ರಾಜ್ಯದಲ್ಲಿ ಬಿಜೆಪಿ ಸಾಧನೆ ಶೂನ್ಯ: ಹುಬ್ಬಳ್ಳಿಯಲ್ಲಿ ವಿ.ಎಸ್ ಉಗ್ರಪ್ಪ ಆಕ್ರೋಶ
ಹುಬ್ಬಳ್ಳಿ, ನವೆಂಬರ್, 28: ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ವಿಧಾನಸೌಧ ಬಿಟ್ಟು ಸಂಕಲ್ಪ ಯಾತ್ರೆ ಹೆಸರಿನಲ್ಲಿ ರಾಜ್ಯ ಸಂಚಾರ ಮಾಡುತ್ತಿದ್ದಾರೆ. ಅವರು ಮಾಡಿದ ಸಾಧನೆ ಶೂನ್ಯವಾಗಿದೆ. ಹೀಗಾಗಿ ಅವರು ಮಾಡಿರುವ ಸಾಧನೆಯ ಕುರಿತಾಗಿ ಶ್ವೇತ ಪತ್ರ ಹೊರಡಿಸಿ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ವಿ.ಎಸ್ ಉಗ್ರಪ್ಪ ಹುಬ್ಬಳ್ಳಿಯಲ್ಲಿ ಒತ್ತಾಯಿಸಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇವತ್ತು ಚುನಾವಣೆ ಯುದ್ಧದ ಕಾರ್ಮೋಡಗಳಿವೆ. ಈ ವೇಳೆಯಲ್ಲಿ ಆಡಳಿತ ಸೂತ್ರ ಹಿಡಿದಿರುವ ರಾಜ್ಯದ ಮುಖ್ಯಮಂತ್ರಿಗಳು, ಮುಖಂಡರುಗಳು ವಿಧಾನಸೌಧ ಬಿಟ್ಟು ಜನಸಂಕಲ್ಪ ಯಾತ್ರೆ ಮೂಲಕ ರಾಜ್ಯ ತಿರುಗುತ್ತಾ ಇದ್ದಾರೆ. ಬಿಜೆಪಿ ಹೈಕಮಾಂಡ್ 150 ಟಾರ್ಗೆಟ್ ಕೊಟ್ಟಿದ್ದಾರೆ ಎಂದು ಹುಮ್ಮಸ್ಸಿನಿಂದ ಬಸವರಾಜ ಬೊಮ್ಮಾಯಿ ಅವರು ಪ್ರಯತ್ನ ಮಾಡುತ್ತಾ ಇದ್ದಾರೆ ಎಂದರು.
ಹುಬ್ಬಳ್ಳಿ: ಶೇ. 40 ಆಯ್ತು, ಈಗ ಮತ್ತೆ ರಾಜ್ಯ ಸರ್ಕಾರದ ವಿರುದ್ಧ ಶೇ. 25 ಕಮಿಷನ್ ಆರೋಪ
ಆದರೆ ಸಿಎಂ ಬಸವರಾಜ ಬೊಮ್ಮಾಯಿ ಮಾಡಿದ ಸಾಧನೆ ಏನು? ಎಲ್ಲಾ ಇಲಾಖೆಯಲ್ಲಿ 40% ಭ್ರಷ್ಟಾಚಾರ ಮಾಡಿದ್ದಾರೆ. 540 ಸಬ್ ಇನ್ಸ್ಪೆಕ್ಟರ್ ನೇಮಕಾತಿ ಅವ್ಯವಹಾರ ಮಾಡಿ ಎಜಿಡಿಪಿ ಸೇರಿದಂತೆ 50ಕ್ಕೂ ಹೆಚ್ಚು ಜನರನ್ನು ಬಂಧನ ಮಾಡಿಸಿದ್ದರು. ಚುನಾವಣೆ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಬಿಜೆಪಿ ವಿರೋಧಿ ಜನರ ಮತದಾರರ ಹೆಸರನ್ನು ಡಿಲಿಟ್ ಮಾಡಿಸಿದ್ದಾರೆ. ಇನ್ನು ಕೊರೊನಾ ಸಂದರ್ಭದಲ್ಲಿ ಚಾಮರಾಜನಗರದಲ್ಲಿ 30 ಜನರು ಮರಣ ಹೊಂದಿದ್ದರೂ ಸಹ, ಬರೀ 3 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ನರ್ಸ್ ಅವರ ಪರೀಕ್ಷೆ ಮಾಸ್ಕ್ ಕಾಫಿಂಗ್ ಆಗುವ ಹಿನ್ನೆಲೆಯಲ್ಲಿ ಸ್ಟಿಂಗ್ ಆಪರೇಷನ್ ನಂತರ 1.50 ಲಕ್ಷ ವಿಧ್ಯಾರ್ಥಿಗಳ ಪರೀಕ್ಷೆಯನ್ನು ಮುಂದೂಡಿದ್ದರು. ಜೊತೆಗೆ ಒಂದೊಂದು ಪರೀಕ್ಷಾ ಕೇಂದ್ರದಿಂದ 25 ಲಕ್ಷ ಕಿಕ್ ಬ್ಯಾಕ್ ಅನ್ನು ಸಂಬಂಧಪಟ್ಟ ಇಲಾಖೆಯವರು ತೆಗೆದುಕೊಂಡಿದ್ದಾರೆ. ಇವೆ ಬಸವರಾಜ ಬೊಮ್ಮಾಯಿ ಅವರ ಸಾಧನೆ ಆಗಿವೆ ಎಂದು ಆರೋಪಿಸಿದರು.
ಬಿಜೆಪಿ ವಿರುದ್ಧ ವಿ.ಎಸ್ ಉಗ್ರಪ್ಪ ಆಕ್ರೋಶ
ರಾಜ್ಯ, ಕೇಂದ್ರದಲ್ಲಿ ಡಬಲ್ ಇಂಜಿನ್ ಸರ್ಕಾರ ಇದ್ದು, ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ. ಅಧಿಕಾರಕ್ಕೆ ಬರುವ ಮುಂಚೆಯೇ 1 ಕೋಟಿಗೂ ಅಧಿಕ ಉದ್ಯೋಗ ಸೃಷ್ಟಿ ಜೊತೆಗೆ ಬೆಲೆ ಕಡಿಮೆ ಮಾಡುವ ಭರವಸೆ ಕೊಟ್ಟಿದ್ದೀರಿ. ಆದರೆ ಇದೀಗ ನೀವು ಮಾಡಿದ್ದು ಏನು? ಇದೀಗ ಮಾರುಕಟ್ಟೆಯಲ್ಲಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿವೆ. ಈ ಸರ್ಕಾರದಲ್ಲಿ ಹೊಸದಾಗಿ ನೀರಾವರಿ ಯೋಜನೆ ಮಾಡಿಲ್ಲ. ಸರ್ಕಾರ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲವಾಗಿವೆ. ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಜನರನ್ನು ದಾರಿ ತಪ್ಪಿಸುತ್ತಿದೆ. ದೇಶದಲ್ಲಿ ಬಡತನ ಹೆಚ್ಚುತ್ತಲೇ ಇದೆ. ಈ ಹಿಂದೆ ಹಸಿದವರ ಸಂಖ್ಯೆ 65 ಇದ್ದು, ಇದೀಗ 107ನೇ ಸ್ಥಾನಕ್ಕೆ ಏರಿದೆ. ಇದೇ ಬಿಜೆಪಿ ಸರ್ಕಾರದ ಸಾಧನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೊಮ್ಮಾಯಿ ಜನತಾ ದಳಕ್ಕೆ ಬಂದರೆ ಅದ್ಧೂರಿ ಸ್ವಾಗತ: ಸಿಎಂ ಇಬ್ರಾಹಿಂ
ಸಚಿವರ ವಿರುದ್ಧ ಪ್ರಕರಣ ದಾಖಲು
ಗುಜರಾತ್ ಮಾದರಿಯ ಕಾಮನ್ ಸಿವಿಲ್ ಕೋಡ್ ತರುವ ನಿಟ್ಟಿನಲ್ಲಿ ಮುಂದಾಗುತ್ತಿದ್ದೀರಿ. ನೀವು ಪದೇ ಪದೇ ಒನ್ ನೇಷನ್, ಒನ್ ಟ್ಯಾಕ್ಸ್ ಎಂದು ಹೇಳುತ್ತೀರಿ. 370 ಕಲಂ ಪ್ರಕಾರ ಇದನ್ನು ಜಾರಿ ಮಾಡಿ. ಪ್ರಧಾನಿ ನರೇಂದ್ರ ಮೋದಿ ಅವರು ನಾನು ತಿನ್ನುವುದಿಲ್ಲ, ತಿನ್ನುವವರಿಗೆ ಬಿಡುವುದಿಲ್ಲ ಎಂದು ಹೇಳುತ್ತಾರೆ. ಆದರೆ ಬಿಜೆಪಿಯ ಆರೋಗ್ಯ ಸಚಿವ ಡಾ.ಸುಧಾಕರ್, ಸಚಿವ ಆನಂದ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿವೆ. ಹಾಗೂ ಸಾರಿಗೆ ಸಚಿವ ಶ್ರೀರಾಮುಲು ಮೇಲೆ ಚಾರ್ಜ್ ಸೀಟ್ ಸಲ್ಲಿಕೆ ಆಗಿದೆ. ಈ ಬಗ್ಗೆ ಬಿಜೆಪಿ ಮುಖಂಡರು ಮಾತನಾಡಲಿ ಎಂದು ಕುಟುಕಿದರು.
ಕಾಂಗ್ರೆಸ್ ಹಿಂದೂ ವಿರೋಧಿ ಅಲ್ಲ
ರಾಜ್ಯ ಬಿಜೆಪಿ ಸರ್ಕಾರ ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸಿ ದೊಡ್ಡದಾಗಿ ಸಾಧನೆ ಮಾಡಿದ್ದೇವೆ ಎಂದುಕೊಂಡಿದೆ. ಹಾಗೆಯೇ ಈ ಕುರಿತು ದೊಡ್ಡದಾಗಿ ಬಳ್ಳಾರಿಯಲ್ಲಿ ಸಮಾವೇಶ ಮಾಡಿದ್ದಾರೆ. ಬಿಜೆಪಿಗೂ ಸಾಮಾಜಿಕ ನ್ಯಾಯಕ್ಕೂ ಏನು ಸಂಬಂಧ? ಇದೇ ಬಿಜೆಪಿ ಮುಖಂಡರು ಈ ಹಿಂದೆ ಸಂವಿಧಾನ ಕಿತ್ತು ಎಸೆಯುವಂತೆ ಮಾತನಾಡಿದ್ದರು. ಮೀಸಲಾತಿ ಕಿತ್ತು ಹಾಕಬೇಕು ಎಂದು ಆರ್ಎಸ್ಎಸ್ನ ಪ್ರಮುಖರು ಹೇಳಿದ್ದರು. ಆದರೆ ಕಾಂಗ್ರೆಸ್ ಹಿಂದೂ ವಿರೋಧಿ ಅಲ್ಲ, ಎಲ್ಲರನ್ನೂ ಸಮಾನವಾಗಿ ನೋಡುವ ಪಕ್ಷವಾಗಿದೆ ಎಂದರು.
ಶ್ರೀರಾಮುಲುಗೆ ವಿ.ಎಸ್ ಉಗ್ರಪ್ಪ ತರಾಟೆ
ಸಚಿವ ಬಿ.ಶ್ರೀರಾಮುಲು ಬಾಯಿಗೆ ಬಂದಂತೆ ಕಾಂಗ್ರೆಸ್ ಹೈಕಮಾಂಡ್, ರಾಜ್ಯದ ಮುಖಂಡರ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ತಾವು ಬಹುದೊಡ್ಡ ಸಾಧನೆ ಮಾಡಿದ ಹಾಗೇ ಬಿಂಬಿಸಿಕೊಳ್ಳುತ್ತಾರೆ. ಬಿ.ಶ್ರೀರಾಮುಲು ಅವರು ಸೋತವರು ಈ ಹಿಂದೆ ಬಳ್ಳಾರಿ ಬಿಟ್ಟು, ಬಾದಾಮಿ, ಮೊಳಕಾಲ್ಮೂರಿಗೆ ಹೋಗಿದ್ದಾರೆ. ಹೀಗಿರುವಾಗ ಇನ್ನೊಬ್ಬರ ಸೋಲಿನ ಬಗ್ಗೆ ಮಾತನಾಡುವುದು ತಪ್ಪು ಎಂದು ಆಕ್ರೋಶ ಹೊರಹಾಕಿದರು.