ಸಿಎಂ ದಾವೂದ್ ಇಬ್ರಾಹಿಂ ಚಿಕ್ಕಪ್ಪನಂತೆ ವರ್ತಿಸುತ್ತಿದ್ದಾರೆ: ಜೋಶಿ
ಹುಬ್ಬಳ್ಳಿ, ಜುಲೈ 11: "ಮಂಗಳೂರಿನಲ್ಲಿ ನಡೆಯುತ್ತಿರುವ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರ ಹಿಂದೂಗಳನ್ನೇ ಟಾರ್ಗೆಟ್ ಮಾಡುತ್ತಿದೆ," ಎಂದು ಆರೋಪಿಸಿ ಸಂಸದ ಹಾಗೂ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ದಾವೂದ್ ಇಬ್ರಾಹಿಂ ಚಿಕ್ಕಪ್ಪನಂತೆ ವರ್ತಿಸುತ್ತಿದ್ದೀರೆಂದು ಸಿಎಂರನ್ನು ಜೋಶಿ ಕುಟುಕಿದ್ದಾರೆ.
"ನೀವು ಕೊಳಕು ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಸಾಕ್ಷಿಯಾಗಿದ್ದೀರಿ ಎಂಬುದನ್ನು ನಿಮ್ಮ ನಡವಳಿಕೆ ತೋರಿಸಿಕೊಟ್ಟಿದೆ ಎಂದು ನೇರವಾಗಿ ಆಪಾದಿಸಿದ್ದಾರೆ. ಕೋಮು ದಳ್ಳುರಿ ಎಂದಾಗ ನಿಮ್ಮ ಬಾಯಲ್ಲಿ ಹಿಂದೂಗಳು ಎಂಬ ಪದ ತಕ್ಷಣವೇ ಬರುವುದು. ಆದರೆ ಮುಸ್ಲಿಂ ಎಂಬ ಪದ ಬಳಸುವಷ್ಟು ನಿಮಗೆ ಹಾಗೂ ನಿಮ್ಮ ಪಕ್ಷಕ್ಕೆ ಯಾವತ್ತೂ ಧೈರ್ಯ ಬರುವುದಿಲ್ಲ. ಇತ್ತೀಚೆಗಂತೂ ನೀವು ದಾವೂದ್ ಇಬ್ರಾಹಿಂನ ಚಿಕ್ಕಪ್ಪನಂತೆ ವರ್ತಿಸುತ್ತಿದ್ದೀರಿ. ಪಿಎಫ್ಐ, ಕೆಎಫ್ಡಿಯಂತ ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸಿ. ಕೇವಲ ಬಿಜೆಪಿ, ಆರ್ಎಸ್ಎಸ್ ಮಂತ್ರ ಜಪಿಸುತ್ತಲೇ ಇದ್ದರೆ ಜನ ಚುನಾವಣೆಯಲ್ಲಿ ದಾರಿ ತೋರಿಸುತ್ತಾರೆ," ಎಂದು ಸಿಎಂ ಸಿದ್ದರಾಮಯ್ಯಗೆ ಜೋಶಿ ಪತ್ರ ಬರೆದಿದ್ದಾರೆ.
ಪತ್ರದ ಸಾರಾಂಶ ಹೀಗಿದೆ..
ವಿಷಯ: ಮಂಗಳೂರಿನಲ್ಲಿ ನಡೆದ ಗಲಭೆಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ನಿಮ್ಮ ತಿಕ್ಕಲು ಹಾಗೂ ಅಪಕ್ವ ಹೇಳಿಕೆ ಬಗ್ಗೆ
ಕಳೆದ ಕೆಲ ದಿನಗಳಿಂದ ದಕ್ಷಿಣ ಕನ್ನಡ ಹಾಗೂ ವಿಶೇಷವಾಗಿ ಮಂಗಳೂರಿನಲ್ಲಿ ಶಾಂತಿ ವಾತಾವರಣ ಹಾಗೂ ಮತೀಯ ಸಾಮರಸ್ಯ ಕದಡುವ ಗಲಭೆಗಳ ಕುರಿತು ಪತ್ರಕರ್ತರೊಂದಿಗೆ ಮಾತನಾಡಿ ನೀವು ನೀಡಿದ ಹೇಳಿಕ, ನಿಮ್ಮ ಹಾಗೂ ನಿಮ್ಮ ಪಕ್ಷ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಯಾವ ಕೀಳುಮಟ್ಟಕ್ಕೆ ಹೋಗುತ್ತೀರೆಂಬುದಕ್ಕೆ ಕೈಗನ್ನಡಿ ಹಿಡಿದಿದೆ.
ಮಂಗಳೂರು ಗಲಭೆಗೆ ಕೇವಲ ಹಿಂದೂಗಳೇ ಕಾರಣವೆಂದು ಅಪಪ್ರಚಾರ ಮಾಡುತ್ತಾ, ಒಬ್ಬ ಪ್ರಮಾಣಿಕ ಆರ್ಎಸ್ಎಸ್ ಕಾರ್ಯಕರ್ತನನ್ನು ಕೊಲೆ ಮಾಡಿದ ಮತೀಯವಾದಿ ಅಪರಾಧಿಗಳನ್ನು ಪತ್ತೆ ಹಚ್ಚುವುದನ್ನು ಬಿಟ್ಟು ಕೋಮು ದಳ್ಳುರಿಯಲ್ಲಿ ನಿಮ್ಮ ದೇಹ ಬೆಚ್ಚಗೆ ಮಾಡಿಕೊಳ್ಳುವ ಕೆಟ್ಟ ಚಾಳಿಯನ್ನು ಈಗಲಾದರೂ ಬಿಡಿ.
ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಹಿಂದೂಗಳೇ ಆಗಿರಲಿ ಅಥವಾ ಅನ್ಯ ಧರ್ಮಿಯರೇ ಆಗಿರಲಿ ಎಂದು ಹೇಳುವಾಗ ನಿಮ್ಮ ಮಾತು ತಡವರಿಸಿದ್ದನ್ನು ಇನ್ನೊಮ್ಮೆ ನೋಡಲು ಸಿಡಿ ತರಿಸಿಕೊಂಡು ನೋಡಿ. ಮುಸ್ಲಿಮರೆ ಆಗಿರಲಿ ಎಂಬ ಪದ ಬರದೆ ನಿಮ್ಮ ಬಾಯಿ ಒಣಗಿ ಹೋಗಿ ತಡವರಿಸಿ ನಂತರ ಪಕ್ಕದಲ್ಲಿ ಕುಳಿತ ಯಾರೋ ಒಬ್ಬರು 'ಅನ್ಯಧರ್ಮಿಯರೆ ಆಗಿರಲಿ' ಎಂದು ಹೇಳಿಕೊಟ್ಟದ್ದನ್ನು ಕೇಳಿಸಿಕೊಂಡು ಅದೇ ಪ್ರಯೋಗ ಮಾಡಿದ್ದೀರಿ.
ಇನ್ನು ಮೇಲಾದರೂ ಮುಸ್ಲಿಂ ತುಷ್ಟಿಕರಣ ಬಿಟ್ಟು ನಿಮಗೆ ಮತ ಚಲಾಯಿಸಿ ಅಧಿಕಾರ ಕೊಟ್ಟವರಲ್ಲಿ ಹಿಂದೂಗಳೂ ಇದ್ದಾರೆ ಎಂಬುದನ್ನು ಮರೆಯಬೇಡಿ. ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ವರ್ತಿಸಿ.
ಇಂತಿ ವಿಶ್ವಾಸಿ
ಪ್ರಹ್ಲಾದ್ ಜೋಶಿ, ಸಂಸದರು