ಗಾಂಧಿ ಬಗ್ಗೆ ಅಮಿತ್ ಶಾ ಹೇಳಿಕೆಗೆ ಸಿಎಂ ಸಿದ್ದು ಫುಲ್ ಗರಂ
ಹುಬ್ಬಳ್ಳಿ, ಜೂನ್ 11: ಗಾಂಧೀಜಿ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಗುರವಾಗಿ ಮಾತನಾಡಿದ್ದು, ಇದು ದೇಶಕ್ಕೆ ಮಾಡಿದ ಅಪಮಾನ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಧೀಜಿಯನ್ನು ದೇಶವೇ ಮಹಾತ್ಮ ಎಂದು ಒಪ್ಪಿಕೊಂಡಿದೆ. ಆದರೂ ಅವರನ್ನು ಚತುರ ಬನಿಯಾ ಎಂದು ಕರೆದಿರುವುದು ಬಿಜೆಪಿಯ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕುಟುಕಿದರು.
[ಏನಿದು ಕಾಂಗ್ರೆಸ್ ಆಕ್ರೋಶ: ಮಹಾತ್ಮ ಗಾಂಧಿ ಬಗ್ಗೆ ಅಮಿತ್ ಶಾ ಹೇಳಿದ್ದೇನು]
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ ವಾದ್ರಾ ಸಂಸ್ಥೆಯಿಂದ ಭೂ ಕಬಳಿಕೆಯಾಗಿದೆ ಎಂದು ಬಿಜೆಪಿಯ ರಮೇಶ್ ಎಂಬುವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ರಮೇಶ್ ಅವರು ಈ ಹಿಂದೆಯೂ ಇಂಥ ಆರೋಪಗಳನ್ನು ಮಾಡಿದ್ದರು. ಭೂ ಕಬಳಿಕೆಗೆ ಸಂಬಂಧಿಸಿದ ದಾಖಲೆಗಳಿದ್ದರೆ ನೀಡಲಿ, ನಂತರ ತನಿಖೆಗೆ ಆದೇಶಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
ಗೋ ಹತ್ಯೆ ನಿಯಂತ್ರಣ ಕಾಯ್ದೆ ವಿರೋಧಿಸಿ ಕೇಂದ್ರಕ್ಕೆ ಪತ್ರ ಬರೆದಿರುವ ಕ್ರಮವನ್ನು ಸಮರ್ಥಿಸಿಕೊಂಡ ಸಿಎಂ, ಆಹಾರ ಪದ್ಧತಿ ವೈಯಕ್ತಿಕ ಹಕ್ಕು. ಯಾವುದೇ ಆಹಾರ ಪದ್ಧತಿ ಮೇಲೆ ಯಾರೂ ನಿಯಂತ್ರಣ ಹೇರಬಾರದು. ಈ ಕಾರಣದಿಂದ ಕೇಂದ್ರದ ಗೋ ಹತ್ಯೆ ನಿಯಂತ್ರಣ ಕಾಯ್ದೆ ಅಸಮ್ಮತಿ ಸೂಚಿಸಿ ಪತ್ರ ಬರೆದಿದ್ದೇನೆ ಎಂದರು.
[ಗಾಂಧಿ ಹಂತಕ ಗೋಡ್ಸೆ ಬಿಟ್ಟು ಮತ್ತೊಬ್ಬನಿದ್ದಾನೆ: 'ಸುಪ್ರೀಂ'ನಲ್ಲಿ ದಾವೆ]
ವಯಸ್ಸಾದ ಹಾಗೂ ರೋಗಪೀಡಿತ ಹಸುಗಳನ್ನು ಸಾಕುವುದು ಯಾರ ಹೊಣೆ ಎಂದು ಪ್ರಶ್ನಿಸಿದ ಅವರು, ಕಾಯ್ದೆ ಮಾಡುವ ಮುನ್ನ ಇಂಥ ಅಂಶಗಳನ್ನು ಪರಿಗಣಿಸಬೇಕು ಎಂದು ಹೇಳಿದರು.
ಜಿಎಸ್ ಟಿ ಕೌನ್ಸಿಲ್ ಸಭೆಗೆ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರನ್ನು ಕಳುಹಿಸಲು ನಿರ್ಧರಿಸಲಾಗಿದೆ ಎಂದ ಸಿದ್ದರಾಮಯ್ಯ, ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ನಾಳಿನ ಕರ್ನಾಟಕ ಬಂದ್ ಯಶಸ್ವಿಯಾಗುವುದಿಲ್ಲ ಎಂದು ತಿಳಿಸಿದರು.
ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರನ್ನು ಬದಲಿಸುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಸದ್ಯಕ್ಕೆ ಸಭಾಪತಿ ಸ್ಥಾನ ಖಾಲಿ ಇಲ್ಲ. ಖಾಲಿಯಾದ ನಂತರ ಯೋಚನೆ ಮಾಡೋಣ ಎಂದಷ್ಟೇ ಉತ್ತರಿಸಿದರು.