ವಿಶ್ವನಾಥ ಸಜ್ಜನರ್ ಪುತ್ಥಳಿ ನಿರ್ಮಿಸಿ ಅಭಿನಂದನೆ ಸಲ್ಲಿಸಿದ ಕಲಾವಿದ
ಹುಬ್ಬಳ್ಳಿ, ಡಿಸೆಂಬರ್ 6: ಹೈದರಾಬಾದ್ ಎನ್ ಕೌಂಟರ್ ಪ್ರಕರಣ ಇಡೀ ದೇಶ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಆ ಎನ್ ಕೌಂಟರ್ ರೂವಾರಿ ವಿಶ್ವನಾಥ ಸಜ್ಜನರ್ ಹುಬ್ಬಳ್ಳಿಯವರಾಗಿದ್ದು, ಪಶುವೈದ್ಯೆ ಮೇಲೆ ಅತ್ಯಾಚಾರ ಎಸಗಿ ಅವರ ಸಾವಿಗೆ ಕಾರಣರಾದ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಿದೆ ಎಂದು ಹುಬ್ಬಳ್ಳಿಯಲ್ಲಿ ಸಜ್ಜನರ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿ ಸಂಭ್ರಮಾಚರಣೆ ನಡೆಸಲಾಗಿದೆ.
ಇಂದು ಬೆಳಗ್ಗಿನ ಜಾವ ಹೈದರಾಬಾದ್ ನಲ್ಲಿ ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟ ನಾಲ್ವರು ಆರೋಪಿಗಳು ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ್ದರು. ಇದಾದ ಕೆಲವೇ ಗಂಟೆಗಳ ನಂತರ ದೇಶದೆಲ್ಲೆಡೆ ಪೊಲೀಸರ ಕಾರ್ಯವೈಖರಿಯನ್ನು ಶ್ಲಾಘಿಸುತ್ತಾ ಜನರು ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದ್ದರು.
ಪೊಲೀಸ್ ಅಧಿಕಾರಿಗಳಿಗೆ ರಾಖಿ ಕಟ್ಟಿ ಸಂಭ್ರಮ
ಆರೋಪಿಗಳನ್ನು ಎನ್ ಕೌಂಟರ್ ಮಾಡಿದ್ದಕ್ಕೆ ನಗರದಲ್ಲಿ ಮಹಿಳೆಯರು ಸಂತಸ ವ್ಯಕ್ತಪಡಿಸಿ ನೃತ್ಯವನ್ನು ಮಾಡಿದ್ದಾರೆ. ಜೊತೆಗೆ ವಿಶ್ವನಾಥ ಸಜ್ಜನರ್ ಅವರ ಚಿತ್ರಕ್ಕೆ ಹಾಲಿನ ಅಭಿಷೇಕ ಮಾಡುವ ಮೂಲಕ ಅವರಿಗೆ ಅಭಿನಂದನೆ ಸಲ್ಲಿಸಿದರು. ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ರಾಖಿ ಕಟ್ಟಿ ನಮ್ಮನ್ನು ರಕ್ಷಣೆ ಮಾಡುವ ಹೊಣೆ ನಿಮ್ಮ ಮೇಲಿದೆ ಎಂದರು. ಪೊಲೀಸ್ ಅಧಿಕಾರಿಗಳಿಗೆ ಸಿಹಿ ತಿನಿಸಿದರು.
ಪಶುವೈದ್ಯೆ ಕೊಂದವರನ್ನು ಎನ್ ಕೌಂಟರ್ ಮಾಡಿದ್ದು ಕನ್ನಡಿಗ
ಸಜ್ಜನರ್ ಮಣ್ಣಿನ ಪುತ್ಥಳಿ ನಿರ್ಮಾಣ
ಧಾರವಾಡ ಜಿಲ್ಲೆಯ ಕಲಾವಿದ ಮಂಜುನಾಥ ಹಿರೇಮಠ ಅವರು ಎನ್ ಕೌಂಟರ್ ಸ್ಪೆಷಲಿಸ್ಟ್ ವಿಶ್ವನಾಥ ಅವರ ಮಣ್ಣಿನ ಪುತ್ಥಳಿ ನಿರ್ಮಾಣ ಮಾಡಿದರು. ಪುಟ್ಟ ಮಣ್ಣಿನ ಪುತ್ಥಳಿ ಮಾಡಿ ಅದಕ್ಕೆ ಗೌರವ ಸಲ್ಲಿಸಿದರು. ಸ್ಥಳೀಯರು ಹಾಗೂ ವಿಶ್ವನಾಥ ಅಭಿಮಾನಿಗಳು ಮಣ್ಣಿನ ಪುತ್ಥಳಿಗೆ ಅಭಿನಂದನೆ ಹೇಳುವ ಮೂಲಕ ವಿಶ್ವನಾಥ ಅವರಿಗೆ ಅಭಿನಂದನೆ ಹೇಳಿದರು.
"ಅತ್ಯಾಚಾರಿಗಳಿಗೆ ಇದೊಂದು ತಕ್ಕ ಪಾಠ"; ಸಚಿವ ಜಗದೀಶ್ ಶೆಟ್ಟರ್
ಪೊಲೀಸ್ ಆಯುಕ್ತ ವಿಶ್ವನಾಥ ಸಜ್ಜನರ್ ಅವರು ಅತ್ಯಾಚಾರಿಗಳಿಗೆ ತಕ್ಕ ಪಾಠವನ್ನು ಕಲಿಸಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ತಮ್ಮ ಫೇಸ್ಬುಕ್ ನಲ್ಲಿ ವಿಶ್ವನಾಥ ಸಜ್ಜನ ಅವರನ್ನು ಅಭಿನಂದನೆ ಸಲ್ಲಿಸಿದ್ದಾರೆ. ವಿಶ್ವನಾಥ್ ಸಜ್ಜನರ ಅವರು ಹುಬ್ಬಳ್ಳಿ ಮೂಲದವರು ಎಂಬುದು ನಮ್ಮೆಲ್ಲರ ಹೆಮ್ಮೆ. ಅವರಿಗೆ ಹಾಗೂ ತಂಡಕ್ಕೆ ಅಭಿನಂದನೆಗಳು ಎಂದು ಹೇಳಿದರು. ಭಾರತ ಬದಲಾಗುತ್ತಿದೆ ಎನ್ನುವ ಮೂಲಕ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅತ್ಯಾಚಾರಿಗಳ ಹೆಡೆಮುರಿ ಕಟ್ಟಿದ ಸಜ್ಜನವರ ಯಾರು?
ಪ್ರಮೋದ್ ಮುತಾಲಿಕ್ ಅಭಿನಂದನೆ
"ಹೈದರಾಬಾದ್ ಪಶು ವೈದ್ಯೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳನ್ನು ಪೊಲೀಸರು ಎನ್ ಕೌಂಟರ್ ಮಾಡಿದ್ದು ಸ್ವಾಗತಾರ್ಹ. ಹೈದರಾಬಾದ್ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್ ಕಾರ್ಯ ಶ್ಲಾಘನೀಯ" ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅಭಿನಂದನೆ ಸಲ್ಲಿಸಿದ್ದಾರೆ. ಎನ್ ಕೌಂಟರ್ ನಲ್ಲಿ ಭಾಗಿಯಾದ ಅಧಿಕಾರಿಗಳಿಗೆ ಅಭಿನಂದನಾ ವಿಡಿಯೋವನ್ನು ಅವರು ಬಿಡುಗಡೆ ಮಾಡಿದ್ದಾರೆ.