ಲಾಡ್ ಜತೆಗೆ ಜೋಶಿ- ಶೆಟ್ಟರ್ ಸಖ್ಯ ಆರೋಪ, ಜೋರು ದನಿಯಲ್ಲೇ ಆಕ್ರೋಶ
ಹುಬ್ಬಳ್ಳಿ, ಏಪ್ರಿಲ್ 21: ಕಲಘಟಗಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ.ಎಂ. ನಿಂಬಣ್ಣನವರಿಗೆ ಟಿಕೆಟ್ ಕೈ ತಪ್ಪಿರುವ ಹಿಂದೆ ಇರುವವರು ಯಾರು ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಆದರೆ ಇದಕ್ಕೆ ಉತ್ತರ ಎಂಬಂತೆ ಬಿಜೆಪಿಯ ಇಲ್ಲಿನ ಸ್ಥಳೀಯ ನಾಯಕರೇ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದಾರೆ ಎಂದು ಆರೋಪಿಸಿರುವ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಹತ್ತು ವರ್ಷಗಳಿಂದ ವಲಸಿಗರ ಕೈಯಲ್ಲಿ ಅಧಿಕಾರದ ಚುಕ್ಕಾಣಿ ಕೊಟ್ಟಿರುವ ಮತದಾರರು ಈ ಸಲ ಬೇರೆ ಯೋಜನೆಯಲ್ಲಿಯೇ ಇದ್ದರು. 23 ವರ್ಷಗಳಿಂದ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಸ್ಥಳೀಯ ನಾಯಕ ನಿಂಬಣ್ಣ ಅವರನ್ನು ಆರಿಸಿ ತನ್ನಿ ಎಂದು ಈಗಾಗಲೇ ಬಿಜೆಪಿ ಕಾರ್ಯಕರ್ತರು ಅಬ್ಬರದ ಪ್ರಚಾರ ಮಾಡಿದ್ದರು.
ಮಾಜಿ ಮು.ಮಂ. ಜಗದೀಶ್ ಶೆಟ್ಟರ್ ಗೆ ನಿಂತ ನೆಲವೇ ಕುಸಿಯುವ ಆತಂಕ
ಈ ಮಧ್ಯೆ ಬಿಜೆಪಿಯು ಮತ್ತೆ ವಲಸಿಗರಿಗೆ ಮಣೆ ಹಾಕುವ ಮೂಲಕ ಸ್ಥಳೀಯ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣ ಆಗಿದೆ. ಹೀಗಾಗಿ ಕಲಘಟಗಿಯ ಸ್ಥಳೀಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಇದೀಗ ಸಂಸದ ಪ್ರಹ್ಲಾದ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿರುದ್ಧ ತಿರುಗಿ ಬಿದ್ದಿದ್ದು, ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರಹ್ಲಾದ್ ಜೋಶಿ- ಸಂತೋಷ್ ಲಾಡ್ ಫೋಟೋ ವೈರಲ್
ಕಲಘಟಗಿ ಮತಕ್ಷೇತ್ರ ವಿಚಾರದಲ್ಲಿ ಸಂಸದ ಪ್ರಹ್ಲಾದ ಜೋಶಿ, ಸಚಿವ ಸಂತೋಷ ಲಾಡ್ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಲಾಡ್ ಗೆಲ್ಲಿಸುವ ಉದ್ದೇಶದಿಂದ ಜೋಶಿ, ಶೆಟ್ಟರ್ ಅವರು ಮಹೇಶ ಟೆಂಗಿನಕಾಯಿಗೆ ಟಿಕೆಟ್ ಸಿಗುವಂತೆ ಮಾಡಿ, ಪರೋಕ್ಷವಾಗಿ ಲಾಡ್ ಅವರ ಗೆಲುವಿಗೆ ಶ್ರಮಿಸುತಿದ್ದಾರೆ ಎಂಬ ಆರೋಪಗಳು ಸಾಮಾನ್ಯವಾಗಿವೆ
ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್
ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡ ಸಿ.ಎಂ.ನಿಂಬಣ್ಣ ಅವರಿಗೆ ಅನ್ಯಾಯ ಆಗಿರುವುದನ್ನು ಖಂಡಿಸಿ, ಕಲಘಟಗಿಯ ಬಿಜೆಪಿ ಕಾರ್ಯಕರ್ತ, ತಮ್ಮ ಫೇಸ್ ಬುಕ್ ಖಾತೆಯಲ್ಲಿ ಜೋಶಿ, ಶೆಟ್ಟರ್ ಕೈ ಮುಗಿಯುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿ, 'ನುಂಗಿ ನೀರು ಕುಡಿದು ಧಾರವಾಡ ಜಿಲ್ಲೆಯನ್ನು ಹಾಳು ಮಾಡಿದ ಹೆಮ್ಮೆಯ ನಾಯಕರು' ಎಂದು ಬರೆದುಕೊಂಡಿದ್ದಾರೆ.
ಆರೋಪ ಅಲ್ಲಗಳೆದ ಜೋಶಿ, ಶೆಟ್ಟರ್ ಬೆಂಬಲಿಗರು
ಹೊಂದಾಣಿಕೆ ರಾಜಕಾರಣ ಎಂಬ ಆರೋಪಕ್ಕೆ ಪೂರಕವಾಗಿ ಜೋಶಿ ಹಾಗೂ ಲಾಡ್ ಕೈ ಕುಲುಕಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಆದರೆ ಇದನ್ನು ಜೋಶಿ, ಶೆಟ್ಟರ್ ಬೆಂಬಲಿಗರು ಅಲ್ಲಗಳೆದಿದ್ದು, ಆಕಸ್ಮಿಕವಾಗಿ ದಾರಿ ಮಧ್ಯೆ ಮತ್ತು ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಚಿತ್ರಗಳು ಎಂದು ಹೇಳಿಕೊಳ್ಳುತ್ತಿದ್ದಾರೆ.
ಮತದಾರರ ಮೇಲೆ ವ್ಯತಿರಿಕ್ತ ಪರಿಣಾಮ
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಟಿಕೆಟ್ ಗಾಗಿ ನಡೆಯುತ್ತಿರುವ ಆರೋಪ -ಪ್ರತ್ಯಾರೋಪಗಳು ಮತದಾರರ ಮೇಲೆ ಇದರ ವ್ಯತಿರಿಕ್ತ ಪ್ರಭಾವ ಬೀರಲಿದೆ. ಆದರೆ 150ಕ್ಕೂ ಹೆಚ್ಚು ಸೀಟ್ ಗಳನ್ನು ಗೆಲ್ಲುವ ಉಮೇದಿನಲ್ಲಿರುವ ಬಿಜೆಪಿ ನಾಯಕರು ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತಾರಾ ಎಂಬುದನ್ನು ಕಾದುನೋಡಬೇಕು.