ಸಿದ್ದರಾಮಯ್ಯ ಬಾಲ ಸುಟ್ಟ ಬೆಕ್ಕಿನ ಹಾಗೆ: ಪ್ರಹ್ಲಾದ್ ಜೋಷಿ ಟೀಕೆ
ಹುಬ್ಬಳ್ಳಿ, ಏಪ್ರಿಲ್ 24 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕಕ್ಕೆ ಬರುತ್ತಿರುವುದು ಈ ಪ್ರದೇಶದಲ್ಲಿ ಪಕ್ಷ ಹೆಚ್ಚಿನ ಸ್ಥಾನ ಗಳಿಸಲಿ ಎಂಬ ಉದ್ದೇಶಕ್ಕೆ ಅಲ್ಲ. ಬದಲಾಗಿ ಅವರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ಧಾರವಾಡ ಸಂಸದ ಪ್ರಲ್ಹಾದ ಜೋಶಿ ಟೀಕಿಸಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಕೇಶ್ವಾಪುರದಲ್ಲಿ ಇರುವ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಿದ್ದರಾಮಯ್ಯ ಅವರು ಬಾಲ ಸುಟ್ಟ ಬೆಕ್ಕಿನ ಹಾಗೆ. ಕ್ಷೇತ್ರ ಅರಸಿಕೊಂಡು ಬಾದಾಮಿಗೆ ಬರುತಿದ್ದಾರೆ ಎಂದು ವ್ಯಂಗ್ಯವಾಡಿದರು.
ಎಬಿಪಿ ನ್ಯೂಸ್ ಸಮೀಕ್ಷೆ: ಸಿದ್ದರಾಮಯ್ಯ ಅವರೇ ಮೆಚ್ಚಿನ ಮುಖ್ಯಮಂತ್ರಿ
ಸಿದ್ದರಾಮಯ್ಯಗೆ ಈಗಾಗಲೇ ಚಾಮುಂಡೇಶ್ವರಿಯ ಶಾಪ ತಟ್ಟಿದೆ. ಈಗ ಬನಶಂಕರಿ ದೇವಿಯ ಶಾಪವೂ ತಟ್ಟಲಿದೆ ಎಂದು ಕುಟುಕಿದರು.
ಜಗದೀಶ ಶೆಟ್ಟರ್ ಆರನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಶೆಟ್ಟರ್ ಅವರಿಗೆ ಸಭ್ಯತೆ, ಬದ್ಧತೆಯ ಗುಣಗಳಿವೆ. ಹೀಗಾಗಿ ಹುಬ್ಬಳ್ಳಿ- ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಜನರು ಶೆಟ್ಟರ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಜಗದೀಶ ಶೆಟ್ಟರ್ ಆರನೇ ಬಾರಿಗೆ ಸಿಕ್ಸರ್ ಬಾರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಾಮುಂಡೇಶ್ವರಿ ತಿರಸ್ಕರಿಸಿದವರನ್ನು ಬನಶಂಕರಿ ಸ್ವೀಕರಿಸುತ್ತಾಳೆಯೇ?
ಹಲವು ದಿನಗಳಿಂದಲೂ ಸಿದ್ದರಾಮಯ್ಯ ಅವರು ಬಾದಾಮಿಯಿಂದಲೂ ಸ್ಪರ್ಧಿಸುತ್ತಾರೆ ಎಂದು ಸುದ್ದಿಯಾಗಿತ್ತು. ಚಾಮುಂಡೇಶ್ವರಿ ಕ್ಷೇತ್ರ ಸಿದ್ದರಾಮಯ್ಯ ಅವರಿಗೆ ಅಷ್ಟೊಂದು ಸೇಫ್ ಅಲ್ಲ ಎಂದು ಕೆಲವು ಗುಪ್ತಚರ ವರದಿಗಳೂ ಹೇಳಿರುವುದಲ್ಲದೆ, ಇಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸುತ್ತಿರುವ ಕ್ಷೇತ್ರದ ಹಾಲಿ ಶಾಸಕ ಜಿ.ಟಿ. ದೇವೇಗೌಡ ಅವರು ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇರುವುದರಿಂದ ಸಿದ್ದರಾಮಯ್ಯ ಎರಡು ಕ್ಷೇತ್ರಗಳನ್ನು ಆಯ್ದುಕೊಂಡಿದ್ದಾರೆ.