ಸಿಡಿ ಪ್ರಕರಣದಲ್ಲಿ ನನ್ನ ಹೆಸರು ತರೋದು ಏಕೆ: ಲಕ್ಷ್ಮೀ ಹೆಬ್ಬಾಳ್ಕರ್
ಹುಬ್ಬಳ್ಳಿ, ಮಾರ್ಚ್ 6: ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣದಲ್ಲಿ ತಮ್ಮ ಹೆಸರು ಎಳೆದು ತರುತ್ತಿರುವುದಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ಬಗ್ಗೆ ತಾವು ಏನೂ ಮಾತನಾಡುವುದಿಲ್ಲ. ತನಿಖೆ ಬಳಿಕ ಸತ್ಯ ಬಹಿರಂಗವಾಗಲಿದೆ ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, 'ಸಿಡಿ ವಿಚಾರದಲ್ಲಿ ನನ್ನ ಹೆಸರನ್ನು ಏಕೆ ಎಳೆದು ತರುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ರಾಜಕಾರಣಿಗಳು ಮತ್ತೊಬ್ಬರಿಗೆ ಉದಾಹರಣೆ ಸೃಷ್ಟಿಸಬೇಕು. ಸಿಡಿ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ' ಎಂದರು.
ಸತೀಶ್ ಜಾರಕಿಹೊಳಿ ಅಂದು ಹೇಳಿದ್ದ ಆ ಒಂದು 'ವಸ್ತು' ಇದೇ ಏನು?
ಗೋಕಾಕ್ನಲ್ಲಿ ನಡೆದ ಪ್ರತಿಭಟನೆ ವೇಳೆ ರಮೇಶ್ ಜಾರಕಿಹೊಳಿ ಅವರ ಬೆಂಬಲಿಗರ ಗುಂಪು ತಮ್ಮ ವಿರುದ್ಧ ಘೋಷಣೆ ಕೂಗಿದ್ದರ ಕುರಿತಾದ ಪ್ರಶ್ನೆಗೆ ಅವರು, ಇದು ನನಗೆ ಸಂಬಂಧಿಸದ ವಿಚಾರ ಎಂದು ಹೇಳಿದರು.
ಗೋಕಾಕ್ನಲ್ಲಿ ರಮೇಶ್ ಜಾರಕಿಹೊಳಿ ಬೆಂಬಲಿಗರ ಪ್ರತಿಭಟನೆ ಜೋರಾಗಿದ್ದು, ದೂರು ನೀಡಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರ ಅಣಕು ಶವಯಾತ್ರೆ ನಡೆಸಿ, ಪ್ರತಿಕೃತಿ ದಹನ ಮಾಡಿದರು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದರು. ನೂರಾರು ಮಹಿಳೆಯರು ಕೂಡ ರಮೇಶ್ ಜಾರಕಿಹೊಳಿ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಜನರ ಬಾಯಲ್ಲಿ ರಾಜಕಾರಣಗಳೆಲ್ಲಾ ಲಫಂಗರು ಎಂದು ಹೇಳಿಸಿಕೊಳ್ಳುವ ಹಾಗಾಗಿದೆ: ಸಿದ್ದರಾಮಯ್ಯ
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು, ಪ್ರಕರಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಕೈವಾಡವಿದೆ ಎಂದು ಆರೋಪಿಸಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.