ರಾಜ್ಯಸಭೆ ಟಿಕೆಟ್ ಗಾಗಿ ನಾನು ಲಾಬಿ ನಡೆಸಿಲ್ಲ: ವಿಜಯ್ ಸಂಕೇಶ್ವರ
ಹುಬ್ಬಳ್ಳಿ, ಜೂನ್ 5: ಕೊರೊನಾವೈರಸ್ ಹಿನ್ನೆಲೆಯಿಂದ ಮುಂದೂಡಲ್ಪಟ್ಟಿದ್ದ ರಾಜ್ಯಸಭೆಯ 24 ಸ್ಥಾನಗಳಿಗೆ ಚುನಾವಣೆಗೆ ದಿನಾಂಕವ ಚುನಾವಣಾ ಆಯೋಗ ಪ್ರಕಟಿಸುತ್ತಿದ್ದಂತೆ ಕರ್ನಾಟಕ ಸೇರಿದಂತೆ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಬಿರುಸಿನ ಚಟುವಟಿಕೆಗಳು ಕಂಡು ಬಂದಿವೆ.
Recommended Video
ಕರ್ನಾಟಕದಲ್ಲಿ ನಾಲ್ಕು ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ ನಡೆಯಲಿದ್ದು, ಆ ದಿನವೇ ಮತ ಎಣಿಕೆಯಾಗಲಿದೆ. ನಾಲ್ಕು ಸ್ಥಾನಗಳ ಪೈಕಿ ಬಿಜೆಪಿ ಸುಲಭವಾಗಿ ಎರಡು ಸ್ಥಾನವನ್ನು ಗಳಿಸುವ ಉತ್ಸಾಹದಲ್ಲಿದೆ. ಈ ನಡುವೆ ಬಿಜೆಪಿಯಿಂದ ಐದಾರು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದು, ಆಯ್ಕೆ ಪ್ರಕ್ರಿಯೆ ಸದ್ಯ ಜಾರಿಯಲ್ಲಿದೆ.
ರಾಜ್ಯಸಭೆಯ 24 ಸ್ಥಾನಗಳಿಗೆ ಚುನಾವಣೆ ದಿನಾಂಕ ಪ್ರಕಟ
ಈ ನಡುವೆ ಸಂಭಾವ್ಯ ಪಟ್ಟಿಯಲ್ಲಿ ತಮ್ಮ ಹೆಸರು ಕಾಣಿಸಿಕೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿ ಬಂದಿರುವುದರಿಂದ ಉದ್ಯಮಿ ಡಾ ವಿಜಯ್ ಸಂಕೇಶ್ವರ ಅವರು ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.
ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿ
"ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ, ಪಕ್ಷದಿಂದ ನನಗೆ ಯಾವ ಆದೇಶ ಬರುತ್ತದೋ ಅದನ್ನು ನಾನು ಕಟ್ಟುನಿಟ್ಟಾಗಿ ಪಾಲಿಸುತ್ತೇನೆ" ಎಂದು ವಿ. ಆರ್ ಎಲ್ ಸಮೂಹ ಸಂಸ್ಥೆ ಅಧ್ಯಕ್ಷ ವಿಜಯ ಸಂಕೇಶ್ವರ ಹೇಳಿದರು.
ಪಕ್ಷದ ವರಿಷ್ಠರು ನನಗೆ ಯಾವುದೇ ಜವಾಬ್ದಾರಿ ವಹಿಸಿದರೂ ನಿಭಾಯಿಸಲು ಸಿದ್ಧ, ನಾನು ರಾಜಕಾರಣಿಯೂ ಅಲ್ಲ, ಇದು ರಾಜಕೀಯ ವೇದಿಕೆಯೂ ಅಲ್ಲ, ಕೊರೊನಾನಿಯಂತ್ರಣದ ಬಗ್ಗೆ ಮಾಹಿತಿ ಹಂಚಿಕೆಕೊಳ್ಳಲು ಕರೆದ ಸುದ್ದಿಗೋಷ್ಠಿ ಎಂದರು.
Oneindia explainer; ರಾಜ್ಯಸಭೆ ಚುನಾವಣೆ ಹೇಗೆ ನಡೆಯುತ್ತದೆ?
2018ರಲ್ಲೂ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದರು
ಈ ನಡುವೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ, ಟಿಕೆಟ್ ಗಾಗಿ ಲಾಬಿ ನಡೆಸಿದ್ದರ ಬಗ್ಗೆ ಪ್ರತಿಕ್ರಿಯಿಸಿ, ನಾನು ಯಾವುದೇ ರೀತಿ ಲಾಬಿ ನಡೆಸಿಲ್ಲ, ಈ ಬಗ್ಗೆ ಪಕ್ಷದ ವರಿಷ್ಠ ಜೊತೆ ಮಾತುಕತೆ ಮಾಡಿಲ್ಲ, ಈ ಬಗ್ಗೆ ಬಂದಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದರು.
2018ರಲ್ಲಿ ವಿಜಯ ಸಂಕೇಶ್ವರ್ ಅವರು ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ರಾಜ್ಯಸಭಾ ಟಿಕೆಟ್ ರಾಜೀವ್ ಚಂದ್ರಶೇಖರ್ ಅವರಿಗೆ ನೀಡಲಾಗಿತ್ತು. ರಾಜ್ಯಸಭಾ ಚುನಾವಣೆ ಟಿಕೆಟ್ಗೆ ನಾನು ಅರ್ಜಿ ಹಾಕಿಲ್ಲ ಹಾಗಾಗಿ ನನಗೆ ಅಸಮಾಧಾನ ಆಗಿಲ್ಲ, ರಾಜೀವ್ ಚಂದ್ರಶೇಖರ್ ಅವರು ರಾಜ್ಯಸಭೆಗೆ ಆಯ್ಕೆ ಆಗಿರುವುದು ಸಂತೋಷವಾಗಿದೆ ಎಂದು ಸಂಕೇಶ್ವರ ಅವರು ಅಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
|
ಬಿಜೆಪಿಯಿಂದ ನಾಲ್ಕನೇ ಸ್ಥಾನಕ್ಕಾಗಿ ಪೈಪೋಟಿ
ಈಗಿರುವ ಸಂಖ್ಯಾ ಬಲದ ಆಧಾರದ ಮೇಲೆ ಬಿಜೆಪಿ ಎರಡು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ನಿರಾಯಾಸವಾಗಿ ಗೆಲ್ಲಬಹುದಾಗಿದೆ. ಹಾಗಾಗಿ, ನಾಲ್ಕನೇ ಸ್ಥಾನಕ್ಕೆ ಭಾರೀ ಪೈಪೋಟಿ ಏರ್ಪಟ್ಟಿದೆ. ಕಳೆದ ಬಾರಿಯ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ತೇಜಸ್ವಿನಿ ಅನಂತ್ ಕುಮಾರ್, ಇನ್ಫೋಸಿಸ್ ಫೌಂಡೇಷನ್ನಿನ ಸುಧಾ ಮೂರ್ತಿ, ಬ್ರಿಕ್ಸ್ ಬ್ಯಾಂಕ್ ನ ಅಧ್ಯಕ್ಷರಾಗಿರುವ ಕುಂದಾಪುರ ವಾಮನ ಕಾಮತ್ (ಕೆ.ವಿ.ಕಾಮತ್) ಹೆಸರು ಕೇಳಿ ಬರುತ್ತಿದೆ. ಪ್ರಭಾಕರ್ ಕೋರೆ ಅವರು ಇನ್ನೊಂದು ಅವಧಿಗೆ ಮುಂದುವರೆಯುವ ಸಾಧ್ಯತೆಗಳಿವೆ
ರಾಜ್ಯಸಭೆಯಿಂದ 51 ಸಂಸದರು ನಿವೃತ್ತಿ, ಯಾರಿಗೆ ಲಾಭ?
ಜೂನ್ 19ರಂದು 11 ರಾಜ್ಯಗಳ 24 ಸ್ಥಾನಗಳಿಗೆ ಚುನಾವಣೆ
ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಮಣಿಪುರ, ಜಾರ್ಖಂಡ್, ಮೇಘಾಲಯ, ಅರುಣಾಚಲ ಪ್ರದೇಶ, ಮಿಜೋರಾಂ ಹಾಗೂ ರಾಜಸ್ಥಾನ ರಾಜ್ಯಗಳಿಗೆ ಚುನಾವಣೆ ನಿಗದಿಯಾಗಿದೆ. ಜೂನ್ 19 ಸಂಜೆ 5 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ. ಜೂನ್ 22ರೊಳಗೆ ಎಲ್ಲಾ ಚುನಾವಣೆ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಬೇಕಿದೆ.
ಅಂಧ್ರಪ್ರದೇಶ (4 ಸ್ಥಾನ), ಗುಜರಾತ್ (4), ಕರ್ನಾಟಕ (4), ಮಧ್ಯಪ್ರದೇಶ(3), ಜಾರ್ಖಂಡ್(2), ಮಣಿಪುರ(1), ಮೇಘಾಲಯ (1), ಅರುಣಾಚಲಪ್ರದೇಶ(1), ಮಿಜೋರಾಂ (1) ಹಾಗೂ ರಾಜಸ್ಥಾನದ 3 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ.