ಮದ್ಯ ಮಾರಾಟಕ್ಕೆ ಖಾಯಂ ನಿಷೇಧ ಹೇರಿ ಎಂದ ಬಿಜೆಪಿ ಶಾಸಕ!
ಹುಬ್ಬಳ್ಳಿ, ಏಪ್ರಿಲ್ 29: ಲಾಕ್ಡೌನ್ ನಿಂದ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿರುವ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿ ಶಾಸಕರೊಬ್ಬರು ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಖಾಯಂ ನಿಷೇಧ ಹೇರಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
Recommended Video
ಹುಬ್ಬಳ್ಳಿಯಲ್ಲಿ ಲಾಕ್ಡೌನ್ ಕುರಿತು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕಲಘಟಗಿ ಶಾಸಕ ಸಿ ಎಂ ನಿಂಬಣ್ಣವರ ಅವರು ಮದ್ಯ ಮಾರಾಟಕ್ಕೆ ಖಾಯಂ ನಿಷೇಧ ಹೇರಬೇಕು ಎಂದು ಒತ್ತಾಯಿಸಿದ್ದಾರೆ.
ಲಾಕ್ಡೌನ್ ನೆಪದಲ್ಲಿ ಸರಾಯಿ ನಿಷೇಧ ಮಾಡಿರುವುದು ಬಹಳ ಸಂತೋಷ ತಂದಿದೆ. ಅದು ಭಗವಂತನ ದಯೆಯಿಂದ ಹಾಗೇ ಮುಂದುವರೆಯಲಿ ಎಂದು ನಿಂಬಣ್ಣವರ ಹೇಳಿದರು. ಇದಕ್ಕೆ ನಗುತ್ತಲೆ ಪ್ರತಿಕ್ರಿಯೆಸಿದ ಶೆಟ್ಟರ್ ಹಾಗೇ ಮಾಡಿದ್ರೆ ಸರ್ಕಾರಕ್ಕೆ 20 ಸಾವಿರ ಕೋಟಿ ಹೊರೆ ಆಗುತ್ತದೆ. ಇದರಿಂದ ಆರ್ಥಿಕತೆಯ ಮೇಲೂ ಪರಿಣಾಮ ಬೀರಬಹುದು ಎಂದಾಗ ಸಭೆ ನಗೆಗಡಲಲ್ಲಿ ತೇಲಿತು.
ಇತ್ತ ರಾಜ್ಯ ಸರ್ಕಾರಕ್ಕೆ ಲಾಕ್ಡೌನ್ ಮುಗಿದ ಬಳಿಕ ಮೇ 3 ರ ನಂತರ ಹಸಿರು ವಲಯಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲು ತೀವ್ರ ಒತ್ತಡ ಇದೆ ಎನ್ನಲಾಗುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಅಂತಿಮ ನಿಲುವಿನ ಮೇಲೆ ಈ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳಲಿದೆ.