೀಸ್ ತರಬೇತಿ ಶಾಲೆಗಳಲ್ಲಿ ರಾಜ್ಯದ ಪೊಲೀಸರಿಗೆ ತರಬೇತಿ ನೀಡುವ ನಿರ್ಣಯವನ್ನು ಸರ್ಕಾರ ಕೈಗೊಂಡಿದೆ. ಪೊಲೀಸ್ ವೇತನದ ಪರಿಷ್ಕರಣೆಯ ಕುರಿತು ಸರ್ಕಾರ ಶೀಘ್ರ ನಿರ್ಧಾರ ಪ್ರಕಟಿಸಲಿದೆ. ಕಾನೂನಿನ್ವಯ ನಿಷ್ಪಕ್ಷಪಾತದಿಂದ ಪೊಲೀಸರು ಕಾರ್ಯ ನಿರ್ವಹಿಸಿದರೆ ಮಾತ್ರ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪಿಸಿ ಪ್ರಗತಿ ಹೊಂದಲು ಸಾಧ್ಯ" ಎಂದು ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಔರಾದ್ಕರ್ ವರದಿ ಜಾರಿ ಗ್ಯಾರಂಟಿ ಎಂದು ಭರವಸೆಯಿತ್ತ ಬೊಮ್ಮಾಯಿ
ಹುಬ್ಬಳ್ಳಿಯ ಗೋಕುಲ ರಸ್ತೆಯ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಲ್ಲಿ 6ನೇ ತಂಡದ ನಾಗರಿಕ ಪೊಲೀಸ್ ಕಾನ್ ಸ್ಟೆಬಲ್ ಗಳ ನಿರ್ಗಮನ ಪಥ ಸಂಚಲನ ವೀಕ್ಷಿಸಿ ಮಾತನಾಡಿದ ಅವರು, "ಎಲ್ಲಾ ರೀತಿಯ ಅರ್ಹತೆ ಮತ್ತು ಪ್ರತಿಭೆಯಿಂದ ನಿಮಗೆಲ್ಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ಅನ್ಯಾಯ, ಶೋಷಣೆಗಳಿದ್ದಲ್ಲಿಗೆ ತೆರಳಿ ಬಡವರಿಗೆ, ದೀನ ದಲಿತರಿಗೆ ನಿರ್ಗತಿಕರಿಗೆ ಸೇವೆ ಸಲ್ಲಿಸುವ ಸದವಕಾಶ ಪೊಲೀಸರಿಗೆ ಇದೆ. ಭಾರತ ಸಂವಿಧಾನದಡಿ ಪೊಲೀಸ್ ಕಾನೂನು ರಚನೆಯಾಗಿದೆ. ರಾಜ್ಯದ 14 ಪೊಲೀಸ್ ತರಬೇತಿಗಳಲ್ಲಿ ಸಾವಿರಾರು ಜನರಿಗೆ ದಕ್ಷ ತರಬೇತಿ ನೀಡಲಾಗುತ್ತಿದೆ. ಹಿಂದಿನ ಅಧಿಕಾರಿಗಳು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ" ಎಂದರು.
"ಅನ್ಯಾಯಕ್ಕೊಳಗಾದ ಮಹಿಳೆಯರು, ನೌಕರರು, ವಿದ್ಯಾರ್ಥಿಗಳು, ರೈತರು ಎಲ್ಲರೂ ನ್ಯಾಯ ಅರಸಿ ಪೊಲೀಸ್ ಇಲಾಖೆಯ ಬಳಿ ಬರುತ್ತಾರೆ. ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ನಂತರ ಸಾಮಾಜಿಕ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಆಧುನಿಕ ತಂತ್ರಜ್ಞಾನವನ್ನು ದುಷ್ಟ ಶಕ್ತಿಗಳು ಬಳಸಿಕೊಂಡು ಸುಳ್ಳು ವದಂತಿ ಹರಡುತ್ತಿವೆ. ಎಲ್ಲಾ ಪೊಲೀಸರಿಗೆ ಸೈಬರ್ ಅಪರಾಧದ ನಿಯಂತ್ರಣ ತರಬೇತಿ ನೀಡಲಾಗುವುದು. ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ವಿಧಿವಿಜ್ಞಾನ, ಸೈಬರ್ ಅಪರಾಧ ಪತ್ತೆಗೆ ಹೆಸರುವಾಸಿಯಾಗಿರುವ ತರಬೇತಿ ಶಾಲೆಗಳಿಗೆ ರಾಜ್ಯದ ಪೊಲೀಸರನ್ನು ಹಂತ ಹಂತವಾಗಿ ನಿಯೋಜಿಸಲಾಗುವುದು" ಎಂದರು.