ಛಿ, ಇಂಥ ಕಟುಕ ಮಕ್ಕಳೂ ಇರ್ತಾರಾ? ಪುತ್ರಿಯ ಅಮಾನವೀಯತೆಗೆ ತಂದೆ ಸಾವು
Recommended Video
ಹುಬ್ಬಳ್ಳಿ, ಜನವರಿ 08: ಹುಬ್ಬಳ್ಳಿಯಲ್ಲಿ ನಾಲ್ಕು ದಿನದ ಹಿಂದೆ ತಮ್ಮ ಪುತ್ರಿಯಿಂದ ಹೊರದಬ್ಬಿಸಿಕೊಂಡ ವೃದ್ಧ ಸೂರ್ಯಕಾಂತ್(90) ಹೃದಯಾಘಾತದಿಂದ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಜ.7ರಂದು ನಡೆದಿದೆ.
ಲಕ್ಷ್ಮೇಶ್ವರ ಮೂಲದವರಾದ ದಂಪತಿ ದೇವಾಲಯವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇಳಿ ವಯಸ್ಸಿನಲ್ಲಿ ಮಗಳೊಂದಿಗಿರಲು ಬಯಸಿದ 90 ರ ಸೂರ್ಯಕಾಂತ್ ಮತ್ತು ಅವರ ಪತ್ನಿ 80ರ ಕಮಲಮ್ಮರನ್ನು ಸ್ವಂತ ಪುತ್ರಿಯೇ ನಿರ್ದಯವಾಗಿ ಮನೆಯಿಂದ ಆಚೆ ನೂಕಿದ್ದಳು.
ಪಾಲಕರನ್ನು ವೃದ್ಧಾಶ್ರಮಕ್ಕೆ ಕಳಿಸಿದ ಪುತ್ರಿ: ಹುಬ್ಬಳ್ಳಿ ಬಸ್ಟಾಪಿನಲ್ಲಿ ದಂಪತಿಗಳ ಪರದಾಟ
ಇದರಿಂದ ಏನು ಮಾಡಬೇಕೆಂದೇ ತೋಚದ ದಂಪತಿ ಹುಬ್ಬಳ್ಳಿಯ ಬಸ್ಟಾಪಿನಲ್ಲೇ ಎರಡು ದಿನ ತಂಗಿದ್ದರು. ಕೊರೆಯುವ ಚಳಿಯಲ್ಲಿ ಬಸ್ ಸ್ಟಾಪಿನಲ್ಲಿಯೇ ಮಲಗಿದ್ದ ದಂಪತಿಯನ್ನು ಬಸ್ ಮತ್ತು ಆಟೋ ಚಾಲಕರು ವಿಚಾರಿಸಿದಾಗ ಸತ್ಯ ಬೆಳಕಿಗೆ ಬಂದಿತ್ತು. ನಂತರ ಅವರನ್ನು ಸರ್ಕಾರಿ ವೃದ್ಧಾಶ್ರಮವೊಂದಕ್ಕೆ ಸೇರಿಸಲಾಗಿತ್ತಾದರೂ ಮನನೊಂದ ಸೂರ್ಯಕಾಂತ್ ಅವರು ಹೃದಯಾಘಾತದಿಂದ ಮರಣಹೊಂದಿದ್ದಾರೆ.
ಅಂತ್ಯಕ್ರಿಯೆಗೂ ಬಾರದ ಮಗಳು!
ತಂದೆ ಸತ್ತ ಸುದ್ದಿಯನ್ನು ಕೇಳಿದರೂ ಯಾವ ಪ್ರತಿಕ್ರಿಯೆಯನ್ನೂ ನೀಡದ ಮಗಳು, ತಾನು ಅಂತ್ಯಸಂಸ್ಕಾರಕ್ಕೆ ಬರುವುದಿಲ್ಲ ಎಂದಿದ್ದಲ್ಲದೆ, ಶವವನ್ನು ತೆಗೆದುಕೊಂಡು ಹೋಗುವಂತೆ ವೃದ್ಧಾಶ್ರಮದವರು ಮಾಡಿದ ಮನವಿಯನ್ನೂ ತಿರಸ್ಕರಿಸಿ, ನೀವೇ ಅಂತ್ಯ ಕ್ರಿಯೆ ನೆರವೇರಿಸಿ ಎಂದು ವೃದ್ಧಾಶ್ರಮದವರಿಗೆ ಪತ್ರಮುಖೇನ ತಿಳಿಸಿದ್ದಾಳೆ!
ಅನಾಥವಾಯ್ತು ಅರ್ಚಕರ ಶವ!
ಇಳಿ ವಯಸ್ಸಿನವರೆಗೂ ದೇವರ ಸೇವೆ ಮಾಡುತ್ತ, ದೇವಾಲಯವೊಂದರಲ್ಲಿ ಅರ್ಚಕರಾಗಿದ್ದ ಸೂರ್ಯಕಾಂತ್ ಅವರ ಶವ ಅನಾಥವಾಗಿದ್ದು ನಿಜಕ್ಕೂ ವಿಷಾದದ ಸಂಗತಿ. ಅಂತ್ಯ ಸಂಸ್ಕಾರಕ್ಕೆ ಬರಲು ಮಗಳು ಒಲ್ಲೆ ಎಂದಿದ್ದರಿಂದ ಹುಬ್ಬಳ್ಳಿ-ಗದಗ ಬ್ರಾಹ್ಮಣ ಸಮುದಾಯದವರು ಸೇರಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಅನಾರೋಗ್ಯಪೀಡಿತಳೆಂದು ತಾಯಿಯನ್ನು ಟೆರೆಸ್ ನಿಂದ ನೂಕಿ ಕೊಂದ ಮಗ!
ನೆನಪಿಗೆ ಬಂತು ರಾಜ್ ಕೋಟ್ ಘಟನೆ
ಇತ್ತೀಚೆಗೆ ತಾನೇ ಗುಜರಾತಿನ ರಾಜ್ ಕೋಟ್ ನಲ್ಲಿ ಮಗನೊಬ್ಬ, ಬ್ರೈನ್ ಹೆಮರೇಜ್ ನಿಂದ ಬಳಲುತ್ತಿದ್ದ ತನ್ನ ತಾಯಿಯನ್ನು ಟೆರೇಸ್ ನಿಂದ ನೂಕಿ ಸಾಯಿಸಿದ್ದ ಘಟನೆ ನಡೆದಿತ್ತು. ಇದೊಂದು ಸಹಜ ಸಾವು, ಟೆರೇಸ್ ಗೆ ಹೋಗಿದ್ದ ವೃದ್ಧೆ ಆಯತಪ್ಪಿ ಬಿದ್ದಿದ್ದಾರೆಂದು ಮೊದಲು ಅನ್ನಿಸಿತ್ತಾದರೂ, ಪ್ರತಿಯೊಂದು ಕೆಲಸಕ್ಕೂ ಮತ್ತೊಬ್ಬರನ್ನು ಅವಲಂಬಿಸಿರುವ ವೃದ್ಧೆ ಟೆರೆಸ್ ವರೆಗೂ ನಡೆದುಕೊಂಡು ಹೋಗಿದ್ದು ಹೇಗೆ ಎಂದು ಅನುಮಾನಗೊಂಡು, ಅಪಾರ್ಟ್ ಮೆಂಟಿನ ಸಿಸಿಟಿವಿ ಕ್ಯಾಮೆರಾ ಫೂಟೇಜ್ ದಾಖಲೆಗಳನ್ನು ನೋಡಿದಾಗ ತಾಯಿಯನ್ನು ಮಗನೇ ಟೆರೇಸ್ ಗೆ ಎಳೆದೊಯ್ದ ದೃಶ್ಯ ದಾಖಲಾಗಿತ್ತು. ಕಾಲೇಜ್ ವೊಂದರಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿರುವ ಈತ ಸದ್ಯಕ್ಕೆ ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿದ್ದಾನೆ!
ಹೆತ್ತ ಮಕ್ಕಳಲ್ಲಿ ಇಂಥ ಕ್ರೌರ್ಯ ಏಕೆ?
ಒಂಬತ್ತು ತಿಂಗಳು ಹೊತ್ತು, ಹೆತ್ತು, ಕಣ್ಣಲ್ಲಿ ಕಣ್ಣಿಟ್ಟು ಸಾಕಿ, ತಮ್ಮ ನಿದ್ದೆ, ಸುಖ ಎಲ್ಲವನ್ನೂ ತ್ಯಾಗ ಮಾಡಿದ ತಂದೆ-ತಾಯಿಯನ್ನು ಕೊನೆಗಾಲದಲ್ಲಿ ಇಷ್ಟೇಲ್ಲ ಕ್ರೂರವಾಗಿ ನಡೆಸಿಕೊಳ್ಳುವ ಕ್ರೌರ್ಯವೇಕೆ? ನಮ್ಮಪ್ಪ ಅಮ್ಮನನ್ನು ನಾವು ಹೀಗೆ ನಡೆಸಿಕೊಂಡರೆ, ನಮ್ಮ ಇದೇ ಆದರ್ಶ(!)ವನ್ನು ನಮ್ಮ ಮಕ್ಕಳೂ ಪಾಲಿಸೋದಿಲ್ಲವೇ? ಇಂಥ ಮಕ್ಕಳಿಗೆಲ್ಲ ನಮ್ಮ ಧಿಕ್ಕಾರವಿರಲಿ.