ಬಿಜೆಪಿಗೆ ಗೆಲುವಿನ ಆಸೆ ತೋರಿಸಿ ನಿರಾಸೆ ಮೂಡಿಸಿದ ಹೊಸಕೋಟೆ ಮತದಾರ
ಹೊಸಕೋಟೆ, ಮೇ 15: ಹೊಸಕೋಟೆಯಲ್ಲಿ ಕೊನೆಯ ಎರಡು ಸುತ್ತಿನ ವರೆಗೆ ಬಿಜೆಪಿ ಪಾಳಯದಲ್ಲಿ ಆಸೆ ಮೂಡಿಸಿದ್ದ ವಿಜಯ ಲಕ್ಷ್ಮಿ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಕೈಹಿಡಿದಿದ್ದಾಳೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕೊನೆಯ ಎರಡು ಸುತ್ತಿನ ವರೆಗೂ ಬಿಜೆಪಿಯ ಶರತ್ ಬಚ್ಚೇಗೌಡ ಅವರು ಮುನ್ನಡೆಯಲ್ಲಿದ್ದರು, ಒಂದು ಹಂತದಲ್ಲಂತೂ ಮುನ್ನಡೆ 6000 ತಲುಪಿತ್ತು ಆದರೆ ಮತ ಎಣಿಕೆ ಮುಂದೆ ಸಾಗಿದಂತೆ ಮುನ್ನಡೆ ಪ್ರಮಾಣ ಕಡಿಮೆ ಆಗುತ್ತಾ ಬಂತು.
ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ
ಕೊನೆಯ ಎರಡು ಸುತ್ತಿನವರೆಗೆ ಬಿಜೆಪಿಯೇ ಮುನ್ನಡೆಯಲ್ಲಿತ್ತು ಆದರೆ ಕೊನೆಯ ಎರಡು ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂಟಿಬಿ ನಾಗರಾಜು ಅವರ ಪರವಾದ ಮತಗಳು ತೀವ್ರವಾಗಿ ಏರಿಕೆ ಆದವು ಆ ಕಾರಣ ಎಂಟಿಬಿ ನಾಗರಾಜು ಅವರು 5000 ಮತಗಳಿಂದ ಗೆಲುವು ಸಾಧಿಸಿದರು.
ಬಚ್ಚೇಗೌಡ ಅವರು ಈ ಬಾರಿ ತಮ್ಮ ಮಗ ಶರತ್ ಬಚ್ಚೇಗೌಡ ಅವರಿಗೆ ಸೀಟು ಕೊಡಿಸುವಲ್ಲಿ ಯಶಸ್ವಿ ಆಗಿದ್ದರು, ಶರತ್ ಬಚ್ಚೇಗೌಡ ಅವರು ಮೊದಲ ಬಾರಿಗೆ ಸ್ಪರ್ಧಿಸಿದ್ದರೂ ಕೂಡ ಉತ್ತಮ ಪೈಪೋಟಿಯನ್ನೇ ನೀಡಿದ್ದಾರೆ.
ಬಚ್ಚೇಗೌಡ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿ ವೀರಪ್ಪ ಮೋಯ್ಲಿ ವಿರುದ್ಧ ಸೋಲು ಕಂಡಿದ್ದರು. ಈಗ ಶರತ್ ಬಚ್ಚೇಗೌಡ ಅವರೂ ಕೂಡ ಸೋಲನ್ನಪ್ಪಿದ್ದಾರೆ.
ಹೊಸಕೋಟೆಯಲ್ಲಿ ಗೆಲುವು ಸಾಧಿಸಿರುವ ಎಂಟಿಬಿ ನಾಗರಾಜು ಅವರು ಕಾಂಗ್ರೆಸ್ನ ಅತ್ಯಂತ ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ. ಅಲ್ಲದೆ ಅವರು ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು ಸಿದ್ದರಾಮಯ್ಯ ಅವರ ಪರಮಾಪ್ತರಾಗಿದ್ದಾರೆ. ಚುನಾವಣೆಗೆ ಕೆಲವು ದಿನ ಇದ್ದಾಗ ಇವರ ಆಪ್ತರ ಮೇಲೆ ಐಟಿ ದಾಳಿ ಸಹ ಆಗಿತ್ತು.