ಹುಬ್ಬಳ್ಳಿಯಲ್ಲಿ ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆ
ಹುಬ್ಬಳ್ಳಿ, ಜುಲೈ 7: ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯನ್ನು ಮಂಗಳವಾರ ಮಧ್ಯಾಹ್ನ ಹುಬ್ಬಳ್ಳಿಯ ಹೋಟೆಲ್ನಲ್ಲಿ ಹಾಡ ಹಗಲೇ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ. ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಉದ್ಯೋಗಿಗಳಿಂದಲೆ ಹತ್ಯೆಗೀಡಾಗಿದ್ದ ಗುರೂಜಿ ಅಂತ್ಯಕ್ರಿಯೆ ಬುಧವಾರ ಸಂಜೆ ಹುಬ್ಬಳ್ಳಿಯಲ್ಲಿ, ಅವರ ಜಮೀನಿನಲ್ಲಿ ನೆರವೇರಲಿದೆ.
Recommended Video
ಕುಟುಂಬಸ್ಥರು ಈ ಬಗ್ಗೆ ಮಾಹಿತಿ ತಿಳಿಸಿದ್ದು, ಬುಧವಾರ ಬೆಳಗ್ಗೆ ಹುಬ್ಬಳ್ಳಿಯ ಸುಳ್ಳಾ ರಸ್ತೆಯಲ್ಲಿರುವ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯುವ ಜಾಗವನ್ನು ಸ್ವಚ್ಛ ಮಾಡಲಾಗಿದೆ. ಅಂತ್ಯಕ್ರಿಯೆ ಸಂಬಂಧಪಟ್ಟ ಸಿದ್ಧತೆ, ವಿಧಿವಿಧಾನಗಳಿಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ತವರೂರು ಬಾಗಲಕೋಟೆಯೊಂದಿಗೆ ಚಂದ್ರಶೇಖರ್ ಗುರೂಜಿ ನಂಟು
ಚಂದ್ರಶೇಖರ್ ಗುರೂಜಿ ಅಪಾರ ಅನುಯಾಯಿಗಳನ್ನು ಹೊಂದಿರುವುದರಿಂದ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸದ್ಯ ಚಂದ್ರಶೇಖರ್ ಗುರೂಜಿಯವರ ಶವವಿರುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸಂಬಂಧಿಕರು, ಅನುಯಾಯಿಗಳು ಆಗಮಿಸುತ್ತಿದ್ದಾರೆ.
ಇನ್ನು ಮಂಗಳವಾರ ಆರೋಪಿಗಳು ಗುರೂಜಿಯನ್ನು ಮಾತನಾಡಲು ಕರೆಸಿ ಹೋಟೆಲ್ನಲ್ಲಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು. ಮಾಜಿ ಉದ್ಯೋಗಿಗಳಾದ ಮಹಾಂತೇಶ್ ಮತ್ತು ಮಂಜುನಾಥ್ ಎಂಬ ಈ ಕೃತ್ಯ ಎಸೆಗಿದ್ದರು. ಹತ್ಯೆ ನಡೆದ 4 ಗಂಟೆಗಳಲ್ಲಿಯೇ ಆರೋಪಿಗಳನ್ನು ಬಂಧಿಸಲಾಗಿತ್ತು.
Breaking: ಹುಬ್ಬಳ್ಳಿಯಲ್ಲಿ ಚಂದ್ರಶೇಖರ್ ಗುರೂಜಿ ಹಂತಕರ ಬಂಧನ
ಆರೋಪಿಗಳ ಬಂಧನ; ಘಟನೆ ನಡೆದ ನಾಲ್ಕು ತಾಸುಗಳಲ್ಲೇ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಹತ್ಯೆಯಾದ ತಕ್ಷಣ ಆರೋಪಿಗಳಿಬ್ಬರ ಚಹರೆಯನ್ನು ಅಕ್ಕಪಕ್ಕದ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗಿತ್ತು. ಆರೋಪಿಗಳು ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ತಪ್ಪಿಸಿಕೊಂಡು ಹೋಗುತ್ತಿರುವ ಮಾಹಿತಿ ತಿಳಿದ ಪೊಲೀಸರು ಜೆಸಿಬಿಯಿಂದ ಕಾರನ್ನು ಅಡ್ಡಗಟ್ಟಿ ರೋಚಕ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.
ಈಗಾಗಲೇ ಆರೋಪಿ ಮಹಂತೇಶ್ ಪತ್ನಿ ವನಜಾರನ್ನು ವಿಚಾರಣೆ ನಡೆಸಿ ಕಳುಹಿಸಲಾಗಿದೆ. ಬಂಧಿತ ಆರೋಪಿಗಳ ವಿಚಾರಣೆ ಬಾಕಿಯಿದೆ. ಸದ್ಯಕ್ಕೆ ಆಸ್ತಿ ವಿಚಾರವಾಗಿ ಈ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ವ್ಯಕ್ತಿಗಳ ವಿಚಾರಣೆ ನಡೆಸಬೇಕಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್ ಮಾಹಿತಿ ನೀಡಿದ್ದಾರೆ.