ರಾಜಕೀಯ ಪಕ್ಷಗಳ ಮೇಲೆ ನಂಬಿಕೆ ಕಳೆದುಕೊಂಡ ಮಹಾದಾಯಿ ಹೋರಾಟಗಾರರು
ಹುಬ್ಬಳ್ಳಿ, ಜುಲೈ 18: ಮಹಾದಾಯಿ, ಕಳಸಾ-ಬಂಡೂರಿ ವಿವಾದ ಕುರಿತಂತೆ ರಾಜಕೀಯ ಪಕ್ಷಗಳ ನಡೆಯನ್ನು ಮಲಪ್ರಭಾ ಅಚ್ಚುಕಟ್ಟು ಪ್ರದೇಶಗಳ ಜನರು ಸೂಕ್ಷ್ಮವಾಗಿ ಅವಲೋಕನ ಮಾಡಲು ಆರಂಭಿಸಿದ್ದಾರೆ. ಈ ಭಾಗದ ರೈತರಿಗೆ ಯಾವ ರಾಜಕೀಯ ಪಕ್ಷಗಳ ಮೇಲೂ ನಂಬಿಕೆ ಇಲ್ಲದಾಗಿದ್ದು, ವಿವಾದವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ರಾಜಕಾರಣಿಗಳಿಗೆ ಹಾಗೂ ಎಲ್ಲ ರಾಜಕೀಯ ಪಕ್ಷಗಳಿಗೂ ಹಿನ್ನೆಡೆಯಾಗುವ ಎಲ್ಲ ಲಕ್ಷಣಗಳೂ ಇವೆ.
ಮದಹಾಯಿ: ರಾಜ್ಯದ ಮನವಿ ತಿರಸ್ಕರಿಸಿದ ಗೋವಾ ಸರ್ಕಾರ
ಇದಕ್ಕೆ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲ ತಾಣಗಳ ಪ್ರಭಾವ ಹೆಚ್ಚಿದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ, ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಹೋರಾಟ ಹಾಗೂ ಅದರ ತೀವ್ರತೆ, ಮತ್ತೊಂದೆಡೆ ರಾಜಕೀಯ ನಾಯಕರ ಅಸಡ್ಡೆ ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಕಾಂಗ್ರೆಸ್ಗೆ ಮುಳ್ಳಾಗಿರುವ ಸೋನಿಯಾ ಮಾತು
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಹಾದಾಯಿ ನದಿ ನೀರು ಹಂಚಿಕೆ ಕುರಿತು ಆಡಿದ ಮಾತೊಂದು ರಾಜ್ಯ ಕಾಂಗ್ರೆಸ್ಗೆ ಮಗ್ಗಲು ಮುಳ್ಳಾಗಿ ಕಾಡತೊಡಗಿದೆ. ಗೋವಾ ರಾಜ್ಯ ವಿಧಾನಸಭಾ ಚುನಾವಣೆ ಪ್ರಚಾರ ಸಂದರ್ಭ ಮಾರ್ಗೋವಾದಲ್ಲಿ 2007ರ ಮೇ 30ರಂದು ನಡೆದ ಚುನಾವಣಾ ರ್ಯಾಲಿಯಲ್ಲಿ 'ಯಾವುದೇ ಕಾರಣಕ್ಕೂ ಮಹದಾಯಿ ನದಿಯನ್ನು ತಿರುಗಿಸಿ ಉತ್ತರ ಕರ್ನಾಟಕ ನೀರು ಬಳಕೆ ಮಾಡಿಕೊಳ್ಳುವುದನ್ನು ಕಾಂಗ್ರೆಸ್ ಒಪ್ಪುವುದಿಲ್ಲ ಹಾಗೂ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ' ಎಂದು ಗೋವಾ ಮತದಾರರಿಗೆ ಭರವಸೆ ನೀಡಿದ್ದರು. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಆಡಿದ ಮಾತು ಕಾಂಗ್ರೆಸ್ಗೆ ತಲೆನೋವಾಗಿದೆ.
ಮಹದಾಯಿ ವಿವಾದ ಬಗೆ ಹರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯೆಸ್ಥಿಕೆ ವಹಿಸಬೇಕು ಎಂದು ಕಾಂಗ್ರೆಸ್ ನಾಯಕರು ಹೇಳಿದ ತಕ್ಷಣ ಮೊದಲು ಕಾಂಗ್ರೆಸ್ ಹೈಕಮಾಂಡ್ ನಿಲುವು ಏನೆಂದು ಪ್ರಕಟಿಸಲಿ ಎಂದು ಬಿಜೆಪಿ ಸವಾಲು ಹಾಕುತ್ತಿದೆ.
ಮೋದಿ ಮೌನವೂ ಉರುಳು
ಇನ್ನೊಂದೆಡೆ ಮಹದಾಯಿ ವಿವಾದ ಬಗೆ ಹರಿಸಬೇಕು ಎಂದು ಆಗ್ರಹಿಸಿ ಕಳೆದ ಎರಡು ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದ್ದರೂ ಮೌನ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಡವಳಿಕೆ ರಾಜ್ಯ ಬಿಜೆಪಿ ನಾಯಕರಿಗೆ ಉರುಳಾಗಿದೆ. ಸಣ್ಣ ಸಣ್ಣ ವಿಷಯಕ್ಕೂ ಪ್ರತಿಕ್ರಿಯಿಸುವ ಪ್ರಧಾನಿ ಅವರು ಇಂಥ ದೊಡ್ಡ ಹೋರಾಟದ ಕುರಿತು ಒಂದು ಸಣ್ಣ ಪ್ರತಿಕ್ರಿಯೆ ನೀಡದಿರುವುದು ಚುನಾವಣೆಯ ಹೊಸ್ತಿಲಲ್ಲಿ ಇರುವ ರಾಜ್ಯ ಬಿಜೆಪಿಯಲ್ಲಿ ಕರಿಮೋಡ ಆವರಿಸಿದೆ.
ಅಲ್ಲದೆ ಗೋವಾ ಹಾಗೂ ಮಹಾರಾಷ್ಟ್ರಗಳಲ್ಲಿ ಬಿಜೆಪಿ ಸರ್ಕಾರವಿದ್ದು, ಅಲ್ಲಿನ ಮುಖ್ಯಮಂತ್ರಿಗಳ ಮನವೊಲಿಸಿ ಮಾತುಕತೆಗೆ ವೇದಿಕೆ ಸಿದ್ಧ ಮಾಡಬೇಕು ಎಂದು ಪ್ರತಿಭಟನಾಕಾರರು ಹಾಗೂ ಕಾಂಗ್ರೆಸ್ ನಾಯಕರು ಪದೇ ಪದೆ ಒತ್ತಾಯಿಸುತ್ತಿರುವುದು, ಅದಕ್ಕೆ ಗೋವಾ ಸರ್ಕಾರ ಒಪ್ಪದಿರುವುದು ಬಿಜೆಪಿಯವರಿಗೆ ಇರುಸು-ಮುರುಸು ತಂದಿದೆ.
ರಾಜಕೀಯ ಲಾಭಕ್ಕಾಗಿ ಕಾಯುತ್ತಿರುವ ಜೆಡಿಎಸ್
ಇದೆಲ್ಲದರ ಮಧ್ಯೆ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್, "ಮಹದಾಯಿ ವಿವಾದ ಬಗೆಹರಿಸಲು ರಾಷ್ಟ್ರೀಯ ಪಕ್ಷಗಳಿಗೆ ಇಷ್ಟವಿಲ್ಲ. ಅಲ್ಲದೆ ರಾಷ್ಟ್ರೀಯ ಪಕ್ಷಗಳ ರಾಜ್ಯ ನಾಯಕರು ಹೈಕಮಾಂಡ್ ಅಡಿಯಾಳಾಗಿದ್ದಾರೆ," ಎಂದು ಆರೋಪಿಸುತ್ತಾ ವಿವಾದವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದೆ.
ಅಲ್ಲದೆ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಳಸಾ-ಬಂಡೂರಿ ನಾಲಾ ಕಾಮಗಾರಿ ಅಡಿಗಲ್ಲು ಸಮಾರಂಭಕ್ಕೆ ಬರದೇ ಇರುವುದು ಯೋಜನೆ ಅನುಷ್ಠಾನಕ್ಕೆ ಜೆಡಿಎಸ್ಗೆ ಸಂಕಲ್ಪ ಇಲ್ಲ ಎಂಬುದು ಹೋರಾಟಗಾರರ ಆರೋಪವಾಗಿದೆ. ಈಗ ಕುಮಾರಸ್ವಾಮಿ ಸೇರಿದಂತೆ ಸೇರಿದಂತೆ ಜೆಡಿಎಸ್ ನಾಯಕರು ಏನೇ ಮಾತನಾಡಿದರೂ ಅದು ಚುನಾವಣಾ ಲಾಭಕ್ಕಾಗಿ ಎಂಬುದು ಹೋರಾಟಗಾರರ ಅಭಿಮತವಾಗಿದೆ.
ಹೀಗೆ ಮೂರೂ ಪಕ್ಷಗಳು ಒಂದಲ್ಲ ಒಂದು ಅವಧಿಯಲ್ಲಿ ಮಹಾದಾಯಿ ವಿರುದ್ಧ ನಿಂತಿದ್ದು ಜನರ ಕೋಪಕ್ಕೆ ಕಾರಣವಾಗಿದೆ.