ಕನಕಪುರದ ಆಟ ಇಲ್ಲಿ ನಡೆಯೊಲ್ಲ: ಡಿಕೆಶಿಗೆ ಶೆಟ್ಟರ್ ವಾರ್ನಿಂಗ್
Recommended Video
ಹುಬ್ಬಳ್ಳಿ, ಮೇ 9: 'ಸಚಿವ ಡಿ.ಕೆ. ಶಿವಕುಮಾರ್ ಅವರು ನಮ್ಮ ಕಾರ್ಯಕರ್ತರನ್ನು ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಮುಂದುವರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ' ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದರು.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ಕುಂದಗೋಳ ಕ್ಷೇತ್ರದ ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ಪರ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕುಂದಗೋಳ : ಡಿ.ಕೆ.ಶಿವಕುಮಾರ್ ತಂತ್ರದಿಂದ ಬಿಜೆಪಿಗೆ ನಡುಕ
ಡಿ.ಕೆ. ಶಿವಕುಮಾರ್ ಅವರಿಗೆ ಇಲ್ಲಿ ಕಾರ್ಯಕರ್ತರ ಕೊರತೆ ಇದೆ. ಹೀಗಾಗಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಸೆಳೆಯುತ್ತಿದ್ದಾರೆ. ಅವರಿಗೆ ಫೋನ್ ಮಾಡಿ ಆಹ್ವಾನ ನೀಡುತ್ತಿದ್ದಾರೆ. ಚುನಾವಣೆಯಲ್ಲಿ ಕೆಲಸ ಮಾಡುವುದನ್ನು ಅವರು ಕೇವಲ ಹೋಟೆಲ್ ಮತ್ತು ರೆಸಾರ್ಟ್ಗಳಲ್ಲಿ ಸಭೆ ನಡೆಸುವುದು ಎಂದು ಭಾವಿಸಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಕಾರ್ಯಕರ್ತರು ಮಾರಾಟದ ವಸ್ತುಗಳಲ್ಲ. ಇಲ್ಲಿನ ಜನ ಸ್ವಾಭಿಮಾನಿಗಳಿದ್ದಾರೆ. ಕನಕಪುರದ ಡಾಕೂಗಿರಿ, ಗೂಂಡಾಗಿರಿ, ದರ್ಪ ಮತ್ತು ಹಣದ ಪ್ರಭಾವ ಇಲ್ಲಿ ನಡೆಯುವುದಿಲ್ಲ. ನೀವೇನು ಖರೀದಿ ಮಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಡಿಕೆಶಿ ತರಹ ಲೀಡರ್ ಆಗ್ಬೇಕು ಅಂದ್ರೆ ಕಾರ್ಯಕರ್ತರು ಏನ್ಮಾಡ್ಬೇಕು?
ಉತ್ತರ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಧಮ್ ಇಲ್ಲ. ಹಾಗಾಗಿ ಕುಂದಗೋಳಕ್ಕೆ ಡಿಕೆಶಿ ಬಂದಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ಸೆಳೆಯುತ್ತಿದ್ದಾರೆ. ಇದು ಕನಕಪುರ, ರಾಮನಗರ ಅಲ್ಲ. ಇಲ್ಲಿ ಗೂಂಡಾಗಿರಿ ನಡೆಯುವುದಿಲ್ಲ ಎಂದರು.
ರಾಮುಲು ಹೇಳಿಕೆಗೆ ಸಮರ್ಥನೆ
ಇತ್ತೀಚೆಗೆ ನಿಧನರಾದ ಕುಂದಗೋಳ ಕ್ಷೇತ್ರದ ಶಾಸಕ, ಮಾಜಿ ಸಚಿವ ಸಿ.ಎಸ್. ಶಿವಳ್ಳಿ ಅವರ ಸಾವಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಒತ್ತಡವೇ ಕಾರಣ ಎಂಬ ಬಿಜೆಪಿ ಶಾಸಕ ಬಿ. ಶ್ರೀರಾಮುಲು ಅವರ ಹೇಳಿಕೆಯನ್ನು ಶೆಟ್ಟರ್ ಸಮರ್ಥಿಸಿಕೊಂಡರು.
ತಾವು ಕುರುಬ ಸಮುದಾಯದ ನಾಯಕ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ಅದು ಸತ್ಯವೇ ಆಗಿದ್ದರೆ ಮೊದಲ ಹಂತದ ಸಂಪುಟ ವಿಸ್ತರಣೆ ಸಂದರ್ಭದಲ್ಲಿಯೇ ಶಿವಳ್ಳಿ ಅವರಿಗೆ ಏಕೆ ಸಚಿವ ಸ್ಥಾನ ನೀಡಲಿಲ್ಲ? ಸಚಿವರನ್ನಾಗಿ ಮಾಡಿದರೂ ಅವರಿಗೆ ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ಏಕೆ ಕೊಡಲಿಲ್ಲ? ಎಂದು ಪ್ರಶ್ನಿಸಿದರು.
ಶಿವಳ್ಳಿ ಅವರಲ್ಲಿ ಕೊರಗು ಇತ್ತು
ಮೊದಲ ಹಂತದ ಸಂಪುಟ ವಿಸ್ತರಣೆ ವೇಳೆ ತಮ್ಮನ್ನು ಸಚಿವರನ್ನಾಗಿ ಮಾಡದೆ ಇರುವುದು ಸಿಎಸ್ ಶಿವಳ್ಳಿ ಅವರಿಗೆ ತೀವ್ರ ಬೇಸರ ಉಂಟುಮಾಡಿತ್ತು. ಸಿದ್ದರಾಮಯ್ಯ ಮನಸ್ಸು ಮಾಡಿದ್ದರೆ ಅವರನ್ನು ಸಿಎಂ ಮಾಡಬಹುದಾಗಿತ್ತು,. ಅವರು ಹಿರಿಯ ಮುಖಂಡರು. ಅದನ್ನು ಹಲವು ಬಾರಿ ನನ್ನ ಬಳಿ ಕೂಡ ಅವರು ಹೇಳಿಕೊಂಡಿದ್ದರು. ಅವರು ಮಾನಸಿಕವಾಗಿ ನೊಂದಿದ್ದರು. ಅವರಲ್ಲಿ ಆ ಕೊರಗು ಇತ್ತು ಎಂದು ಶೆಟ್ಟರ್ ಹೇಳಿದರು.
ಸಿದ್ದರಾಮಯ್ಯ ಮಹಾ ಸುಳ್ಳುಗಾರ
ಇದೇ ಕೊನೆಯ ಚುನಾವಣೆ. ಬಳಿಕ ನಿವೃತ್ತಿಯಾಗುತ್ತೇನೆ ಎಂದು ಮುಖ್ಯಮಂತ್ರಿಯಾಗುವ ಮೊದಲು ಹೇಳಿದ್ದ ಸಿದ್ದರಾಮಯ್ಯ ವರಸೆ ಬದಲಿಸಿ ಪುನಃ ಚುನಾವಣೆಗೆ ಸ್ಪರ್ಧಿಸಿದರು. ದಲಿತ ನಾಯಕ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದ್ದರು. ಈಗ ಅವಕಾಶ ಸಿಕ್ಕರೆ ಮತ್ತೆ ಸಿಎಂ ಆಗುತ್ತೇನೆ ಎನ್ನುತ್ತಿದ್ದಾರೆ. ಅವರೊಬ್ಬ ಮಹಾಸುಳ್ಳುಗಾರರಲ್ಲಿ ಮಹಾಸುಳ್ಳುಗಾರ ಎಂದು ಟೀಕಿಸಿದರು.
ಪರಸ್ಪರ ಚೂರಿ ಹಾಕಿಕೊಳ್ಳುತ್ತಿದ್ದಾರೆ
ಈ ಮೈತ್ರಿ ಲೋಕಸಭೆ ಚುನಾವಣೆಯವರೆಗೆ ಮಾತ್ರ ಇರಲಿದೆ ಎಂದು ಸ್ವತಃ ಸಿದ್ದರಾಮಯ್ಯ ಈ ಹಿಂದೆ ಮುಖಂಡರ ಬಳಿ ಹೇಳಿದ್ದರು. ಮೈತ್ರಿ ಪಕ್ಷಗಳ ಮುಖಂಡರಲ್ಲಿ ಒಗ್ಗಟ್ಟಿಲ್ಲ. ಅವರೇ ಒಬ್ಬರಿಗೊಬ್ಬರು ಬೆನ್ನಿಗೆ ಚೂರಿ ಹಾಕುವುದರಲ್ಲಿ ಮಗ್ನರಾಗಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಜೆಡಿಎಸ್ಗೆ ನೀಡಿರುವ ಬೆಂಬಲವನ್ನು ಕಾಂಗ್ರೆಸ್ ವಾಪಸ್ ಪಡೆದುಕೊಳ್ಳಲಿದೆ. ಸರ್ಕಾರ ಬೀಳಲಿದೆ ಎಂದರು.