ಮಂಡ್ಯದಲ್ಲಿ ನಿಖಿಲ್ ವಿರುದ್ದ ರೇವಣ್ಣ 'ನಿಂಬೆಹಣ್ಣು' ಪ್ರಯೋಗ? ಸಿ ಟಿ ರವಿ
Recommended Video
ಹುಬ್ಬಳ್ಳಿ, ಮೇ 17: ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತ ನಂತರ, ತಾನು ಪ್ರಯೋಗಿಸಿದ ನಿಂಬೆಹಣ್ಣು ವರ್ಕೌಟ್ ಆಯಿತು ಎನ್ನುವ ಮಾತನ್ನು ಎಚ್ ಡಿ ರೇವಣ್ಣ ಹೇಳಿದ್ದರು. ಈ ಬಾರಿಯೂ ಅವರು ಅದನ್ನೇ ಮಾಡಿದ್ದಾರೆಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.
ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಚಿಕ್ಕಣ್ಣಗೌಡರ್ ಪರ ಮತಯಾಚಿಸುತ್ತಾ, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಸಿ, ಹಾಸನದಲ್ಲಿ ತಮ್ಮ ಮಗ ಪ್ರಜ್ವಲ್ ಗೆಲ್ಲಿಸಲು, ರೇವಣ್ಣ ನಿಂಬೆಹಣ್ಣು ಪ್ರಯೋಗಿಸಿರಬಹುದು ಎಂದು ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ.
ನಮ್ ಪಿಡಬ್ಲ್ಯುಡಿ ರೇವಣ್ಣ ಸಾಹೇಬ್ರನ್ನು ನಿಂಬೆಹಣ್ಣು ಆವರಿಸಿಕೊಂಡಾಗ!
ಕೈಯಲ್ಲಿ, ಜೇಬಿನಲ್ಲಿ ನಿಂಬೆಹಣ್ಣು ಇಲ್ಲದೇ ರೇವಣ್ಣ ಮನೆಯಿಂದ ಹೊರಗೆ ಕಾಲಿಡುವುದಿಲ್ಲ, ಎಲ್ಲದಕ್ಕೂ ನಿಂಬೆಹಣ್ಣನ್ನೇ ನಂಬುವ ಅವರು, ಹಾಸನ ಮತ್ತು ಮಂಡ್ಯದಲ್ಲಿ 'ನಿಂಬೆಹಣ್ಣು ಪ್ರಯೋಗ' ಯಾಕೆ ಮಾಡಿರಬಾರದು ಎಂದು ಸಿ ಟಿ ರವಿ ಲೇವಡಿ ಮಾಡಿದ್ದಾರೆ.
ಅದರ್ಗುಂಚಿಯಲ್ಲಿ ಯಡಿಯೂರಪ್ಪ, ಗೋವಿಂದ ಕಾರಜೋಳ ಜೊತೆ ರೋಡ್ ಶೋ ಮೂಲಕ ಮತಯಾಚನೆ ಮಾಡುತ್ತಾ, ಅಪಮೈತ್ರಿ ಸರಕಾರದ ವೈಫಲ್ಯತೆಯನ್ನು ಜನತೆ ನೋಡಿದ್ದಾರೆ. ಮತಬಾಂಧವರು ಬಿಜೆಪಿಗೆ ಮತ ನೀಡಿ ನಮ್ಮ ಸರಕಾರ ಬರುವಂತೆ ಆಶೀರ್ವದಿಸಬೇಕೆಂದು ಮನವಿ ಮಾಡಿದ್ದಾರೆ.
ಸಿಎಂ ಸ್ಥಾನಕ್ಕೆ ಅರ್ಹ ಎಂದ ಸಿದ್ದರಾಮಯ್ಯಗೆ ರೇವಣ್ಣ ಕೃತಜ್ಞತೆ
ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದೆ. ನಾವೇನೂ ಸರಕಾರವನ್ನು ಬೀಳಿಸಲು ಹೋಗುವುದಿಲ್ಲ, ಅವರವರೇ ಕಿತ್ತಾಡಿಕೊಂಡು, ತಮ್ಮದೇ ಸರಕಾರಕ್ಕೆ ಖೆಡ್ಡಾ ತೋಡಲಿದ್ದಾರೆಂದು ಸಿ ಟಿ ರವಿ ಭವಿಷ್ಯ ನುಡಿದಿದ್ದಾರೆ.
ಪ್ರಧಾನಿ ವಿರುದ್ದ ಏಕವಚನದಲ್ಲಿ, ಅಸಂಬದ್ದವಾಗಿ ಮಾತನಾಡುತ್ತಾ ಸಿದ್ದರಾಮಯ್ಯ ತಮ್ಮ ಸಂಸ್ಕೃತಿಯನ್ನು ತೋರಿಸುತ್ತಿದ್ದಾರೆಂದು ಸಿ ಟಿ ರವಿ ಹೇಳಿದ್ದಾರೆ.