'ಆದಿತ್ಯನಾಥ್ ಮೇಲೆ ಸಣ್ಣ ಕ್ರಮ, ಕಲ್ಯಾಣ್ ಸಿಂಗ್ ಮೇಲೆ ಕ್ರಮವೇ ಕೈಗೊಂಡಿಲ್ಲವೇಕೆ?'
ಹುಬ್ಬಳ್ಳಿ, ಏಪ್ರಿಲ್ 17: ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದು ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಸಿ ಎಂ ಯೋಗಿ ಆದಿತ್ಯನಾಥ್ ಅವರ ಮೇಲೆ ಕೊನೆಗೂ ಸಣ್ಣ ಕ್ರಮಕ್ಕೆ ಮುಂದಾಗಿರುವ ಚುನಾವಣಾ ಆಯೋಗ, ರಾಜಸ್ತಾನದ ರಾಜ್ಯಪಾಲ ಕಲ್ಯಾಣ್ ಸಿಂಗ್ ಅವರ ಮೇಲೆ ಕ್ರಮ ಕೈಗೊಳ್ಳದೇ ಇರುವುದಕ್ಕೆ ಕಾರಣ ಏನು ಎನ್ನುವುದನ್ನ ನಾವು ಪ್ರಶ್ನಿಸಬೇಕಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್ ಕೆ ಪಾಟೀಲ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಹುಬ್ಬಳ್ಳಿ ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಸ್ಥಾನದ ರಾಜ್ಯಪಾಲರು ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಅವರು, ಬಹಿರಂಗವಾಗಿ ಮೋದಿ ಅವರಿಗೆ ಮತ ನೀಡಿ ಎಂದು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು ಸಂವಿಧಾನಕ್ಕೆ ವಿರೋಧವಾಗಿದೆ.
ಅಮಿತ್ ಶಾ ಮೇಲೆ ನೋಟು ವಿನಿಮಯ ಆರೋಪ ಹೊರೆಸಿದ ಪಾಟೀಲ್
ಈ ನಿಟ್ಟಿನಲ್ಲಿ ನೀಡಿದ್ದ ದೂರನ್ನು ಚುನಾವಣಾ ಆಯೋಗ ರಾಷ್ಟ್ರಪತಿ ಅವರಿಗೆ ರವಾನಿಸಿತ್ತು. ಆದರೆ, ರಾಷ್ಟ್ರಪತಿಯವರು ಅವರ ಮೇಲೆ ಕ್ರಮ ಕೈಗೊಳ್ಳುವ ಬದಲು ಗೃಹ ಇಲಾಖೆಗೆ ರವಾನಿಸಿದ್ದು ಸರಿಯಾದ ಕ್ರಮವಲ್ಲ.
ರಾಷ್ಟ್ರಪತಿಗಳು ತಕ್ಷಣ ಕಲ್ಯಾಣ್ ಸಿಂಗ್ ಅವರನ್ನು ಅಮಾನತ್ತುಗೊಳಿಸಬೇಕಾಗಿತ್ತು. ಇಲ್ಲವೆ ಚುನಾವಣಾ ಪ್ರಕ್ರಿಯೆ ಮುಗಿಯುವ ವರೆಗೂ ಕಡ್ಡಾಯ ರಜೆಯಲ್ಲಿ ಕಳುಹಿಸಬೇಕಾಗಿತ್ತು. ಇವರೆಡನ್ನೂ ಮಾಡದ ರಾಷ್ಟ್ರಪತಿಗಳು ಚುನಾವಣಾ ಪ್ರಕ್ರಿಯೆಯ ಪಾವಿತ್ರತ್ಯತೆಯನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೊಪಿಸಿದರು. ರಾಷ್ಟ್ರಪತಿಗಳ ಈ ಕ್ರಮ ಇತಿಹಾಸದಲ್ಲಿ ಸೇರ್ಪಡೆಯಾಗಲಿದೆ ಎಂದು ಹೇಳಿದರು.
ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದು ಹೇಳಿಕೆ
ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದು ಹೇಳಿಕೆ ನೀಡಿದ ಯೋಗಿ ಆದಿತ್ಯನಾಥ್ ಅವರಂತಹ ಹೇಳಿಕೆಯನ್ನು ಸ್ವಾತಂತ್ರ್ಯಾನಂತರ ಯಾವುದೇ ಕೆಟ್ಟ ರಾಜಕಾರಣಿಯೂ ನೀಡಿರಲಿಲ್ಲಾ. ಯಾವುದೇ ಕೆಟ್ಟ ರಾಜಕಾರಣಿಯೂ ಸೈನ್ಯವನ್ನು ರಾಜಕೀಯಕ್ಕೆ ಬಳಸಿಕೊಂಡಿರಲಿಲ್ಲಾ. ಸೈನ್ಯವನ್ನು ಪ್ರಸ್ತಾಪಿಸಿ ಜನರನ್ನು ಭಾವೋದ್ರೆಕಕ್ಕೆ ತಗೆದುಕೊಂಡು ಹೋಗಲು ಪ್ರಯತ್ನಿಸಿರಲಿಲ್ಲಾ.
ಯೋಗಿ ಆದಿದ್ಯನಾಥ್ ಅವರು ಬಹಳ ಅನುಭವ ಹೊಂದಿರುವ ವ್ಯಕ್ತಿ. ಕಾವಿ ಹಾಕಿಕೊಂಡರೂ ಕೂಡಾ ಗುನ್ನೆ ಪ್ರವೃತ್ತಿಯ ಮನಸ್ಸನ್ನು ಹೊಂದಿದ್ದಾರೆ. ದೇಶದ ಸಂವಿಧಾನ ನೀಡಿರುವ ಪ್ರಮುಖವಾದ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ. ಮೋದಿ ಸೇನೆಯ ಗೆಲವು ಮೋದಿ ಸೇನೆಯಿಂದ ರಕ್ಷಣೆ ಎನ್ನುವ ಹೇಳಿಕೆ ನೀಡುವ ಮೂಲಕ ನೀಚಮಟ್ಟದ ರಾಜಕಾರಣಕ್ಕೆ ಕೈಹಾಕಿದ್ದಾರೆ ಎಂದರು.
ಚುನಾವಣಾ ಆಯೋಗ ಸಣ್ಣ ಮಟ್ಟದ ಕ್ರಮ
ಈ ಹೇಳಿಕೆಯನ್ನು ನೀಡಿದ ಕೂಡಲೇ ಕೆಪಿಸಿಸಿ ಪ್ರಚಾರ ಸಮಿತಿಯ ವತಿಯಿಂದ ವ್ಯಾಪಕವಾಗಿ ಟೀಕಾತ್ಮಕ ಹೇಳಿಕೆಯನ್ನು ನೀಡಲಾಯಿತು. ಅಲ್ಲದೆ, ಮಾಧ್ಯಮಗಳ ಮೂಲಕ ಚುನಾವಣಾ ಆಯೋಗದ ಗಮನ ಸೆಳೆಯಲೂ ಪ್ರಯತ್ನಿಸಲಾಯಿತು. ಇದರ ಫಲವಾಗಿ ಚುನಾವಣಾ ಆಯೋಗ ಸಣ್ಣ ಮಟ್ಟದ ಕ್ರಮವನ್ನಾದರೂ ಕೈಗೊಂಡಿದೆ. ಇದು ಸ್ವಾಗತಾರ್ಹ ಎಂದರು.
ಪ್ರಮುಖ ಸಾಕ್ಷಿಗಳಿಗೆ ಸೂಕ್ತ ಭದ್ರತೆಯನ್ನೂ ನೀಡಬೇಕು
ಇದಲ್ಲದೆ ವಿದೇಶದಲ್ಲಿ 3 ಲಕ್ಷ ಕೋಟಿ ರೂಪಾಯಿಗಳಷ್ಟು ಹಣವನ್ನು ಮುದ್ರಿಸಿ ಭಾರತದಲ್ಲಿ ಚಲಾವಣೆಗೊಳಿಸುವರ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಗಮನ ಸೆಳೆಯಲಾಗಿದೆ. ಇದರ ಬಗ್ಗೆ ತಕ್ಷಣ ತನಿಖೆ ಪ್ರಾರಂಭಿಸಬೇಕು. ಹಾಗೂ ಈ ಪ್ರಕರಣದ ಪ್ರಮುಖ ಸಾಕ್ಷಿಗಳಿಗೆ ಸೂಕ್ತ ಭದ್ರತೆಯನ್ನೂ ನೀಡಬೇಕು ಎಂದು ಮನವಿಮಾಡಿದ್ದೆನೆ ಎಂದರು.
ನ್ಯಾಯ್ ಯೋಜನೆಯ ಮೂಲಕ 25 ಕೋಟಿ
ಕಾಂಗ್ರೆಸ್ ಪಕ್ಷ ಅನುಷ್ಠಾನಕ್ಕೆ ತರಬಹುದಾದಂತಹ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಈ ಚುನಾವಣಾ ಪ್ರಣಾಳಿಕೆಯನ್ನು ಜನರು ಬಹಳ ಒಳ್ಳೆಯ ರೀತಿಯಲ್ಲಿ ಸ್ವಾಗತಿಸಿದ್ದಾರೆ. ನ್ಯಾಯ್ ಯೋಜನೆಯ ಮೂಲಕ 25 ಕೋಟಿ ಜನರು ಬಡತನ ರೇಖೆಯಿಂದ ಮೇಲೆ ಮಧ್ಯಮ ವರ್ಗಕ್ಕೆ ಅಭಿವೃದ್ದಿಗೊಳಿಸಲಿದ್ದೇವೆ. ನಮ್ಮ ಪ್ರಣಾಳಿಕೆಯ ನಂತರ ಬಿಜೆಪಿಯ ನೆಲೆ ಕುಸಿದಿದ್ದು, ಮೋದಿ ಅವರ ಮಾತುಗಳಲ್ಲಿ ಬದಲಾವಣೆ ಆಗಿದೆ. ಇಂತಹ ಸಂಧರ್ಭದಲ್ಲಿ ಅರಾಜಕತೆಯ ಮೂಲಕ ಏನನ್ನಾದರೂ ಸಾಧಿಸಬಹುದು ಎನ್ನುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದರು
ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳ ಪರವಾದ ಅಲೆ ಇದೆ
ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳ ಪರವಾದ ಅಲೆ ಇದೆ. ನಮ್ಮ ಮೈತ್ರಿ ಅಭ್ಯರ್ಥಿಗಳು 20 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹುಬ್ಬಳ್ಳಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ವ್ಯಾಪಕವಾಗಿ ಪ್ರಚಾರ ಕೈಗೊಂಡ ಹೆಚ್ ಕೆ ಪಾಟೀಲ್ ಅವರು ಧಾರವಾಡದ ಮಾರ್ಡನ್ ಹಾಲ್ ನಲ್ಲಿ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಅವರ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ನಂತರ ನಲವಾಡಿ ಅಣ್ಣಿಗೇರಿ ಹಾಗೂ ಗದಗದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡರು.