"ಭಾರತಕ್ಕೆ ಮಹತ್ವದ ಕೊಡುಗೆ ನೀಡುವ ಸಾಮರ್ಥ್ಯ ಕರ್ನಾಟಕಕ್ಕಿದೆ''
ಹುಬ್ಬಳ್ಳಿ, ಫೆಬ್ರವರಿ 14: ಭಾರತ ಐದು ಟ್ರಿಲಿಯನ್ ಡಾಲರ್ ಆರ್ಥಿಕ ವ್ಯವಸ್ಥೆ ಹೊಂದಿದ ರಾಷ್ಟ್ರವಾಗಿ ರೂಪುಗೊಳ್ಳಲು ಕರ್ನಾಟಕದಂತಹ ರಾಜ್ಯಗಳ ಪಾಲುದಾರಿಕೆ ಅತ್ಯಂತ ಪ್ರಮುಖವಾಗಿದ್ದು, ದೇಶದ ಅರ್ಥ ವ್ಯವಸ್ಥೆಗೆ ಮಹತ್ವದ ಕೊಡುಗೆ ನೀಡುವಂತಹ ಸಾಮರ್ಥ್ಯ ಕರ್ನಾಟಕಕ್ಕಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು.
ಹುಬ್ಬಳ್ಳಿ ನಗರದ ಡೆನಿಸನ್ ಹೋಟೆಲ್ ನಲ್ಲಿ ಆಯೋಜಿಸಿರುವ ""ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ - 2020'' ಉದ್ಘಾಟಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, ಕರ್ನಾಟಕದಲ್ಲಿ ಸುಗಮ ವ್ಯವಹಾರ ನಡೆಸಲು ಅನುವಾಗುವಂತೆ ಸಕಲ ವ್ಯವಸ್ಥೆ ಕಲ್ಪಿಸಲು ನಾವು ಬದ್ಧವಾಗಿದ್ದೇವೆ. ಉದ್ಯಮ ಆರಂಭಿಸಲು ಉಂಟಾಗುವ ಅನಗತ್ಯ ವಿಳಂಬ ತಪ್ಪಿಸಲು ಹಾಗೂ ಶೀಘ್ರವೇ ಅನುಮೋದನೆ ಸಿಗುವಂತಹ ವ್ಯವಸ್ಥೆ ರೂಪಿಸುವುದು ನಮ್ಮ ಸರಕಾರದ ಆದ್ಯತೆಯಾಗಿದೆ ಎಂದರು.
2ನೇ ಹಂತದ ನಗರಗಳಲ್ಲಿ ಮೊದಲ ಬಾರಿಗೆ ಹೂಡಿಕೆದಾರರ ಸಮಾವೇಶ; ಸಜ್ಜಾಗಿದೆ ಹುಬ್ಬಳ್ಳಿ
ಕರ್ನಾಟಕ ರಾಜ್ಯವು ದೇಶದ ಪ್ರಮುಖ ಐಟಿ ಕೇಂದ್ರವೆಂದು ಪ್ರಸಿದ್ಧವಾಗಿದೆ, ಏರೋಸ್ಪೇಸ್, ಆಟೋಮೊಬೈಲ್ಸ್, ಮೆಷಿನ್ ಟೂಲ್ಸ್, ಎಲೆಕ್ಟ್ರಿಕ್ ವೆಹಿಕಲ್ಸ್ ಮತ್ತು ಆಧುನಿಕ ಬಯೋಟೆಕ್ ತಂತ್ರಜ್ಞಾನಗಳ ರಾಜಧಾನಿ ಎಂದು ಗುರುತಿಸಿಕೊಂಡಿದೆ. ಹೂಡಿಕೆಗೆ ಅತ್ಯಂತ ವಿಪುಲ ಮತ್ತು ಪ್ರಶಸ್ತವಾದ ವಾತಾವರಣ ಹೊಂದಿದೆ ಎಂದು ಹೇಳಿದರು.
ಉತ್ತರ ಕರ್ನಾಟಕದಲ್ಲಿ ಅವಕಾಶ ಸೃಷ್ಟಿಗೆ ಕ್ರಮ
ರಾಜ್ಯಕ್ಕೆ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಲು, ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 109 ಕ್ಕೆ ತಿದ್ದುಪಡಿ ತರಲಾಗುತ್ತಿದೆ. ಯಾವುದೇ ರೀತಿಯ ಉದ್ಯಮ ಆರಂಭಿಸುವವರಿಗೆ ಅನುಮತಿ ನೀಡಲು ಭೂ ಸ್ವಾಧೀನ ಮತ್ತು ಭೂ ಪರಿವರ್ತನೆ ಅವಧಿಯನ್ನು 30 ದಿನಗಳಿಗೆ ಇಳಿಸುತ್ತಿದ್ದೇವೆ ಎಂದರು.
ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೋದ್ಯಮ ಅಭ್ಯುದಯದ ಉದ್ದೇಶದಿಂದ ಉತ್ತರ ಕರ್ನಾಟಕದಲ್ಲಿ ವಿವಿಧ ವಲಯಗಳಲ್ಲಿ ಕ್ಲಸ್ಟರ್ಗಳನ್ನು ಸ್ಥಾಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.ಹೂಡಿಕೆದಾರರು ಲಾಭ ಪಡೆಯಲು ಮುಂದಾಗಬೇಕು
ಪ್ರಮುಖವಾಗಿ ಕೊಪ್ಪಳದಲ್ಲಿ ಟೋಯ್ಸ್ ಕ್ಲಸ್ಟರ್, ಬಳ್ಳಾರಿಯಲ್ಲಿ ಟೆಕ್ಸ್ಟೈಲ್ ಕ್ಲಸ್ಟರ್, ಹುಬ್ಬಳ್ಳಿಯಲ್ಲಿ ಎಫ್ಎಂಸಿಜಿ ಕ್ಲಸ್ಟರ್, ಕಲಬುರಗಿಯಲ್ಲಿ ಸೌರ ವಿದ್ಯುತ್ ಸರಕುಗಳ ಕ್ಲಸ್ಟರ್ ಮತ್ತು ಬೀದರ್ ನಲ್ಲಿ ಕೃಷಿ ಉಪಕರಣಗಳ ಕ್ಲಸ್ಟರ್ ತೆರೆಯಲಾಗುತ್ತಿದೆ ಎಂದು ಹೇಳಿದರು. ಹುಬ್ಬಳ್ಳಿ ಧಾರವಾಡ ಭೂ ಪ್ರದೇಶ ದೇಶಿಯ ಮತ್ತು ಜಾಗತಿಕ ಬಂಡವಾಳ ಹೂಡಿಕೆಗೆ ಸೂಕ್ತ ಸ್ಥಳವಾಗಿದ್ದು, ಇಲ್ಲಿ ಸಕಲ ಮೂಲಸೌಕರ್ಯ, ನುರಿತ ಮಾನವ ಸಂಪನ್ಮೂಲದ ಲಭ್ಯತೆ ಇದೆ. ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ರಾಜ್ಯದಲ್ಲಿ ಪಾರದರ್ಶಕ ಆಡಳಿತ ವ್ಯವಸ್ಥೆ ಇದ್ದು, ಇದರ ಲಾಭವನ್ನು ಪಡೆಯಲು ಹೂಡಿಕೆದಾರರು ಮುಂದಾಗಬೇಕು ಎಂದರು.
700 ಕ್ಕೂ ಹೆಚ್ಚು ಹೂಡಿಕೆದಾರರ ಆಗಮನ ನಿರೀಕ್ಷೆ: ಸಚಿವ ಜಗದೀಶ ಶೆಟ್ಟರ್
ಬೆಂಗಳೂರಿನಲ್ಲಿ ನವೆಂಬರ್ 3 ರಿಂದ 5ರವರೆಗೆ ಸಮಾವೇಶ
ಏರೋಸ್ಪೇಸ್, ರಕ್ಷಣಾ ಸಲಕರಣೆ, ಆಟೋ ಕಾಂಪೋನೆಂಟ್ಸ್, ವಿದ್ಯುತ್ ವಾಹನಗಳು, ಐಟಿ, ಕೃಷಿ-ವ್ಯವಹಾರದಂತಹ ಕ್ಷೇತ್ರಗಳು ದೇಶದ ಆರ್ಥಿಕಾಭಿವೃದ್ಧಿಗೆ ಮತ್ತು ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿವೆ. ಇಲ್ಲಿನ ಸೌಲಭ್ಯ ಹಾಗೂ ಸಹಕಾರವನ್ನು ಹೂಡಿಕೆದಾರರು ಬಳಸಿಕೊಳ್ಳಬೇಕು, ಬೆಂಗಳೂರಿನಲ್ಲಿ 2020ರ ನವೆಂಬರ್ 3 ರಿಂದ 5 ರವರೆಗೆ ನಿಗದಿಯಾಗಿರುವ ಇನ್ವೆಸ್ಟ್ ಕರ್ನಾಟಕ 2020 - ಜಾಗತಿಕ ಹೂಡಿಕೆದಾರರ ಸಮ್ಮೇಳನದಲ್ಲಿ ಭಾಗವಹಿಸಲು ಇದೇ ವೇಳೆ ಎಲ್ಲರನ್ನು ಆಹ್ವಾನಿಸುತ್ತಿದ್ದೇನೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಎಫ್ ಡಿಐನಲ್ಲಿ ಕರ್ನಾಟಕದ್ದು ಮೂರನೇ ಸ್ಥಾನ ಎಂದ ಪ್ರಹ್ಲಾದ ಜೋಶಿ
ಸಮಾವೇಶದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, "ಕರ್ನಾಟಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ವಿದೇಶಿ ನೇರ ಬಂಡವಾಳ - ಎಫ್ ಡಿಐ ಹೂಡಿಕೆಯಲ್ಲಿ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಕರ್ನಾಟಕದ ವಾಣಿಜ್ಯ ಕೇಂದ್ರವಾಗಿ, ಹುಬ್ಬಳ್ಳಿ- ಧಾರವಾಡ ಕೈಗಾರಿಕಾ ಪಟ್ಟಣ ಗುರುತಿಸಿಕೊಂಡಿದೆ. ಈ ಅವಳಿ ನಗರಗಳು ರಾಜಧಾನಿ ಬೆಂಗಳೂರಿನ ನಂತರ ರಾಜ್ಯದ ಅತಿದೊಡ್ಡ ಮಹಾನಗರ ಪ್ರದೇಶವಾಗಿದೆ. ಅಲ್ಲದೆ, ಹುಬ್ಬಳ್ಳಿ ಧಾರವಾಡ ನಗರ ಪಾಲಿಕೆಯನ್ನು ದೇಶದ 100 ಸ್ಮಾರ್ಟ್ ಸಿಟಿಗಳಲ್ಲಿ ಒಂದನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು. ಕೈಗಾರಿಕಾ ಬೆಳವಣಿಗೆ ಬೆಂಬಲಿಸಲು ಮತ್ತು ಹೂಡಿಕೆ ಆಕರ್ಷಿಸಲು ಈ ಭಾಗದಲ್ಲಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯಿಂದ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹುಬ್ಬಳ್ಳಿಯಲ್ಲಿ ಸಿಐಪಿಇಟಿ ಅಭಿವೃದ್ಧಿ- ಸದಾನಂದ ಗೌಡ
ಸಮಾವೇಶದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ವಿಶ್ವಬ್ಯಾಂಕ್ ನ ಸುಗಮ ವ್ಯವಹಾರ ವಲಯದಲ್ಲಿ ಭಾರತ 142ನೇ ಸ್ಥಾನದಿಂದ 63ನೇ ಸ್ಥಾನಕ್ಕೆ ಬಡ್ತಿ ಪಡೆದು ಮಹೋನ್ನತ ಸಾಧನೆ ಮಾಡಿದೆ. ಭಾರತದಲ್ಲೇ ತಯಾರಿಸು - ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಿಂದ ಉತ್ಪಾದನಾ ವಲಯದಲ್ಲಿ ಚೇತರಿಕೆಯಾಗಿದೆ. ಉತ್ತಮ ಆಡಳಿತ ಸೂಚ್ಯಂಕದಲ್ಲಿ 18 ದೊಡ್ಡ ರಾಜ್ಯಗಳನ್ನು ಹಿಂದಿಕ್ಕಿರುವ ಕರ್ನಾಟಕ 2ನೇ ಸ್ಥಾನಕ್ಕೇರಿದೆ. ಉತ್ತಮ ರೈಲು, ರಸ್ತೆ, ವಾಯುಮಾರ್ಗ ಸೌಲಭ್ಯ ಹೊಂದಿರುವ ರಾಜ್ಯದಲ್ಲಿ ಅತ್ಯುತ್ತಮ ದೂರ ಸಂಪರ್ಕ ವ್ಯವಸ್ಥೆ, ಶಾಂತಿಯುತ ಕಾರ್ಮಿಕ ಶಕ್ತಿ ಹೊಂದಿದ್ದು, ಹುಬ್ಬಳ್ಳಿ - ಧಾರವಾಡ ವಲಯ ಹೂಡಿಕೆಗೆ ಸೂಕ್ತ ವಾತಾವರಣ ಹೊಂದಿದೆ. ಸಿಐಪಿಇಟಿ ಅನ್ನು ಹುಬ್ಬಳ್ಳಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ಹೇಳಿದರು.