ಪಂಚಮಸಾಲಿ ಮೀಸಲಾತಿ ನಮ್ಮ ಸಮುದಾಯದ ನಾಯಕನಿಂದಲೇ ಅಡ್ಡಿ : ಜಯಮೃತ್ಯುಂಜಯ ಸ್ವಾಮೀಜಿ
ಹುಬ್ಬಳ್ಳಿ, ಸೆಪ್ಟೆಂಬರ್ 19: ಪಂಚಮಸಾಲಿ ಸಮುದಾಯದ ಮೀಸಲಾತಿಗೆ ರಾಜಕೀಯ ಮುಖಂಡರೊಬ್ಬರು ಅಡ್ಡಿಪಡಿಸುತ್ತಿದ್ದು, ಅವರ ಹೆಸರನ್ನು ಶೀಘ್ರ ಬಹಿರಂಗ ಪಡಿಸುವುದಾಗಿ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಪಂಚಮಸಾಲಿ ಸಮಾಜದ ಟ್ರಸ್ಟ್ನ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮೀಸಲಾತಿಗೆ ಸಂಬಂಧಪಟ್ಟಂತೆ ನಾಲ್ಕು ಬಾರಿ ಕೊಟ್ಟ ಮಾತಿಗೆ ಸರಕಾರ ತಪ್ಪಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಮುಖಂಡರೊಬ್ಬರು ಒತ್ತಡ ಹೆರುತ್ತಿದ್ದಾರೆ. ಅವರ ಹೆಸರನ್ನು ಶಿಗ್ಗಾಂವಿ ಹೋರಾಟದಲ್ಲಿ ಬಹಿರಂಗಪಡಿಸಲಾಗುವುದು ಎಂದರು.
ಹುಬ್ಬಳ್ಳಿ: ಪಂಚಮಸಾಲಿ ಸಮಾಜದಿಂದ 2ಎ ಮೀಸಲಾತಿಗಾಗಿ ಪಂಚಲಕ್ಷ ಪತ್ರ ಚಳವಳಿ
ಸರ್ಕಾರ ಮತ್ತೆ ಗಡುವು ಕೇಳಿದರೇ ನಾವು ಒಪ್ಪುವುದಿಲ್ಲ. ಹಿಂದೂಳಿದ ವರ್ಗಗಳ ಆಯೋಗದ ವರದಿಯನ್ನು ಪಡೆದಿಲ್ಲ. ಸರ್ವೇ ಕೂಡಾ ನಡೆಸುತ್ತಿಲ್ಲ. ಸರಕಾರದ ಈ ನಡೆಗೆ ಪಂಚಮಸಾಲಿ ಸಮುದಾಯ ಬೇಸತ್ತಿದ್ದಾರೆ. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೇ ಅಕ್ಟೋಬರ್, ಇಲ್ಲವೇ ನವೆಂಬರ್ ತಿಂಗಳಲ್ಲಿ 25 ಲಕ್ಷ ಜನರೊಂದಿಗೆ ವಿಧಾನಸಭೆಗೆ ಮುತ್ತಿಗೆ ಹಾಕಿ ಮಾಡು ಇಲ್ಲವೇ ಮಡಿ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಇದು ಪಕ್ಷಾತೀತ ಹೋರಾಟ ಆಗಿದ್ದು, ಬಿಜೆಪಿಯ ಶಾಸಕರು, ಸಚಿವರು ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ಚರ್ಚೆಗೆ ಸಮುದಾಯದ ಹದಿನೈದು ಶಾಸಕರು ಸಭಾಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಕಾದುನೋಡಬೇಕಿದೆ ಎಂದರು. ಇನ್ನೂ ಹೋರಾಟಗಾರರ ಮೇಲೆ ಇಡಿ ದಾಳಿ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಯಾವ ಇಡಿ, ಐಟಿ ಬಂದರೂ ಹೆದರುವುದಿಲ್ಲ ಎಂದರು.
ಶಿಗ್ಗಾಂವಿ ಸಿಎಂ ಮನೆಗೆ ಮುಂದೆ ಧರಣಿ ಸತ್ಯಾಗ್ರಹ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಒತ್ತಾಯಿಸಿ ಲಿಂಗಾಯತ ಪಂಚಮಸಾಲಿ ಸಮಾಜದ ಹೋರಾಟದ ಗಡುವಿಗೆ ಸರ್ಕಾರ ಮಾತು ತಪ್ಪಿದೆ. ಈ ಹಿನ್ನಲೆಯಲ್ಲಿ ಮೀಸಲಾತಿಗಾಗಿ ಆಗ್ರಹಿಸಿ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿರುವ ಅವರ ಮನೆ ಮುಂದೆ ಒಂದು ದಿನದ ಬೃಹತ್ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದರು.
ಪಂಚಮಶಾಲಿಗಳೆಂದರೆ ಯಾರು? ಜನಸಂಖ್ಯೆ ಎಷ್ಟಿದೆ?
ಲಿಂಗಾಯತ ಪಂಚಮಸಾಲಿ ಜನಾಂಗವನ್ನು ಪಂಚಪೀಠ ಮತ್ತು ಮಲೆನಾಡಿನ ಲಿಂಗಾಯತ ಗೌಡರು ಎಂದು ಕೂಡ ಕರೆಯುತ್ತಾರೆ. ಖ್ಯಾತ ಇತಿಹಾಸಕಾರರಾದ ಶಂಭಾ ಜೋಶಿಯವರು ಪ್ರಕಾರ ಕರ್ನಾಟಕ ರಾಜ್ಯದ ಉತ್ತರದ ಭಾಗದಲ್ಲಿ ಆಗಿನ ಕಾಲದಲ್ಲಿ ಕೃಷಿಯನ್ನ ನಡೆಸಿಕೊಂಡು ಬರುತ್ತಿರುವವರು ಇಂದಿನ ಪಂಚಮಸಾಲಿ ಜನಾಂಗ ಎಂಬ ವಾದ ಇದೆ.
ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂದ್ರಪ್ರದೇಶದ ಕೆಲ ಭಾಗದಲ್ಲಿ ಸೇರಿ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಪಂಚಮಸಾಲಿಗಳು ಹೊಂದಿದ್ದಾರೆ ಎನ್ನಲಾಗುತ್ತಿದೆ. ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಪಂಚಮಸಾಲಿಗಳ ಸಂಖ್ಯೆ ಹೆಚ್ಚಿದೆ. ಕೃಷಿ ಇವರ ಮೂಲ ಕಸುಬು ಆಗಿದೆ. ಬಸವ ಜಯ ಮೃತ್ಯುಂಜಯ ಸ್ವಾಮಿಗಳು ಪಂಚಮಸಾಲಿ ಸಮಾಜದ ಜಗದ್ಗುರುಗಳಾಗಿದ್ದಾರೆ. ಈ ಪಂಗಡವನ್ನು 2 ಎ ಪ್ರವರ್ಗಕ್ಕೆ ಸೇರ್ಪಡೆ ಮಾಡಿ ಎಂದು ಪಂಚಮಸಾಲಿಗಳು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಜನವರಿ 14 ರಂದು ಕೂಡಲಸಂಗಮದ ಪಂಚಮಸಾಲಿ ಪೀಠದಿಂದ ಆರಂಭವಾದ ಹೋರಾಟ ಇಂದಿಗೂ ನಡೆಯುತ್ತಲೇ ಇದೆ.