ಕಲಘಟಗಿಯಲ್ಲಿ ಗಮನ ಸೆಳೆದ ವಿಶ್ವದಾಖಲೆಯ 9 ಕಿಮೀ ಉದ್ದದ ತಿರಂಗಾ ಜಾಥಾ
ಹುಬ್ಬಳ್ಳಿ, ಆಗಸ್ಟ್ 15 : ಅದ್ಭುತ, ಅಮೋಘ, ನಯನ ಮನೋಹರ. ಎತ್ತ ಕಣ್ಣು ಹಾಯಿಸಿದರು ಅತ್ತ ಜನವೋ ಜನ. ಎಲ್ಲರ ಬಾಯಲ್ಲಿ ಒಂದೇ 'ಭಾರತ ಮಾತಾ ಕಿ ಜೈ' ಎನ್ನುವ ಘೋಷ ವಾಕ್ಯ, ಅದರೊಂದಿಗೆ ದೇಶ ಭಕ್ತಿಯನ್ನು ಎಲ್ಲರಲ್ಲಿಯೂ ಸಂಚಲನ ಮೂಡಿಸುತ್ತಿರುವ ಆಕಾಶಕ್ಕೆ ಹರಡಿಕೊಂಡಿರುವ ಬೃಹತ್ ತಿರಂಗಾ ಹಾರಾಡುವ ದೃಶ್ಯ.
ದೇಶಾದ್ಯಂತ ಆಜಾದಿ ಕಾ ಅಮೃತ ಮಹೋತ್ಸವ ಸಡಗರ ಸಂಭ್ರಮ ಮನೆ ಮಾಡಿದೆ. 75 ನೇ ಸ್ವಾತಂತ್ರ್ಯ ಸಂಭ್ರಮವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಪ್ರತಿ ಮನೆ ಮನೆ, ಸರ್ಕಾರಿ ಕಚೇರಿ, ಹೊಟೆಲ್ ಗಳ ಮೇಲೆ ನಮ್ಮ ಹೆಮ್ಮೆಯ ತಿರಂಗಾ ಹಾರಾಡುತ್ತಿದೆ. ನಗರಗಳಲ್ಲಿ, ಹಳ್ಳಿ ಪಟ್ಟಣಗಳಲ್ಲಿ ಬೃಹತ್ ಪ್ರಮಾಣದ ಜಾಥಾಗಳು ದೇಶ ಭಕ್ತಿಯನ್ನು ವಿಶ್ವಕ್ಕೆ ಸಾರಿ ಸಾರಿ ಹೇಳುತ್ತಿವೆ. ಇತ್ತ ಧಾರವಾಡ ಜಿಲ್ಲೆ ಕಲಘಟಗಿ ಪಟ್ಟಣದಲ್ಲೂ ವಿಶ್ವ ದಾಖಲೆಯ ತಿರಂಗಾ ಮಹಾ ಜಾಥಾ ಮುಗಿಲು ಮುಟ್ಟಿದೆ.
75ನೇ ಸ್ವಾತಂತ್ರ್ಯೋತ್ಸವ: ರೈತ, ವಿದ್ಯಾರ್ಥಿ, ಯುವ ಸಮೂಹಕ್ಕೆ ಸರಕಾರದಿಂದ ಯೋಜನೆ ಜಾರಿ: ಸೋಮಶೇಖರ್
ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದಲ್ಲಿ ಕಲಘಟಗಿ ಪಟ್ಟಣದಲ್ಲಿ 9 ಕಿಮೀ ಉದ್ದದ, 9 ಅಡಿ ಅಗಲದ ತ್ರಿವರ್ಣ ಧ್ವಜದ ಜಾಥಾ ಹಮ್ಮಿಕೊಳ್ಳಲಾಗಿತ್ತು. ತ್ರಿವರ್ಣ ಧ್ವಜದ ಜಾಥಾ ಬೆಳಗ್ಗೆ 9.30ಕ್ಕೆ ಕಲಘಟಗಿ ಹೊರವಲಯದ ದಾಸ್ತಿಕೂಪ್ಪ ಬ್ರಿಡ್ಜ್ನಿಂದ ಪ್ರಾರಂಭಗೊಂಡು ಪಟ್ಟಣದ ಮೂಲಕ ಗಳಗಿನಕಟ್ಟಿಕ್ರಾಸ್ ವರೆಗೊ ನಡೆಯಿತು.
10 ಸಾವಿರ ಮಹಿಳೆಯರು ಕುಂಭಮೇಳದಲ್ಲಿ ಭಾಗಿಯಾಗಿದ್ದವು. 1 ಲಕ್ಷ ಜನರಿಗೆ ಊಟ ಹಾಗೂ 2500 ವಾಹನ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣದ ಎಪಿಎಂಸಿ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. 6 ವೇದಿಕೆಗಳಲ್ಲಿ ನೃತ್ಯ ಮತ್ತು ದೇಶ ಭಕ್ತಿ ಗೀತೆಗಳು ನಡೆದವು. ಸ್ಥಳೀಯ 1000 ಜನರಿಗೆ ಸನ್ಮಾನ ಸೇರಿದಂತೆ ಭಾರತ ಮಾತೆಗೆ ಗೌರವ ನಮನಗಳು ಸಲ್ಲಿಸುವ ಕಾರ್ಯಕ್ರಮಗಳು ನಡೆದವು.
ಕಲಘಟಗಿ ಮತ ಕ್ಷೇತ್ರದಲ್ಲಿ 75 ಕಿಮೀ ಪಾದಾಯಾತ್ರೆ ಮೂಲಕ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ತಿರಂಗಾ ಮಹಾ ಮೆರವಣಿಗೆಗೆ ಅದ್ದೂರಿ ಚಾಲನೆ ದೊರಕಿದ್ದು, 9 ಕಿ.ಮೀ. ಉದ್ದ, 9 ಅಡಿ ಅಗಲದ ರಾಷ್ಟ್ರಧ್ವಜ ಇದಾಗಿದೆ. ಮಾಜಿ ಸಚಿವ ಸಂತೋಷ ಲಾಡ್ ಈ ಬೃಹತ್ ಜಾಥಾಕ್ಕೆ ಚಾಲನೆ ನೀಡಿದರು. ಇನ್ನೂ, ರ್ಯಾಲಿಯುದ್ದಕ್ಕೂ 300ಕ್ಕೂ ಹೆಚ್ಚಿನ ಕಲಾತಂಡಗಳ ಪ್ರದರ್ಶನ ತೋರಿದವು.
ಈ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ದೇಶ ಭಕ್ತರು ಸಾಗರದಂತೆ ಧುಮ್ಮಿಕ್ಕಿ ಬರುತ್ತಿರುವ ದೃಶ್ಯವಂತು ದೇಶಭಕ್ತಿಯ ಕಹಳೆಯನ್ನು ಮೊಳಗಿಸುತ್ತಿದೆ. ಧಾರವಾಡ ಜಿಲ್ಲೆ ಅಷ್ಟೇ ಅಲ್ಲದೇ ಸುತ್ತಮುತ್ತಲಿನ ಜಿಲ್ಲೆಯ ಜನ ಕೂಡ ಬಂದು ನಯನ ಮನೋಹರ ತಿರಂಗಾ ಜಾಥಾದಲ್ಲಿ ಭಾಗಿಯಾಗಿ ದೇಶ ಭಕ್ತಿ ಮೆರೆದರು.