ಧರಂಸಿಂಗ್ ಅಗಲಿಕೆಗೆ ಮುಖ್ಯಮಂತ್ರಿ, ಸಚಿವ ವಿನಯ್ ಕುಲಕರ್ಣಿ ಕಂಬನಿ
ಹುಬ್ಬಳ್ಳಿ, ಜುಲೈ 27: "ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಒಬ್ಬ ಅಜಾತ ಶತ್ರು. ತಮ್ಮ ೪೦-೫೦ ವರ್ಷಗಳ ರಾಜಕೀಯ ಬದುಕಿನಲ್ಲಿ ಯಾರ ವೈರತ್ವವನ್ನೂ ಕಟ್ಟಿಕೊಂಡವರಲ್ಲ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಎನ್.ಧರಂ ಸಿಂಗ್ ನಿಧನ
ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲು ಗುರುವಾರ ಹಾವೇರಿ ಜಿಲ್ಲೆಯ ಪ್ರವಾಸದಲ್ಲಿದ್ದ ಅವರು ಮಾಜಿ ಮುಖ್ಯಮಂತ್ರಿಯ ಅಕಾಲಿಕ ಮರಣದಿಂದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿದರು. ನಂತರ ಹಾವೇರಿ ತಾಲೂಕಿನ ದೇವಿಹೊಸೂರು ತೋಟಗಾರಿಕಾ ಕಾಲೇಜಿನಲ್ಲಿ ಎರಡು ನಿಮಿಷ ಮೌನ ಆಚರಿಸಿ ಮಾಜಿ ಮುಖ್ಯಮಂತ್ರಿ ನಿಧನಕ್ಕೆ ಕಂಬನಿ ಮಿಡಿದರು.
ಮುಖ್ಯಮಂತ್ರಿಯಾಗಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದ ಅವರು ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಅವರ ಸಾವಿನಿಂದ ರಾಜ್ಯಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅಪಾರ ನಷ್ಟವಾಗಿದೆ. ಅವರ ಕುಟುಂಬಕ್ಕೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದರು.
ನಂತರ ಹುಬ್ಬಳ್ಳಿ ಮೂಲಕ ಮುಖ್ಯಮಂತ್ರಿಗಳು ಬೆಂಗಳೂರಿಗೆ ಬಂದು ಧರಂ ಸಿಂಗ್ ಅವರ ಅಂತಿಮ ದರ್ಶನ ಪಡೆದರು.
ಮಾಜಿ ಸಿಎಂ ಶೆಟ್ಟರ್ ಸಂತಾಪ
ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಸಾವು ಎಲ್ಲರಿಗೂ ಶಾಕ್ ನೀಡಿದೆ. ನಮಗೂ ಅವರಿಗೂ ಆತ್ಮೀಯ ಸಂಬಂಧವಿತ್ತು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಗುರುವಾರ ಮಾತನಾಡಿದ ಅವರು, ಧರ್ಮಸಿಂಗ್ ಒಬ್ಬ ಸರಳ, ಸಜ್ಜನಿಕೆಯ ವ್ಯಕ್ತಿ. ಅಹಂಕಾರ ಇಲ್ಲದ ವ್ಯಕ್ತಿತ್ವ ಹೊಂದಿರುವ ಅವರ ಅಗಲಿಕೆ ರಾಜ್ಯ ರಾಜಕಾರಣಕ್ಕೆ ಹಾನಿ ತಂದಿದೆ. ಧರ್ಂ ಸಿಂಗ್ ಬೀದರ್ ಜಿಲ್ಲೆಯಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿದ ನಾಯಕರಾಗಿದ್ದರು ಎಂದು ಶೆಟ್ಟರ್ ನೆನಪಿಸಿಕೊಂಡರು.
ವಿನಯ್ ಕುಲಕರ್ಣಿ ಶೋಕ ಸಂದೇಶ
ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ನಿಧನಕ್ಕೆ ಗಣಿ, ಭೂವಿಜ್ಞಾನ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಮೃತರ ಅಗಲಿಕೆಯ ನೋವನ್ನು ಭರಿಸಲು ಅವರ ಕುಟುಂಬದವರಿಗೆ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಸಚಿವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.