ಆರ್ಎಸ್ಎಸ್ ಟೀಕಿಸಿಯೇ ಹಿಂದೆ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ: ಬೊಮ್ಮಾಯಿ
ಹುಬ್ಬಳ್ಳಿ, ಜೂನ್ 5: "ಶಿಕ್ಷಕರ ಕ್ಷೇತ್ರದ ದಂತಕಥೆ ಎಂದು ಬಿಂಬಿತವಾಗಿರುವ ಬಸವರಾಜ ಹೊರಟ್ಟಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದು, ಬಿಜೆಪಿ ಶಕ್ತಿ ಮತ್ತು ಬಸವರಾಜ ಹೊರಟ್ಟಿ ಶಕ್ತಿ ಒಟ್ಟಾಗಿ ಸೇರಿಕೊಂಡಿವೆ. ಹೀಗಾಗಿ ಈ ಬಾರಿ ಹೊರಟ್ಟಿ ದಾಖಲೆ ಮತಗಳಿಂದ ಜಯಗಳಿಸಲಿದ್ದಾರೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿ ನಗರದಲ್ಲಿ ಭಾನುವಾರ ಶಿಕ್ಷಕರೊಂದಿಗೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, "ಬಸವರಾಜ ಹೊರಟ್ಟಿ ಅವರು ಶಿಕ್ಷಕರ ವಿಷಯದಲ್ಲಿ ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಶಿಕ್ಷಕರ ಬಗ್ಗೆ ಅಪಾರವಾದ ಶ್ರದ್ದೆ, ಕಾಳಜಿ ಹೊಂದಿದ್ದಾರೆ. ಅವರು ಏಳು ಬಾರಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ ಎಂದರೆ ಮುಂದಿನ ಜನಾಂಗದವರು ಯಾರು ನಂಬಲು ಸಾಧ್ಯವಿಲ್ಲ. ಬಸವರಾಜ ಹೊರಟ್ಟಿ, ಶಿಕ್ಷಕರ ಕ್ಷೇತ್ರ ಮತ್ತು ಶಿಕ್ಷಕರ ಕುರಿತು ಯಾರಾದರೂ ಪರಿಣಿತರು ಪಿಎಚ್ಡಿ ಮಾಡಬೇಕೆಂಬ ಹಂಬಲ ಹೊಂದಿದ್ದೇನೆ" ಎಂದರು.
ಪಠ್ಯಪುಸ್ತಕ ಪರಿಷ್ಕರಣೆ ವಿವಾದ: 11 ಆರೋಪಗಳಿಗೆ ಬೊಮ್ಮಾಯಿ ಸಮರ್ಥನೆಗಳು!
"ಬಸವರಾಜ ಹೊರಟ್ಟಿ ವಿವಿಧ ಪಕ್ಷದಿಂದ ಸ್ಪರ್ಧೆ ಮಾಡಿದರು ಸಹಿತ ಯಾವುದೇ ಪಕ್ಷಕ್ಕೆ ಅಂಟಿಕೊಳ್ಳದೇ ತಮ್ಮ ಜವಾಬ್ದಾರಿ ನಿಭಾಯಿಸಿದ್ದಾರೆ. ಇದೀಗ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದೀಗ ನರೇಂದ್ರ ಮೋದಿ ನೇತೃತ್ವದಲ್ಲಿ ರಾಷ್ಟ್ರದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ಅದಕ್ಕೆ ಪ್ರತಿರೋಧವು ಇದೆ. ಆದರೆ ಯಾವುದೇ ಒಂದು ಹೊಸ ಬದಲಾವಣೆ ಆಗಬೇಕೆಂದರೆ ಅದಕ್ಕೆ ವಿರೋಧ ಇಲ್ಲದೇ ಅಮೂಲಾಗ್ರವಾಗಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಈ ದೃಷ್ಟಿಯಿಂದ ಶಿಕ್ಷಣ ಮತ್ತು ಶಿಕ್ಷಕರ ನಡುವೆ ಸಮನ್ವಯ ಸಾಧಿಸಿ ಉತ್ತಮ ಮಕ್ಕಳ ಭವಿಷ್ಯ ನಿರ್ಮಾಣ ಮಾಡಬೇಕೆಂಬ ಕಾರಣಕ್ಕೆ ಅವರು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ಎಲ್ಲ ಶಿಕ್ಷಕರು ಮತ್ತೊಮ್ಮೆ ಅವರ ಬಲವನ್ನು ಹೆಚ್ಚಿಸಬೇಕು. ಅವರಿಗೆ ಹೆಚ್ಚು ಮತ ನೀಡಿ ಗೆಲ್ಲಿಸಬೇಕೆಂದು" ಮುಖ್ಯಮಂತ್ರಿಗಳು ಮನವಿ ಮಾಡಿದರು.
ಹೊರಟ್ಟಿ ಗೆಲುವಲ್ಲಿ ಶಿಕ್ಷಕರ ಭವಿಷ್ಯದ ಸುರಕ್ಷತೆ
"ಬಸವರಾಜ ಹೊರಟ್ಟಿ ಎಂದಿನಂತೆ ಗೆದ್ದು ಬರುತ್ತಾರೆ ಎಂದು ಮೈ ಮರೆಯಬಾರದು. ಎಲ್ಲಾ ಶಿಕ್ಷಕರು ಅವರ ಗೆಲುವಿನಲ್ಲಿ ಶ್ರಮಿಸಬೇಕು. ಅವರ ಗೆಲುವು ಎಲ್ಲಾ ಶಿಕ್ಷಕರ ಗೆಲುವು. ರಾಷ್ಟ್ರೀಯ ಪಕ್ಷದಲ್ಲಿ, ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ಪಕ್ಷ ಮಾಡುತ್ತಿರುವ ಕೆಲಸವನ್ನು ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರ ಬಳಸಿಕೊಳ್ಳಬೇಕು. ಅವರ ಗೆಲುವು ನಿಮ್ಮ ಕೈಯಲ್ಲಿದೆ, ಹೊರಟ್ಟಿಯವರ ಗೆಲುವು ನಿಮ್ಮೆಲ್ಲರ ಸೇವಾ ಭವಿಷ್ಯತೆ ಸುರಕ್ಷತೆ ಅಡಗಿದೆ. ಅವರು ಶಿಕ್ಷಕರ ಸಲುವಾಗಿ ಸಾಕಷ್ಟು ಶ್ರಮಿಸುತ್ತಾರೆ. ತಮ್ಮ ಆರೋಗ್ಯವನ್ನು ಲೆಕ್ಕಿಸದೇ ದುಡಿಯುತ್ತಾರೆ. ಅಂತಹವರನ್ನು ಗೆಲ್ಲಿಸಬೇಕು" ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಗೆಲುವು ಯಾರದೆಂದು ಎಲ್ಲರಿಗೂ ಗೊತ್ತು
"ಶಿಕ್ಷಕರ ಬಗ್ಗೆ ಕಾಳಜಿ ಇರುವಂತಹ ಬಸವರಾಜ ಹೊರಟ್ಟಿ ಈ ವರ್ಷವೂ ಗೆಲ್ಲುತ್ತಾರೆ ಎನ್ನುವುದು ವಿರೋಧ ಪಕ್ಷಗಳಿಗೂ ಗೊತ್ತಿದೆ. ಈ ಕ್ಷೇತ್ರಕ್ಕೆ ಸಂಬಂಧಪಡದವರು ಚುನಾವಣೆಯಿಲ್ಲಿದ್ದಾರೆ. ಹೊರಟ್ಟಿಯವರ ಗೆಲ್ಲುತ್ತಾರೆ ಎನ್ನುವುದು ಎಲ್ಲರಿಗೂ ಅರಿವಿದೆ. ಚುನಾವಣೆಗೋಸ್ಕರ ಮಾತ್ರ ಪ್ರಚಾರ ಮಾಡುತ್ತಿದ್ದಾರೆ. ನಾಲ್ಕು ದಶಕಗಳ ಕಾಲ ಈ ಕ್ಷೇತ್ರಕ್ಕೆ ದುಡಿದಿರುವ ಬಸವರಾಜ ಹೊರಟ್ಟಿರನ್ನು ಜಯಗಳಿಸಲು ಶ್ರಮಿಸಿ" ಎಂದು ಕರೆ ಕೊಟ್ಟರು.
ಹಿಂದೆ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್
ಕಾರ್ಯಕ್ರಮದ ನಂತರ ಕಾಂಗ್ರೆಸ್ ಆರ್ಎಸ್ಎಸ್ ಸಂಘಟನೆಯನ್ನು ಟೀಕಿಸುತ್ತಿರುವುದರ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, "ರಾಜಕೀಯ ಉದ್ದೇಶಕ್ಕಾಗಿ ಈಗಾಗಲೇ ಒಮ್ಮೆ ಆರ್ಎಸ್ಎಸ್ ವಿರುದ್ಧ ಟೀಕೆ ಮಾಡಿ ಮಾಡಿ ಕಾಂಗ್ರೆಸ್ ದೇಶದಲ್ಲೆಲ್ಲಾ ಅಧಿಕಾರ ಕಳೆದುಕೊಂಡಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತೆ ಆರ್ಎಸ್ಎಸ್ ವಿರುದ್ಧ ಟೀಕೆ ಮುಂದುವರಿಸಿದ್ದಾರೆ, ಇಲ್ಲೂ ಕೂಡ ಅದೇ ಗತಿ ಎದುರಾಗಲಿದೆ. ಆರ್ಎಸ್ಎಸ್ 75 ವರ್ಷಗಳಿಂದ ದೇಶದ ಜನರ ಸೇವೆ ಮಾಡುತ್ತಿದೆ. ಜನ ಸಂಕಷ್ಟದಲ್ಲಿದ್ದಾಗ ಮೊದಲು ನೆರವಿಗೆ ಬರುವುದೇ ಆರ್ಎಸ್ಎಸ್. ಕಾಂಗ್ರೆಸ್ ಜನರನ್ನು ತಪ್ಪುದಾರಿಗೆ ಎಳೆಯಲು ಪ್ರಯತ್ನಿಸುತ್ತಿದೆ" ಎಂದರು.
ರಾಜ್ಯಸಭೆ ಕ್ರಾಸ್ ವೋಟಿಂಗ್
ರಾಜ್ಯ ಸಭೆ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಬಗ್ಗೆ ಮಾತನಾಡಿ, "ಅದರ ಬಗ್ಗೆ ಗೊತ್ತಾಗಬೇಕಾದರೆ 10ನೇ ತಾರೀಖಿನವರೆಗೂ ಕಾದು ನೋಡಿ" ಎಂದರು.
"ವಿರೋಧ ಪಕ್ಷದವರು ಪಠ್ಯ ಪುಸ್ತಕದ ವಿಚಾರದಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಆದರೆ ಅದಕ್ಕೆಲ್ಲಾ ನಮ್ಮ ಶಿಕ್ಷಣ ಸಚಿವರು ಈಗಾಗಲೇ ಉತ್ತರ ನೀಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅಮೂಲ್ಯ ಬದಲಾವಣೆ ತರುತ್ತಿದ್ದೇವೆ" ಎಂದು ಮುಖ್ಯಮಂತ್ರಿಗಳು ತಿಳಿಸಿದರು.