ಹುಬ್ಬಳ್ಳಿಯ ಬೆಂಗೇರಿ, ರಾಷ್ಟ್ರಧ್ವಜ ತಯಾರಿಸುವ ದೇಶದ ಏಕೈಕ ಘಟಕ
ಹುಬ್ಬಳ್ಳಿ, ಆಗಸ್ಟ್ 11 : ಆಜಾದಿ ಕಾ ಅಮೃತ ಮಹೋತ್ಸವದ ಕಹಳೆ ದೇಶಾದ್ಯಂತ ಮೊಳಗಿದೆ. ಇಡೀ ದೇಶಾದ್ಯಂತ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವಕ್ಕೆ ಜನ ಸನ್ನದ್ಧರಾಗಿದ್ದಾರೆ. ವಿವಿಧ ಹಾಗೂ ವಿಭಿನ್ನ ರೀತಿಯಲ್ಲಿ ದೇಶಾದ್ಯಂತ ಪ್ರತಿಯೊಬ್ಬರ ಮನೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸಲು ದೇಶ ವಾಸಿಗಳು ಸಜ್ಜಾಗಿದ್ದಾರೆ.
ಎಲ್ಲೆಡೆ ತ್ರಿವರ್ಣ ಧ್ವಜ ಹಾರಾಡುವ ಸಂಭ್ರಮ. ಶಾಲಾ-ಕಾಲೇಜುಗಳಲ್ಲಿ, ಕಾರು, ಬೈಕ್ನಂತಹ ವಾಹನಗಳಲ್ಲಿ ಬಾವುಟವು ಹಾರುತ್ತಾ ನಗುವನ್ನು ಬೀರುತ್ತಿರುತ್ತದೆ. ದೆಹಲಿಯ ಕೆಂಪು ಕೋಟೆಯಿಂದ ಹಿಡಿದು, ಭಾರತದ ಎಲ್ಲಾ ಶಾಲಾ-ಕಾಲೇಜು, ಸರಕಾರಿ ಕಚೇರಿಗಳಲ್ಲಿ ಹಾರಾಡುವಂತಹ ಧ್ವಜಗಳೆಲ್ಲಾ ತಯಾರಾಗುವುದು ನಮ್ಮ ಕರ್ನಾಟಕದ ಪ್ರಮುಖ ನಗರದಲ್ಲಿ ಎನ್ನುವುದೇ ನಮಗೆ ಹೆಮ್ಮೆ.
ಹುಬ್ಬಳ್ಳಿಯ ಆರ್ಎಸ್ಎಸ್ ಕಚೇರಿಗೆ ತೆರಳಿ ರಾಷ್ಟ್ರಧ್ವಜ ಕೊಟ್ಟ ಕಾಂಗ್ರೆಸ್ ಕಾರ್ಯಕರ್ತರು
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದ ಬೆಂಗೇರಿ ಎಂಬಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ(ಕೆಕೆಜಿಎಸ್ಎಸ್) ಇಡೀ ದೇಶದಲ್ಲಿಯೇ ಭಾರತ ತ್ರಿವರ್ಣ ಧ್ವಜ ತಯಾರಿಸುವಂತಹ ಏಕೈಕ ಅಧಿಕೃತ ಉತ್ಪಾದನಾ ಮತ್ತು ಸರಬರಾಜು ಮಾಡುವ ತಾಣವಾಗಿದೆ. ದೇಶಾದ್ಯಂತ ತ್ರಿವರ್ಣ ಧ್ವಜದ ಕಂಪು ಸೂಸುವ ಏಕೈಕ ಸ್ಥಳವೇ ಈ ಬೆಂಗೇರಿ.
ಭಾರತೀಯ ಧ್ವಜ ತಯಾರಿಸುವಂತಹ ಏಕೈಕ ಉತ್ಪಾದನಾ ಘಟಕ
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದ ಬೆಂಗೇರಿ ಎಂಬಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ(ಕೆಕೆಜಿಎಸ್ಎಸ್) ಇಡೀ ದೇಶದಲ್ಲಿಯೇ ಭಾರತೀಯ ಧ್ವಜ ತಯಾರಿಸುವಂತಹ ಏಕೈಕ ಉತ್ಪಾದನಾ ಮತ್ತು ಸರಬರಾಜು ಮಾಡುವ ತಾಣವಾಗಿದೆ. ಇಲ್ಲಿ ಯಾವುದೇ ಧರ್ಮದ ಭೇದ-ಭಾವವಿಲ್ಲದೆ, ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಗುಂಪೊಂದು ಒಗ್ಗೂಡಿ ರಾಷ್ಟ್ರಧ್ವಜ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಇತಿಹಾಸ
ಕೆಕೆಜಿಎಸ್ಎಸ್ ಅನ್ನು ನವೆಂಬರ್ 7,1957ರಂದು ಸ್ಥಾಪಿಸಲಾಯಿತು. ಗಾಂಧೀವಾದಿಗಳ ಗುಂಪೊಂದು ಈ ಪ್ರದೇಶದ ಖಾದಿ ಮತ್ತು ಇತರೆ ಗುಡಿ ಕೈಗಾರಿಕೆಗಳ ಬೆಳವಣಿಗೆಗೆ ಒಕ್ಕೂಟವನ್ನು ರಚಿಸಲಾಯಿತು. ವೆಂಕಟೇಶ್ ಮಾಗಡಿ ಮತ್ತು ಶ್ರೀರಂಗ ಕಾಮತ ಎನ್ನುವವರು ಕ್ರಮವಾಗಿ ಮೊದಲ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿದ್ದರು. ಕರ್ನಾಟಕದ ಸುಮಾರು 58 ಸಂಸ್ಥೆಗಳನ್ನು ಈ ಸಂಘದ ಆಶ್ರಯದಲ್ಲಿ ತರಲಾಯಿತು ಮತ್ತು ಹುಬ್ಬಳ್ಳಿಯಲ್ಲಿ ಪ್ರಧಾನ ಕಚೇರಿಯಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿತು. ಇದು 17 ಎಕರೆ ಪ್ರದೇಶದಲ್ಲಿ ಉತ್ಪಾದನಾ ಸೌಲಭ್ಯಗಳ ಜೊತೆಗೆ, ಟೆಕ್ಸಟೈಲ್ ವಿದ್ಯಾರ್ಥಿಗಳಿಗೆ ತರಬೇತಿ ಕಾಲೇಜನ್ನು ಸಹ ಹೊಂದಿದೆ.
ಖಾದಿ ಉತ್ಪಾದನೆಯೂ 1982ರಲ್ಲಿ ಪ್ರಾರಂಭವಾದರೂ ಧ್ವಜ ಉತ್ಪಾದನೆಯು 2004ರಿಂದ ಕಾರ್ಯಚರಣೆಯನ್ನು ನಿರ್ವಹಿಸಲು ಪ್ರಾರಂಭಿಸಿತು. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅನುಕೂಲವಾಗುವಂತೆ ಕೆಕೆಜಿಎಸ್ಎಸ್ನಲ್ಲಿ ಧ್ವಜ ತಯಾರಿಸುವ ಸೌಲಭ್ಯವನ್ನು ಸ್ಥಾಪಿಸಲು ಸಂಸ್ಥಾಪಕರು ಹೋರಾಡಿದ್ದಾರೆ. ಇಂದು 100ಕ್ಕೂ ಹೆಚ್ಚು ನೂಲುವವರು ಮತ್ತು ನೇಕಾರರು ಧ್ವಜವನ್ನು ತಯಾರಿಸುತ್ತಿದ್ದಾರೆ. 10,500 ರೂ.ಗಳ ಹೂಡಿಕೆಯೊಂದಿಗೆ ಪ್ರಾರಂಭವಾದ ಈ ಸಂಘ ಇಂದು ವರ್ಷಕ್ಕೆ 1 ಕೋಟಿ ರೂ.ಗಳ ಮೌಲ್ಯದ ಧ್ವಜಗಳನ್ನು ತಯಾರಿಸುತ್ತದೆ.
ಮಾನದಂಡಕ್ಕೆ ಅನುಗುಣವಾಗಿ ಧ್ವಜ ತಯಾರಿ
ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (ಬಿಐಎಸ್) ನಿಗದಿಪಡಿಸಿದಂತಹ ಮಾನದಂಡಕ್ಕೆ ಅನುಸಾರವಾಗಿ ಕೆಕೆಜಿಎಸ್ಎಸ್ ಧ್ವಜಗಳನ್ನು ತಯಾರಿಸುವಂತಹ ಏಕೈಕ ಕೇಂದ್ರವಾಗಿದೆ. ಜೀನ್ಸ್ಗಿಂತ ಹೆಚ್ಚು ಬಲಶಾಲಿಯಾದ ಬಟ್ಟೆಯನ್ನು ನೇಯಲಾಗುತ್ತದೆ. ಅದನ್ನು ಮೂರು ಲಾಟ್ಗಳಾಗಿ ವಿಂಗಡಿಸಿ, ಪ್ರತಿಯೊಂದು ಲಾಟ್ ಭಾರತೀಯ ಧ್ವಜದ ಬಣ್ಣಗಳಿಂದ ಕೂಡಿರುತ್ತದೆ. ನಂತರ ಬಟ್ಟೆಯನ್ನು ಗಾತ್ರಕ್ಕೆ ತಕ್ಕಂತೆ ಕತ್ತರಿಸಿ ನೀಲಿ ಅಶೋಕ ಚಕ್ರವನ್ನು ಬಿಳಿ ಬಟ್ಟೆಯ ಮೇಲೆ ಮುದ್ರಿಸಲಾಗುತ್ತದೆ. ನಂತರ ಮೂರು ತುಣುಕುಗಳನ್ನು ಒಟ್ಟಿಗೆ ಹೊಲಿದು ಭಾರತೀಯ ಧ್ವಜವನ್ನು ತಯಾರಿಸಲಾಗುತ್ತದೆ.
ಕೆಕೆಜಿಎಸ್ಎಸ್ನ ಈ ಘಟಕವು ಹೊಲಿಯುವಾಗ ನಿಖರತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಸುಮಾರು 60 ಹೊಲಿಗೆ ಯಂತ್ರಗಳನ್ನು ಹೊಂದಿದೆ. ಪ್ರತಿಯೊಂದು ಧ್ವಜವು ನಿರ್ಣಾಯಕ ಮಾನದಂಡಕ್ಕೆ ಅನುಗುಣವಾಗಿರಬೇಕು.
ಸಣ್ಣ ತಪ್ಪು ಬಂದರೂ ತಿರಸ್ಕಾರ
ರಾಷ್ಟ್ರಧ್ವಜವನ್ನು ಬಳಸುವ ಮೊದಲು ಬಟ್ಟೆಯು 18 ಬಾರಿ ಸಮಯದ ಗುಣಮಟ್ಟದ ಪರಿಶೀಲನೆಗೆ ಒಳಗಾಗುತ್ತದೆ. ಧ್ವಜದ ಅಗಲ ಮತ್ತು ಉದ್ದವು 2.3 ಅನುಪಾತದಲ್ಲಿರಬೇಕು ಮತ್ತು ಅಶೋಕ ಚಕ್ರವನ್ನು ಬಟ್ಟೆಯ ಎರಡೂ ಬದಿಗಳಲ್ಲಿ ಸರಿಯಾಗಿ ಹೊಂದಾಣಿಕೆಯಾಗುವಂತೆ ಮುದ್ರಿಸಬೇಕು. ಇಲ್ಲಿಂದ ರವಾನೆಯಾಗುವ ಪ್ರತಿಯೊಂದು ಧ್ವಜವನ್ನು ಬಿಐಎಸ್ ಪರಿಶೀಲಿಸುತ್ತದೆ ಮತ್ತು ಸಣ್ಣದೊಂದು ತಪ್ಪು ಜರುಗಿದ್ದರೆ ಅದು ಸಂಪೂರ್ಣವಾಗಿ ತಿರಸ್ಕರಿಸಲ್ಪಡುತ್ತದೆ. ಉತ್ತಮ ಗುಣಮಟ್ಟವನ್ನು ನಿರ್ದಿಷ್ಟವಾಗಿ ಕಾಯ್ದು ಕೊಳ್ಳುತ್ತಿದ್ದರು, ವರ್ಷಕ್ಕೆ ಶೇ10 ರಷ್ಟು ಭಾವುಟಗಳನ್ನು ರದ್ದುಗೊಳಿಸಲಾಗುತ್ತಿದೆ.
ದೆಹಲಿಯ ಕೆಂಪು ಕೋಟೆಯಿಂದ ಹಿಡಿದು, ಭಾರತದ ಎಲ್ಲಾ ಶಾಲಾ-ಕಾಲೇಜು, ಸರಕಾರಿ ಕಚೇರಿಗಳಲ್ಲಿ ಹಾಗೂ ದೇಶದ ಮೂಲೆ ಮೂಲೆಗಳಲ್ಲಿ ದೇಶ ಭಕ್ತಿಯನ್ನು ಹೆಚ್ಚಿಸುವ ದೇಶದೆಲ್ಲೆಡೆ ಹಾರಾಡುವಂತಹ ಧ್ವಜಗಳೆಲ್ಲ ತಯಾರಾಗುವುದೇ ನಮ್ಮ ಕರುನಾಡಿನ ಈ ನಗರದಲ್ಲಿ ಎಂಬುದೇ ನಮ್ಮ ಹೆಮ್ಮೆ.