ಸಿಎಎ, ಎನ್ಆರ್ಸಿ ಪರ ಜಾಗೃತಿ ಮೂಡಿಸಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ
ಬೆಂಗಳೂರು, ಜ. 08: ಸಿಎಎ ಹಾಗೂ ಎನ್ಆರ್ಸಿ ಪರವಾಗಿ ಜಾಗೃತಿ ಸಮಾವೇಶ ಹುಬ್ಬಳ್ಳಿಯಲ್ಲಿ ಇದೇ ಜನವರಿ 18ರಂದು ನಡೆಯಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ. ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಅಪಪ್ರಚಾರದ ಬಗ್ಗೆ ಜನಜಾಗೃತಿ ಮೂಡಿಸುವ ಮೊದಲ ಹಂತದ ಅಭಿಯಾನ ಯಶಸ್ವಿಯಾಗಿದ್ದು, ಈಗ ಎರಡನೇ ಹಂತದ ಕಾರ್ಯಕ್ರಮಕ್ಕೆ ಸಿದ್ದತೆ ನಡೆಸಲಾಗುತ್ತಿದೆ. ಅಮಿತ್ ಶಾ ಸೇರಿದಂತೆ ಕೇಂದ್ರದ ನಾಯಕರು ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ ಎಂದಿದ್ದಾರೆ.
ಭಾರತೀಯ ಜನತಾ ಪಾರ್ಟಿ ಸಿಎಎ ಹಾಗೂ ಎನ್ಆರ್ಸಿ ಪರ ಅಭಿಯಾನ ಮುಂದುವರೆಸಿದ್ದು, ಈಗಾಗಲೇ ಎರಡೂ ಕಾಯ್ದೆಗಳನ್ನು ದೇಶದ ಶೇಕಡಾ 99ರಷ್ಟು ಜನರು ಒಪ್ಪಿಕೊಂಡಿದ್ದಾರೆ ಎಂದು ಮಹೇಶ್ ಟೆಂಗಿನಕಾಯಿ ಮಾಹಿತಿ ಕೊಟ್ಟಿದ್ದಾರೆ. ಸಿಎಎ ಹಾಗೂ ಎನ್ಆರ್ಸಿ ಕುರಿತು ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಅಲ್ಪ ಸಂಖ್ಯಾತರನ್ನ ಎತ್ತಿಕಟ್ಟುವ ಕೆಲಸ ಮಾಡ್ತಿವೆ. ಈ ಪಿತೂರಿ, ಷಡ್ಯಂತ್ರ, ಕುತಂತ್ರವನ್ನ ಬಿಜೆಪಿ ಬಯಲು ಗೊಳಿಸಿದೆ ಎಂದರು
ಜನವರಿ 18ಕ್ಕೆ ಹುಬ್ಬಳ್ಳಿಗೆ ಬರಲಿದ್ದಾರೆ ಅಮಿತ್ ಶಾ
ಮೊದಲ ಹಂತದ ಅಭಿಯಾನದಲ್ಲಿ 4.65 ಸಾವಿರ ಮನೆಗಳನ್ನು ತಲುಪಿದ್ದೇವೆ,30 ಲಕ್ಷ ಮನೆಗಳನ್ನು ತಲುಪುವ ಗುರಿಯೊಂದಿಗೆ ಅಭಿಯಾನ ಮುಂದವರೆದಿದೆ, ಇದೀಗ ಎರಡನೇ ಹಂತದ ಅಭಿಯಾನ ಅಂಗವಾಗಿ ಜನವರಿ 18 ರಂದು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾಗವಹಿಸಲಿದ್ದಾರೆ ಒಂದು ಲಕ್ಷಕ್ಕೂ ಹೆಚ್ಚಿನ ಜನ ಸೇರಯವ ನಿರೀಕ್ಷೆ ಇದೆ. ಜನವರಿ 9ರಂದು ಸಿಂಧನೂರು ಮತ್ತು ಮಸ್ಕಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಭಾಗಿಯಾಗಲಿದ್ದಾರೆ. 11ರಂದು ಕಲಬುರ್ಗಿ ಮತ್ತು ಯಾದಗಿರಿಯಲ್ಲಿ ನಡೆಯುವ ಬೃಹತ್ ರ್ಯಾಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಭಾಗವಹಿಸಲಿದ್ದಾರೆ ಅಂದೇ ಬೆಳಗಾವಿ ಮತ್ತು ಚಿಕ್ಕೋಡಿ ಜಿಲ್ಲೆಗಳಲ್ಲಿ ನಡೆಯುವ ಸಮಾವೇಶದಲ್ಲಿ ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಭಾಗಿಯಾಗಲಿದ್ದು, 12ರಂದು ರಾಯಚೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, 13ರಂದು ಡಿಸಿಎಂ ಲಕ್ಷ್ಮಣ ಸವದಿ ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಲ್ಲಿನ. ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ನಂತರ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಸಿಎಎ ಹಾಗೂ ಎನ್ ಆರ್ ಸಿ ಪರ ಅಭಿಯಾನ ನಡೆಸುತ್ತಿದ್ದೇವೆ,ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಅಲ್ಪ ಸಂಖ್ಯಾತರನ್ನ ಎತ್ತಿಕಟ್ಟುವ ಕೆಲಸ ಮಾಡ್ತಿವೆ, ಈ ಪಿತೂರಿ, ಷಡ್ಯಂತ್ರ, ಕುತಂತ್ರವನ್ನ ಬಿಜೆಪಿ ಬಯಲುಗೊಳಿಸಿದೆ, ಈ ದೇಶದ ಒಬ್ಬೇ ಒಬ್ಬ ಮುಸ್ಲಿಂ ಕೂಡ ದೇಶದಿಂದ ಹೊರ ಹೋಗಲ್ಲ, ಎಲ್ಲರಲ್ಲೂ ಜಾಗೃತಿ ಮೂಡಿಸುವುದರಲ್ಲಿ ಬಿಜೆಪಿ ಯಶಸ್ವಿಯಾಗಿದೆ ವಿರೋಧ ಮಾಡ್ತಿದ್ದವರೆಲ್ಲಾ ಈಗ ಶಾಂತರಾಗಿದ್ದಾರೆ ಎಂದರು.
ಈ ಕಾಯ್ದೆಯಲ್ಲಿ ಮುಸ್ಲಿಂ ವಿರುದ್ದ ಒಂದೇ ಒಂದು ಅಂಶ ತೋರಿಸಲಿ, ಈ ಬಗ್ಗೆ ಕರಪತ್ರಗಳನ್ನ ಮನೆಮನೆಗೆ ಹೋಗಿ ಹಂಚಿ ಅರಿವು ಮೂಡಿಸಿದ್ದೇವೆ, ಹೊಸಪೇಟೆ ಸೇರಿ ಕೆಲ ಕಡೆಗಳಲ್ಲಿ ಗೋ ಬ್ಯಾಕ್ ಅಂತ ಹೇಳಿಸುತ್ತಾರೆ ಆದರೆ ದೇಶದಲ್ಲಿ ಶೇ.99 ಜನ ಕಾಯ್ದೆಯನ್ನ ಸ್ವಾಗತ ಮಾಡಿದ್ದಾರೆ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನದಿಂದ ಹಿಂದೂಗಳಿಗೆ ಪೌರತ್ವ ಕೊಟ್ಟೇ ಕೊಡ್ತೀವಿ ಅಂತಹವರಿಗೆ ಈಗ ನೆಮ್ಮದಿ ಸಿಕ್ಕಿದೆ ಎಂದರು.
ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರಿಗೆ ಈಗ ಅರಿವಾಗಿದೆ ಹಾಗಾಗಿಯೇ ಅವರೂ ಸುಮ್ಮನಾಗಿದ್ದಾರೆ, ಇದರ ವಿರುದ್ದ ತಪ್ಪಾಗಿ ಭಾವಿಸಬಾರದು ಅಂತ ಅವರಿಗೂ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 30ಲಕ್ಷ ಮನೆಗಳಿಗೆ ತಲುಪುವ ಗುರಿ ಹೊಂದಿದ್ದೇವೆ. ಎರಡನೇ ಹಂತದಲ್ಲಿ ಎಲ್ಲಾ ನಾಯಕರನ್ನೊಳಗೊಂಡ ಮನೆಗಳ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ, ಜನವರಿ 11, 12 ರಂದು ಎರಡು ದಿನ ನಮ್ಮ ಎಲ್ಲಾ ನಾಯಕರು ಸಂಪೂರ್ಣ ಮನೆ-ಮನ ಅಭಿಯಾನ ನಡೆಸಲಿದ್ದಾರೆ ಎಂದರು.
ಸಿಎಎ ಬೆಂಬಲಿಸ 88662 88662 ನಂಬರ್ ಗೆ ಮಿಸ್ ಕಾಲ್ ಕೊಡುವಂತೆ ಬೆಂಬಲ ಕೋರಿ ಮನವಿ ಮಾಡುತ್ತಿದ್ದೇವೆ, ಭಾರತ್ ಮಾತಾ ಪೂಜಾ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದ್ದೇವೆ, ಜಿಲ್ಲಾ ಪಂಚಾಯತ್ ಕೇಂದ್ರಗಳಲ್ಲಿ ಚಾಯ್ ಪೆ ಚರ್ಚಾ, ಬೈಕ್ ರ್ಯಾಲಿಗಳನ್ನ ಹಮ್ಮಿಕೊಂಡಿದ್ದೇವೆ, ಕಟ್ಟೆ ಚರ್ಚೆಗಳನ್ನೂ ಆಯೋಜಿಸಿ ತಪ್ಪು ಕಲ್ಪನೆ ಹೋಗಲಾಡಿಸುತ್ತಿದ್ದೇವೆ, ಅನುಮಾನಗಳ ಪರಿಹರಿಸುವ ಪ್ರಯತ್ನ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.