'ಯಡಿಯೂರಪ್ಪ ಆಡಿಯೋ ರೆಕಾರ್ಡ್ ಮಾಡಿದ್ದು ಯಾರೆಂದು ಕಾಂಗ್ರೆಸ್ ತಿಳಿಸಲಿ'
ಹುಬ್ಬಳ್ಳಿ, ನವೆಂಬರ್ 3: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಿಯೋ ರೆಕಾರ್ಡ್ ಮಾಡಿದ್ದು ಯಾರು ಎಂಬುದನ್ನು ಕಾಂಗ್ರೆಸ್ ನವರು ಮೊದಲು ಹೇಳಲಿ. ಆಮೇಲೆ ಟೀಕೆ ಮಾಡಲಿ ಎಂದು ಸಚಿವ- ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಭಾನುವಾರ ಹುಬ್ಬಳ್ಳಿಯಲ್ಲಿ ಸವಾಲು ಎಸೆದಿದ್ದಾರೆ.
ಹುಬ್ಬಳ್ಳಿಯಲ್ಲಿ ಅವರು ಮಾಧ್ಯಮದವರ ಜತೆಗೆ ಮಾತನಾಡಿ, ಯಡಿಯೂರಪ್ಪ ಅವರ ಆಡಿಯೋದ ಬ್ರಹ್ಮ ಯಾರು ಎಂಬುದು ಮೊದಲು ಹೊರಗೆ ಬರಬೇಕು. ಈ ರೀತಿ ಸುಳ್ಳು ಅಪಪ್ರಚಾರ ಮಾಡುವುದು ತಪ್ಪು. ಬಿಜೆಪಿ ಸರ್ಕಾರ ಹಾಗೂ ಯಡಿಯೂರಪ್ಪ ಅವರ ಮೇಲೆ ನಿರಂತರವಾಗಿ ಸುಳ್ಳು ಸುದ್ದಿ ಹಬ್ಬಿ ಹಬ್ಬಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಟೀಕೆಗಳ ಬಳಿಕ ಸಚಿವ ಜಗದೀಶ್ ಶೆಟ್ಟರ್ ಚೀನಾ ಪ್ರವಾಸ ರದ್ದು
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಬಗ್ಗೆ ಮಾತನಾಡಲು ಯಾವುದೇ ವಿಷಯ ಇಲ್ಲ. ಹೀಗಾಗಿ ಈ ರೀತಿ ಸುಳ್ಳು ಆಡಿಯೋ- ವಿಡಿಯೋ ವಿಚಾರ ಇಟ್ಟುಕೊಂಡು ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಈ ವಿಚಾರವಾಗಿ ಜನರು ಸ್ಪಂದಿಸುವುದಿಲ್ಲ. ಅಲ್ಲದೇ ಕಾಂಗ್ರೆಸ್ ಅಧೋಗತಿಗೆ ಹೋಗುವುದು ಪಕ್ಕಾ ಎಂದು ಹರಿಹಾಯ್ದಿದ್ದಾರೆ.
ಕೋರ್ ಕಮಿಟಿಯಲ್ಲಿ ಹಲವು ವಿಚಾರಗಳು ಚರ್ಚೆಗೆ ಬರುತ್ತವೆ. ಮೊದಲು ಯಾರು ವಿಡಿಯೋ ರೆಕಾರ್ಡ್ ಮಾಡಿದ್ದಾರೆಂಬುದು ಬಹಿರಂಗವಾಗಲಿ ಎಂದು ಜಗದೀಶ್ ಶೆಟ್ಟರ್ ಆಗ್ರಹಿಸಿದರು.
ಕಾಂಗ್ರೆಸ್ ಸುಳ್ಳು ಆರೋಪ ಮಾಡಿ, ಸುಪ್ರೀಂಕೋರ್ಟ್ ಮೆಟ್ಟಿಲೇರಲು ಮುಂದಾಗಿದೆ. ಕಾಂಗ್ರೆಸ್ ಕಾಲು ಕೆದರಿಕೊಂಡು ಜಗಳ ಮಾಡುತ್ತಿದೆ. ಕಾನೂನು ಪಂಡಿತರಾಗಿರುವ ಸಿದ್ದರಾಮಯ್ಯನವರಿಗೆ ಗೊತ್ತಿದೆ, ಸುಪ್ರೀಂಕೋರ್ಟ್ ನಲ್ಲಿ ಆಡಿಯೋ- ವಿಡಿಯೋ ಸಾಕ್ಷಿ ನಡೆಯಲ್ಲ ಎಂದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ ಆಡಿಯೋ ವಿವಾದ; ಬಿಜೆಪಿಯ ಸ್ಪಷ್ಟನೆಗಳು
ಸದ್ಯಕ್ಕೆ ಸರ್ಕಾರ ಬೀಳಿಸಲು ಹೋಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಅವರು ಬಿಜೆಪಿಗೆ ಬೆಂಬಲ ಕೊಡುವ ಕುರಿತು ಅಧಿಕೃತವಾಗಿ ಎಲ್ಲೂ ಹೇಳಿಲ್ಲ. ಅವರ ಹೇಳಿಕೆಯಿಂದ ಬೆಂಬಲ ನೀಡುತ್ತಾರೆಂದು ತಿಳಿಯಲ್ಲ. ಇಬ್ಬರು ಕೈ ಕುಲುಕಿರುವ ವಿಚಾರವಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಉತ್ತರ ನೀಡಬೇಕು ಎಂದಿದ್ದಾರೆ.
ಈ ಬಗ್ಗೆ ಜೆಡಿಎಸ್ ಮುಖಂಡ ದೇವೇಗೌಡರಿಂದ ಅಧಿಕೃತವಾಗಿ ಹೇಳಿಕೆ ಬರಲಿ. ಆಗ ಅದಕ್ಕೊಂದು ಗಾಂಭೀರ್ಯ ಇರುತ್ತದೆ. ಕುಮಾರಸ್ವಾಮಿ ದಿನಕ್ಕೊಂದು ಹೇಳಿಕೆ ಕೊಟ್ಟರೆ ನಾವು ಮೂರ್ಖರಾಗಬೇಕಾ ಎಂದು ಶೆಟ್ಟರ್ ತಿರುಗೇಟು ನೀಡಿದ್ದಾರೆ.