ಸ್ವಾಭಿಮಾನ ಕೆರಳಿಸಿದರು ಎಂದು ಮತ್ತೆ ಮಾತಿನ ಸಮರಕ್ಕಿಳಿದ ಡಿಕೆಶಿ
ಹುಬ್ಬಳ್ಳಿ, ಡಿಸೆಂಬರ್ 2: "ಅನರ್ಹರು ಮತದಾರರ ಸ್ವಾಭಿಮಾನವನ್ನು ಕೆರಳಿಸಿದ್ದಾರೆ. ಯಾರು ಕೂಡ ಇವರಿಗೆ ರಾಜೀನಾಮೆ ಕೊಡಲು ಹೇಳಲಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ರಾಜೀನಾಮೆ ನೀಡಿದ್ದಾರೆ. ಆದರೆ ಇಷ್ಟು ದಿನ ರಾಜಕೀಯದಲ್ಲಿ ಅವರು ಮಾಡಿರುವುದಾರು ಏನು? ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅನರ್ಹರ ವಿರುದ್ಧ ವಾಗ್ದಾಳಿ ನಡೆಸಿದರು.
ಡಿಕೆಶಿಗೆ ಐಟಿ ನೋಟಿಸ್, ಹುಬ್ಬಳ್ಳಿಯಿಂದ ತುರ್ತಾಗಿ ವಾಪಸ್!
ನಗರದಲ್ಲಿ ಇಂದು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, "ಮತದಾರರು ಅನರ್ಹರ ವಿರುದ್ಧ ಮತ ಹಾಕುತ್ತಾರೆ. ಡಿಸೆಂಬರ್ 9ರ ನಂತರ ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಈಗಾಗಲೇ ಮಹಾರಾಷ್ಟ್ರ, ಹರಿಯಾಣದಲ್ಲಿ ಏನಾಗಿದೆ ನೋಡಿದ್ದೇವೆ. ಕರ್ನಾಟಕ ಚುನಾವಣೆಯಲ್ಲಿ ಕೂಡ ಏನು ಬೇಕಾದರೂ ಬದಲಾವಣೆ ಆಗಬಹುದು" ಎಂದರು.
ಜಾರಿ ನಿರ್ದೇಶನಾಲಯದ ವಿಚಾರಣೆ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, "ಐಟಿ ಹಾಗೂ ಇಡಿ ಇಲಾಖೆಗೆ ಸ್ವಲ್ಪ ಸಮಯಾವಕಾಶ ಕೇಳಿದ್ದೇನೆ. ಆದರೆ ಅವರು ಇಂದೇ ಹಾಜರಾಗಬೇಕು ಎನ್ನುತ್ತಿದ್ದಾರೆ. ನನಗೆ ಉಸಿರಾಡಲು ಬಿಡಿ ಎಂದು ಮನವಿ ಮಾಡಿದ್ದೇನೆ. ನಾನೂ ಕಾನೂನಾತ್ಮಕವಾಗಿ ಎಲ್ಲವನ್ನೂ ತಿಳಿದುಕೊಳ್ಳಬೇಕಾಗಿದೆ. ಆದರೆ ಕಾನೂನು ಅವರ ಕೈಯಲ್ಲಿದೆ. ಏನು ಬೇಕಾದರೂ ಮಾಡುತ್ತಾರೆ. ನಾವು ಏನೂ ಮಾಡಲು ಆಗುವುದಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.