ಜೆಎನ್ ಯು ವಿವಿ ಹಲ್ಲೆಯನ್ನು ಬಿಜೆಪಿ ಖಂಡಿಸುತ್ತದೆ: ಪ್ರಲ್ಹಾದ ಜೋಷಿ
ಹುಬ್ಬಳ್ಳಿ, ಜನವರಿ 06: ದೆಹಲಿಯ ಜೆಎನ್ ಯು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಹಲ್ಲೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಜೋಷಿ ಅವರು, ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿ ನಾಯಕಿ ಮೇಲೆ ಮಾಡಿದ ಹಲ್ಲೆಯನ್ನು ನಾವು ಸಹಿಸುವುದಿಲ್ಲ ಎಂದರು.
ಜೆಎನ್ಯು ಗಲಭೆ; ಮಗಳು ಹೋರಾಟದಿಂದ ಹಿಂದೆ ಸರಿಯಲ್ಲ
ಆದರೆ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಬಿಜೆಪಿ ಪಕ್ಷದ ಕೈವಾಡವಿದೆ ಎಂದು ಕಾಂಗ್ರೆಸ್ ವ್ಯರ್ಥ ಆರೋಪ ಮಾಡುತ್ತಿದೆ. ಘಟನೆಯ ಬಗ್ಗೆ ಸರ್ಕಾರ ತನಿಖೆ ಕೈಗೊಳ್ಳಲಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಜೆಎನ್ ಯು ನಲ್ಲಿ ನಡೆಯುತ್ತಿರುವ ಉಳಿದ ಘಟನೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳು ಸಮಾಜಕ್ಕೆ ಜಾಗೃತಿ ಮೂಡಿಸಬೇಕಿದೆ. ಜೆಎನ್ ಯುನಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದರು.
ಜೆಎನ್ಯು ಗಲಭೆ; ಅರವಿಂದ್ ಕೇಜ್ರಿವಾಲ್ ಹೇಳುವುದೇನು?
ನನಗೆ ಬಂದಿರುವ ಮಾಹಿತಿ ಪ್ರಕಾರ ನಿನ್ನೆ ನಡೆದ ಘಟನೆ ಕೇವಲ ಎರಡು ಗುಂಪುಗಳು ನಡುವಿನ ಜಗಳವಾಗಿದೆ. ಆ ಜಗಳಕ್ಕೇ ರಾಜಕಾರಣ ಬೆರೆಸುತ್ತಿರುವುದು ಕಾಂಗ್ರೆಸ್ ನ ಅತ್ಯಂತ ಕ್ಷುಲ್ಲಕ ಮನೋಭಾವವಾಗಿದೆ ಜೋಶಿ ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.
ನಿನ್ನೆ ಸಂಜೆ ಜೆಎನ್ ಯು ವಿದ್ಯಾರ್ಥಿ ನಾಯಕಿ ಐಷ್ ಘೋಷ್ ಮೇಲೆ ಹಲ್ಲೆಯಾಗಿತ್ತು. ಮೂವರು ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬಂದು ಹಲ್ಲೆ ಮಾಡಿ ಹೋಗಿದ್ದರು. ಎಬಿವಿಪಿ ಸಂಘಟನೆಯವರು ಈ ಕೃತ್ಯ ಮಾಡಿದ್ದಾರೆ ಎಂದು ಐಷ್ ಘೋಷ್ ಆರೋಪಿಸಿದ್ದರು.