ಉತ್ತರ ಕರ್ನಾಟಕದ ಪ್ರಖ್ಯಾತ ಕಿಮ್ಸ್ ಆಸ್ಪತ್ರೆ ನಿರ್ದೇಶಕ ಹುದ್ದೆಗೆ ವೈದ್ಯರ ಲಾಬಿ
ಹುಬ್ಬಳ್ಳಿ, ನವೆಂಬರ್ 9: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಹುದ್ದೆಗೇರಲು ವೈದ್ಯರ ನಡುವೆ ಲಾಬಿ ಶುರುವಾಗಿದೆ. ಉತ್ತರ ಕರ್ನಾಟಕದ ದೊಡ್ಡ ಆಸ್ಪತ್ರೆಯಾದ ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಹುದ್ದೆ ಮೇಲೆ ಪ್ರಖ್ಯಾತ ವೈದ್ಯರು ಕಣ್ಣಿಟ್ಟಿದ್ದಾರೆ. ಕಿಮ್ಸ್ ಆಸ್ಪತ್ರೆಯ ಹಾಲಿ ನಿರ್ದೇಶಕ ಪ್ರಭಾರ ಡಾ.ರಾಮಲಿಂಗಪ್ಪ ಅಂಟರತಾನಿ, ಪ್ರಾಂಶುಪಾಲ ಡಾ.ಎಂ.ಸಿ.ಚಂದ್ರು, ಡಾ.ಕೆ.ಎಫ್. ಕಮ್ಮಾರ್, ಡಾ.ಗುರುಶಾಂತಪ್ಪ ಯಲಗಚ್ಚಿನ, ಡಾ.ಪ್ರಕಾಶ ವಾರಿ, ಡಾ.ಸವಿತಾ ಕನಕಪುರ, ಡಾ.ಕಸ್ತೂರಿ ದೋಣಿಮಠ, ಡಾ.ಸೂರ್ಯಕಾಂತ ಕಲ್ಲೂರಾಯ, ಡಾ. ದೊಡ್ಡಮನಿ ಸೇರಿದಂತೆ ಒಂಬತ್ತು ಆಕಾಂಕ್ಷಿಗಳು ಇದುವರೆಗೆ ಅರ್ಜಿ ಸಲ್ಲಿಸಿದ್ದಾರೆ.
ನಿರ್ದೇಶಕ ಹುದ್ದೆಗೆ ಅರ್ಜಿ ಸಲ್ಲಿಸಿದವರನ್ನು ನವೆಂಬರ್ 14ರಂದು ಬೆಂಗಳೂರಿನಲ್ಲಿ ನಡೆಯುವ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ ಎಂದು ತಿಳಿದುಬಂದಿದೆ. ಪ್ರೊಫೆಸರ್ ಆಗಿ ಐದು ವರ್ಷ ಕಾರ್ಯ ನಿರ್ವಹಿಸಿರುವ ಮತ್ತು ಆಡಳಿತ ಅನುಭವ ಇರುವವರು, ಎಚ್ಒಡಿ, ಮೆಡಿಕಲ್ ಸೂಪರಿಟೆಂಡೆಂಟ್, ಪ್ರಾಂಶುಪಾಲರಾಗಿ, ನಿರ್ದೇಶಕಾಗಿ ಕಾರ್ಯ ನಿರ್ವಹಿಸಿದವರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ 45ಕ್ಕೂ ಹೆಚ್ಚು ವೈದ್ಯರಿಗೆ ನೋಟಿಸ್ ಜಾರಿ
ಹಾಲಿ ಪ್ರಭಾರ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ದಿವಂಗತ ಸಚಿವ ಸಿ.ಎಸ್. ಶಿವಳ್ಳಿ ಅವರ ಕೃಪೆಯಿಂದ ಪ್ರಭಾರ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಕಳೆದ ಒಂದೂವರೆ ವರ್ಷಗಳಿಂದ ಪ್ರಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ.
ಉತ್ತರ ಕರ್ನಾಟಕ ಕಿಮ್ಸ್ ಆಸ್ಪತ್ರೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ, ಅವರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎನ್ನುವ ಗಂಭೀರ ಆರೋಪ ಇದೆ. ಹಾಗಾಗಿ ಯಾರೇ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರೂ ಕಿಮ್ಸ್ ಸಂಸ್ಥೆಯನ್ನು ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎನ್ನುತ್ತಿದ್ದಾರೆ ಸ್ಥಳೀಯ ಜನರು.