ಉಪ ಚುನಾವಣೆ ವೇಳೆ ಮಹದಾಯಿ ಅಸ್ತ್ರ ಬಳಸಿದ ಟ್ರಬಲ್ ಶೂಟರ್
ಹುಬ್ಬಳ್ಳಿ, ನವೆಂಬರ್ 21: ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ನಡೆಯುತ್ತಿರುವ ಹೋರಾಟದ ಲಾಭವನ್ನು ಪಡೆಯಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎನ್ನುವ ಅನುಮಾನ ದಟ್ಟವಾಗಿದೆ. ಹೌದು ಟ್ರಬಲ್ ಶೂಟರ್ ಮಾಜಿ ಸಚಿವ ಡಿ ಕೆ ಶಿವಕುಮಾರ್ ಮಹದಾಯಿ ಅಸ್ತ್ರವನ್ನು ಇಂದು ಪ್ರಯೋಗ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, "ಉತ್ತರ ಕರ್ನಾಟಕದ ಐದು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಈ ಭಾಗದ ಜನ, ರೈತರು ಚುನಾವಣೆ ವೇಳೆ ತಕ್ಕ ಉತ್ತರ ಕೊಡಬೇಕು. ಮಂತ್ರಿಗಿರಿ ಆಸೆ ತೋರಿಸುವ ಹುಮ್ಮಸ್ಸು ರೈತರ ಪರವಾಗೂ ಇರಬೇಕು" ಎಂದು ಹೇಳಿದ್ದಾರೆ.
ರಾಜ್ಯದ ಹಿತದೃಷ್ಟಿಯಿಂದ ಮಹದಾಯಿ ಪ್ರಸ್ತಾಪ ಎಂದ ಡಿಕೆಶಿ
"ಜನರಿಗೆ ತೋರಿಸುವ ಆಸೆ, ಆಮಿಷದ ಬಗ್ಗೆ ಚುನಾವಣಾ ಆಯೋಗ ಗಮನ ಹರಿಸಬೇಕು. ಚುನಾವಣಾ ಆಯೋಗ ಯಾಕೆ ಸುಮ್ಮನಿದೆ ಅನ್ನುವ ಅನುಮಾನ ಕಾಡುತ್ತಿದೆ. ರಾಜ್ಯದ ಹಿತದೃಷ್ಟಿಯಿಂದ ಮಹದಾಯಿ ವಿಚಾರವನ್ನು ಪ್ರಸಾಪ್ತ ಮಾಡಿದ್ದೇನೆ. ಬಿಜೆಪಿಯವರಿಗೆ ಕೇಂದ್ರದಲ್ಲೂ ರಾಜ್ಯದಲ್ಲೂ ಅಧಿಕಾರ ಬಂದ ಮೇಲೆ ನೋಟಿಫಿಕೇಷನ್ ಮಾಡಿಸಲಿಲ್ಲ. ತರಾತುರಿಯಲ್ಲಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದ್ರು. ಟೆಂಡರ್ ಕರಿಯದೇ ಮಾಡಿದರು. ಈ ಭಾಗದ ಮತದಾರರಿಗೆ ಶಾಶ್ವತವಾದಂತಹ ಪರಿಹಾರ ಕೊಡಲಿಲ್ಲ. ಪ್ರಧಾನಮಂತ್ರಿಗಳು ಒಂದೇ ದಿನಕ್ಕೆ ನೋಟಿಫಿಕೇಷನ್ ಮಾಡಿಸಬಹುದಿತ್ತು. ರಾಜ್ಯದ ಜನರು 25 ಸಂಸದರನ್ನು ಗಿಫ್ಟ್ ಕೊಟ್ಟಿದ್ದಾರೆ ಎಂದರು.
ಮಂತ್ರಿ ಮಾಡ್ತೀನಿ ಅನ್ನೋದೂ ಭ್ರಷ್ಟಾಚಾರನೇ ಅಲ್ವ?; ಬಿಜೆಪಿಗೆ ಡಿಕೆಶಿ ಪ್ರಶ್ನೆ
ಮಂತ್ರಿ ಮಾಡೋ ಹುಮ್ಮಸ್ಸು ರೈತರ ಪರ ಯಾಕಿಲ್ಲ?
ಈ ಭಾಗದ ರೈತರು ಉಪ ಚುನಾವಣೆಯಲ್ಲಿ ಸೂಕ್ತ ಉತ್ತರ ಕೊಡಬೇಕು. ಸಿಎಂ ಬಿಎಸ್ ವೈ 18 ಜನರಿಗೆ ಮಂತ್ರಿ ಮಾಡುತ್ತೇನೆ ಎಂದು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಮಂತ್ರಿಗಳನ್ನ ಮಾಡೋ ವಿಚಾರದಲ್ಲಿ ಇರುವ ಹುಮಸ್ಸು ರೈತರ ಹಿತಕ್ಕೆ ಯಾಕೆ ಇಲ್ಲ. ಚುನಾವಣೆ ಸಂದರ್ಭದಲ್ಲಿ ಮಂತ್ರಿ ಮಾಡುತ್ತೇನೆ ಎಂದು ಆಸೆ ತೋರುವುದು ಕೂಡ ಭ್ರಷ್ಟಾಚಾರ. ಈ ವಿಚಾರಕ್ಕೆ ಚುನಾವಣಾ ಆಯೋಗ ಸುಮ್ಮನೆ ಯಾಕೆ ಇದೆ ಅನ್ನೋದು ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಉಪ ಚುನಾವಣಾ ಅಖಾಡಕ್ಕೆ ಟ್ರಬಲ್ ಶೂಟರ್
ನಾನು ನನ್ನ ಕೋರ್ಟ್ ನೋಟಿಸ್ ವಿಚಾರಣೆಯಲ್ಲಿ ಬ್ಯೂಸಿಯಾಗಿದ್ದೇನೆ. ಇನ್ನು ಉಪ ಚುನಾವಣೆಯಲ್ಲಿ ಸಾಕಷ್ಟು ಸಮಯ ಇದೆ. ಹಾಗಾಗಿ ನನ್ನ ಕೆಲಸವನ್ನು ಮುಗಿಸಿಕೊಂಡು ಉಪ ಚುನಾವಣಾ ಅಖಾಡಕ್ಕೆ ಬರುತ್ತೇನೆ ಎಂದರು.
ಡಿ. ಕೆ. ಶಿವಕುಮಾರ್ ಅಭಿಮಾನಿಗಳಿಗೆ ಕುಟುಂಬದವರ ಮನವಿ
"ತಪ್ಪು ಮಾಡಿದರೆ ಶಿಕ್ಷೆಗೆ ಗುರಿಯಾಗಲು ಸಿದ್ಧ"
ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆಯಾಗಲಿ. ನಾನು ಶಿಕ್ಷೆಯನ್ನು ಅನುಭವಿಸಲು ಸಿದ್ಧನಿದ್ದೇನೆ ಎಂದರು. ನಾನು ಕೆಪಿಸಿಸಿ ಆಕ್ಷಾಂಕಿಯಲ್ಲ. ದಿನೇಶ ಗುಂಡುರಾವ್ ಅಧ್ಯಕ್ಷರಾಗಿದ್ದಾರೆ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾರೆ. ನಾನು ಪಕ್ಷದ ಕೆಲಸವನ್ನು ಮಾಡಬೇಕಿದೆ. ನನ್ನ ರಕ್ಷಣೆಯನ್ನು ಮಾಡಿಕೊಳ್ಳಬೇಕಿದೆ ಎಂದರು.