'ಲಿಂಗಾಯತ ಮುಖ್ಯಮಂತ್ರಿಗಳಿಗೆ ಪ್ರತ್ಯೇಕ ಧರ್ಮಕ್ಕೆ ಹೋರಾಡುವ ಶಕ್ತಿ ಇರಲಿಲ್ಲ'
ಹುಬ್ಬಳ್ಳಿ, ಅಕ್ಟೋಬರ್ 2: "ರಾಜ್ಯದಲ್ಲಿ ಹಲವಾರು ಜನ ಲಿಂಗಾಯತ ಮುಖ್ಯಮಂತ್ರಿ ಆಗಿ ಹೋಗಿದ್ದಾರೆ. ಆದರೆ, ಅವರು ಯಾರಿಗೂ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಮಾಡುವ ಶಕ್ತಿ ಇರಲಿಲ್ಲ," ಎಂದು ಹಿರಿಯ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಭಾನುವಾರ ಹುಬ್ಬಳ್ಳಿಯ ಲಿಂಗರಾಜ ನಗರದ ಸಮುದಾಯ ಭವನದಲ್ಲಿ ನಡೆದ ಲಿಂಗಾಯತ ಪ್ರತ್ಯೇಕ ಧರ್ಮದ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, "ಲಿಂಗಾಯತ ಮುಖ್ಯಮಂತ್ರಿಗಳು ತಮ್ಮ ಮೇಲೆ ಆಪಾದನೆ ಬರುತ್ತದೆ ಎಂದು ಪ್ರತ್ಯೇಕ ಧರ್ಮದ ಹೋರಾಟ ಮಾಡದೆ ಸುಮ್ಮನೆ ಇದ್ದರು," ಎಂದು ಆಪಾದಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, "ನಾನು ಯಾವುದೇ ರಾಜಕೀಯ ಉದ್ದೇಶಕ್ಕೆ ಈ ಹೋರಾಟದಲ್ಲಿ ಇಲ್ಲ. ಇದು ನಮ್ಮ ಬದುಕಿನ ಸಮಸ್ಯೆ. ಈ ಸಮಸ್ಯೆಗಳನ್ನು ಪರಿಹಾರ ಮಾಡಲು ನಾನು ಈ ಹೋರಾಟದಲ್ಲಿ ಇದ್ದೇನು. ಇನ್ನು ಈ ಹೋರಾಟದ ಬಗ್ಗೆ ಕೆಲವರು ಅಪಸ್ವರ ಎತ್ತಿದ್ದಾರೆ. ಅದು ಅವರ ತಪ್ಪಲ್ಲ. ಬದಲಾಗಿ ಅವರ ಅಧಿಕಾರಕ್ಕೆ ಕುತ್ತು ಬಂದಿದೆ. ಹೀಗಾಗಿ ಅಪಸ್ವರದ ಮಾತುಗಳನ್ನು ಆಡುತ್ತಿದ್ದಾರೆ ಎಂಬುದನ್ನು ಮೊದಲು ಎಲ್ಲರೂ ಅರ್ಥ ಮಾಡಿಕೊಳ್ಳಿ," ಎಂದು ಕಿವಿಮಾತು ಹೇಳಿದ್ದಾರೆ.
ಇದು ಒಂದು ರಾಜಕೀಯ ಹೋರಾಟ ಅಲ್ಲ. ಬದಲಾಗಿ ಇದು ಧರ್ಮಕ್ಕೆ ನಡೆಯುತ್ತಿರುವ ಹೋರಾಟ. ನನ್ನ ಜತೆ ಯಾರು ಬಂದರೂ ಸರಿಯೇ ನಾನು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹೊರಟ್ಟಿ ಸ್ಪಷ್ಟ ಮಾರುಗಳಲ್ಲಿ ಹೇಳಿದ್ದಾರೆ.
"ದೇಶದಲ್ಲಿ ಜೈನರು, ಸಿಖ್ಖರು ಪ್ರತ್ಯೇಕ ಧರ್ಮದ ಮಾನ್ಯತೆ ಪಡೆದಿದ್ದಾರೆ. ಹೀಗಿರುವಾಗ ನಮಗೆ ಯಾಕೆ ಪ್ರತ್ಯೇಕ ಧರ್ಮ ಬೇಡ? ಹಲವಾರು ಸಾರಿ ವೀರಶೈವ ಮತ್ತು ಲಿಂಗಾಯತ ಸಮನ್ವಯ ಸಭೆ ನಡೆದಿದೆ. ಆದರೆ, ಈ ಹಿಂದೆ ನಡೆದ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ಮೂಡಿಲ್ಲ. ಮುಂದಿನ ಸಭೆಯಲ್ಲಿ ಒಮ್ಮತ ಮೂಡಿದರೆ ಒಳಿತು. ಇಲ್ಲಾವಾದರೆ ಅವರ ಹಾದಿ ಅವರಿಗೆ ನಮ್ಮ ದಾರಿ ನಮಗೆ," ಎಂದು ಬಸವರಾಜ ಹೊರಟ್ಟಿ ಘೋಷಿಸಿದ್ದಾರೆ.
"ಕಲೆ ಮಠದ ಸ್ವಾಮೀಜಿಗಳು ಲಿಂಗಾಯತ ಧರ್ಮದ ಬಗ್ಗೆ ತಮ್ಮ ಮನಸೋ ಇಚ್ಛೆ ಹೇಳಿಕೆ ಕೊಡುವುದುನ್ನು ನಿಲ್ಲಿಸಬೇಕು. ಜನರ ಭಾವನೆಗೆ ತಕ್ಕ ಹಾಗೆ ಎಲ್ಲ ಸ್ವಾಮೀಜಿಗಳು ನಡೆದುಕೊಳ್ಳಲಿ," ಎಂದು ಬಸವರಾಜ ಹೊರಟ್ಟಿ ಸಲಹೆ ನೀಡಿದ್ದಾರೆ.
ಇದೇ ನವೆಂಬರ್ 5 ರಂದು ಹುಬ್ಬಳ್ಳಿಯ ನೆಹರೂ ಮೈದಾನಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶಕ್ಕೆ 5 ಲಕ್ಷ ಜನ ಸೇರಲಿದ್ದಾರೆ. ಹೀಗಾಗಿ ಸಮಾವೇಶ ಯಶಸ್ವಿಯಾಗಲು ಎಲ್ಲರು ಕೈ ಜೋಡಿಸಿ ಎಂದು ಬಸವರಾಜ ಹೊರಟ್ಟಿ ಕರೆ ನೀಡಿದ್ದಾರೆ.