ಕೊರೊನಾ ವೈರಸ್; ಉತ್ತರ ಕರ್ನಾಟಕ ಮಂದಿ ಏನಂತಾರೆ?
ಹುಬ್ಬಳ್ಳಿ, ಮಾರ್ಚ್ 20: ಈಗ ಎಲ್ಲಿ ನೋಡಿದರೂ, ಎಲ್ಲಿ ಕೇಳಿದರೂ ಕೊರೊನಾದ್ದೆ ಸುದ್ದಿ. ಚೀನಾ ಅಮೆರಿಕ, ಇರಾನ್, ಇರಾಕ್ ನಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಕೊರೊನಾ ವೈರಸ್ ಬಗ್ಗೆ ನಮ್ಮ ಜನ ಆಗ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ.
ಯಾವಾಗ ಭಾರತಕ್ಕೆ ಕೊರೊನಾ ವೈರಸ್ ಕಾಲಿಟ್ಟಿತೋ ಆಗ ನಮ್ಮ ಜನ ಅದರ ಬಗ್ಗೆ ಮಾತನಾಡಲು ಶುರು ಮಾಡಿದರು. ಕರ್ನಾಟಕದಲ್ಲೂ 15 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಈಗ ಎಲ್ಲಿ ನೋಡಿದರೂ ಕೊರೊನಾ ಬಗ್ಗೆಯೇ ಚರ್ಚೆ.
ಕಲಬುರಗಿ: ಕೊರೊನಾ ಪರೀಕ್ಷೆಗೆ ಶನಿವಾರ ಲ್ಯಾಬ್ ಆರಂಭ
ಸಹಜವಾಗಿ ರೋಗಗಳನ್ನು ನಿರ್ಲಕ್ಷಿಸುವ ಸ್ವಭಾವದವರಾದ ಉತ್ತರ ಕರ್ನಾಟಕದ ಜನರೂ ಸಹ ಮಹಾಮಾರಿ ಕೊರೊನಾಕ್ಕೆ ಬೆಚ್ಚಿ ಬಿದ್ದಿದ್ದಾರೆ. ಪ್ರತಿ ಊರು ಕೇರಿಗಳಲ್ಲೂ ಕೊರೊನಾದ್ದೆ ಸುದ್ದಿ. ಕೊರೊನಾ ನಮ್ಮ ಪಕ್ಕದ ಹಳ್ಳಿಗೇ ಬಂದಿದೆಯಂತೆ, ಅದು ಬಂದರೆ ಯಾರೂ ಉಳಿಯುವುದಿಲ್ಲವಂತೆ, ಔಷಧಿ ಕಂಡು ಹಿಡಿದ್ದಿದ್ದಾರಂತೆ, ಚೀನಾದವರೇ ಈ ವೈರಸ್ ಬಿಟ್ಟಿದ್ದಾರಂತೆ, ನಮ್ಮಲ್ಲಿ ಬೀಸಿಲು ಜಾಸ್ತಿ ರೀ, ನಮಗೇನು ಆಗದಿಲ್ಲಂತರಿ, ಹೀಗೆ ನೂರಾರು ಅಂತೆ ಕಂತೆಗಳು ಉತ್ತರ ಕರ್ನಾಟಕದ ಪ್ರತಿ ಹಳ್ಳಿ ಕಟ್ಟೆಗಳಲ್ಲಿ ಸದ್ದು ಮಾಡುತ್ತಿದೆ.
ಉತ್ತರ ಕರ್ನಾಟಕದ ಜಾತ್ರೆಗಳಿಗೆ ಮಂಕು
ಬೇಸಿಗೆ ಕಾಲದಲ್ಲಿ ಉತ್ತರ ಕರ್ನಾಟಕದ ಎಲ್ಲ ನಗರ, ಪಟ್ಟಣ, ಹಳ್ಳಿಗಳಲ್ಲಿ ಜಾತ್ರೆಗಳು ಸರ್ವೇ ಸಾಮಾನ್ಯ. ಆದರೆ, ಕೊರೊನಾ ವೈರಸ್ ಆತಂಕ ಹುಟ್ಟಿಹಾಕಿರುವುದರಿಂದ ಜಾತ್ರೆಗಳಿಗೆ ಮಂಕು ಕವಿದಿದೆ. ಈಗಾಗಲೇ ಅನೇಕ ಉತ್ತರ ಕರ್ನಾಟಕದ ಪ್ರಸಿದ್ದ ಜಾತ್ರೆಗಳನ್ನು ಅಲ್ಲಿನ ದೇವಾಲಯದವರೇ ರದ್ದು ಮಾಡಿದ್ದಾರೆ. ಸಣ್ಣ ಪುಟ್ಟ ಹಳ್ಳಿಗಳಲ್ಲೂ ಜಾತ್ರೆಗಳನ್ನು ಆಚರಿಸಲು ಸರ್ಕಾರ ಅನುಮತಿ ನೀಡುತ್ತಿಲ್ಲ. ಒಟ್ಟಿನಲ್ಲಿ ಕೊರೊನಾದಿಂದ ಜಾತ್ರೆಗಳ ಮೇಲೆ ಕರಿನೆರಳು ಬಿದ್ದಿದೆ.
ಮದುವೆಗಳಿಗೆ ತಟ್ಟದ ಬಿಸಿ
ಬೇಸಿಗೆಯಲ್ಲೇ ಉತ್ತರ ಕರ್ನಾಟಕದಲ್ಲಿ ಮದುವೆಗಳು ಹೆಚ್ಚು. ಕೊರೊನಾ ಬಗ್ಗೆ ಜನ ಭೀತಿಗೊಂಡಿದ್ದರೂ ಮದುವೆಗಳನ್ನು ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಮದುವೆಗಳು ಎಂದಿನಂತೆ ಸಹಜವಾಗಿ ನಡೆಯುತ್ತಿರುವುದು ಕಂಡು ಬಂದಿದೆ. ಅದರಲ್ಲೂ ಹಳ್ಳಿಗಳಲ್ಲಿ ನಡೆಯುವ ಮದುವೆಗಳಿಗೆ ಕೊರೊನಾ ಭಯ ಅವರಿಸಿಕೊಂಡಿಲ್ಲ.
ಸಾಮೂಹಿಕ ಮದುವೆಗಳಿಗೆ ನಿರ್ಭಂಧ
ಉತ್ತರ ಕರ್ನಾಟಕದಲ್ಲಿ ಅಲ್ಲಲ್ಲಿ ಸಾಮೂಹಿಕ ಮದುವೆಗಳು ನಡೆಯುತ್ತಿವೆ. ಇಲ್ಲಿನ ಸಾಮೂಹಿಕ ಮದುವೆಯಲ್ಲಿ ಸಾವಿರಾರು, ಲಕ್ಷಾಂತರ ಜನ ಸೇರುವುದು ವಾಡಿಕೆ. ಆದರೆ, ಸರ್ಕಾರ ಕೊರೊನಾ ಹಿನ್ನೆಲೆಯಲ್ಲಿ ಸಾಮೂಹಿಕ ಮದುವೆಗಳಿಗೆ ಕಡಿವಾಣ ಹಾಕಿದೆ. ಈಗಾಗಲೇ ನಿಶ್ಚಯವಾಗಿದ್ದ ಸಾಮೂಹಿಕ ಮದುವೆಗಳಲ್ಲಿ ಜನರು ಸೇರುವುದಕ್ಕೆ ನಿರ್ಭಂಧ ವಿಧಿಸಲಾಗುತ್ತಿದೆ.
ಉತ್ತರ ಕರ್ನಾಟಕದಲ್ಲಿ ಮೂವರಿಗೆ ಕೊರೊನಾ
ಭಾರತದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಕೊರೊನಾ ಸಂಬಂಧ ಮೊದಲ ಸಾವು ಉತ್ತರ ಕರ್ನಾಟಕದಲ್ಲೇ ಸಂಭವಿಸಿತು. ಕಲಬುರಗಿಯಲ್ಲಿ ಕೊರೊನಾಕ್ಕೆ ತುತ್ತಾಗಿ ವೃದ್ದನೊಬ್ಬ ಮೃತಪಟ್ಟ. ಸದ್ಯ ಕಲಬುರಗಿಯಲ್ಲಿ ಮೂರು ಕೊರೊನಾ ಪ್ರಕರಣಗಳು ದೃಢಪಟ್ಟಿರುವುದು ಬಿಟ್ಟರೇ ಮತ್ತೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಕಲಬುರಗಿ ಹೊರತುಪಡಿಸಿದರೆ ಕೊರೊನಾ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ದೈನಂದಿನ ಜನಜೀವನದ ಮೇಲೆ ಕೊರೊನಾ ಅಷ್ಟೊಂದು ಪರಿಣಾಮ ಬೀರಿಲ್ಲ. ಹದಿನಾಲ್ಕು ಜಿಲ್ಲೆಗಳಲ್ಲಿ ಇದುವರೆಗೆ 763 ಜನರ ಮೇಲೆ ನಿಗಾ ವಹಿಸಲಾಗಿದೆ.