ಸಂಪುಟ ವಿಸ್ತರಣೆಗೆ ಗಡುವು ಕೊಟ್ಟ ಶಾಸಕ ಯತ್ನಾಳ..!
ಹುಬ್ಬಳ್ಳಿ, ಜನವರಿ 28: 'ರಾಜ್ಯದಲ್ಲಿ ನಡೆಯುತ್ತಿರುವ ಸಚಿವ ಸಂಪುಟ ವಿಸ್ತರಣೆ ಪ್ರಹಸನಕ್ಕೆ ಬಿಜೆಪಿ ವರಿಷ್ಠರು ಆದಷ್ಟು ಬೇಗ ಬ್ರೇಕ್ ಹಾಕಬೇಕು' ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ.
ಮಂಗಳವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ, ''ಬರುವ ಶುಕ್ರವಾರ (ಜನವರಿ 31) ಒಳಗಾಗಿ ಸಚಿವ ಸಂಪುಟ ವಿಸ್ತರಣೆ ಪ್ರಹಸನಕ್ಕೆ ತೆರೆ ಎಳೆಯಲೇಬೇಕಾಗಿದೆ'' ಎಂದು ಬಿಜೆಪಿ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2024 ಕ್ಕೆ ನಾನೇ ಸಿಎಂ: ಕುರ್ಚಿ ಮೇಲೆ ಕರ್ಚೀಫ್ ಹಾಕಿದ ಬಿಜೆಪಿ ಶಾಸಕ
''ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ 16 ಖಾತೆಗಳ ಹೊರೆ ಇದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅವರ ಮೇಲಿನ ಭಾರ ಇಳಿಸಿ, ಗೊಂದಲಗಳಿಗೆ ತೆರೆ ಎಳೆಯಬೇಕು, ರಾಜ್ಯದಲ್ಲಿ ಜನರಿಗೆ ಬಿಜೆಪಿ ಹೈಕಮಾಂಡ್ ಒಳ್ಳೆಯ ಸರ್ಕಾರ ನೀಡಬೇಕು'' ಎಂದು ಹೇಳಿದರು.
''ಕೇವಲ ವಿಧಾನಸೌಧದಲ್ಲಿ ಕುಳಿತುಕೊಳ್ಳಬೇಕು ಎನ್ನುವರಿಗೆ ಮಂತ್ರಿಗಿರಿ ಏತಕ್ಕೆ ಬೇಕು? ಎಲ್ಲ ಅನುಭವಿಸಿದವರೂ ಇನ್ನೂ ಬೇಕು ಎನ್ನುವುದರಲ್ಲಿ ಅರ್ಥವಿಲ್ಲ. ಕ್ರಿಯಾಶೀಲರಾಗಿ ಕೆಲಸ ಮಾಡುವವರಿಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಪ್ರಾಶಸ್ತ್ಯ ನೀಡಬೇಕು. ಕೆಲಸ ಬೇಡ, ಕೇವಲ ಮಂತ್ರಿಗಿರಿ ಬೇಕು ಎನ್ನುವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲಿ'' ಎಂದು ಹೇಳುವ ಮೂಲಕ ತಾವೊಬ್ಬ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂಬುದನ್ನು ಬಲವಾಗಿ ಪ್ರತಿಪಾದಿಸಿದ್ದಾರೆ.