ಇದು ಮನ ಮಿಡಿಯುವ ಕಥೆ: ಹುಬ್ಬಳ್ಳಿ ಟು ರಾಜಸ್ಥಾನ್...
ಹುಬ್ಬಳ್ಳಿ, ಮೇ 9: ಕೊರೊನಾ ಹಾವಳಿಯಿಂದ ದೇಶದಲ್ಲಿ ಲಾಕ್ಡೌನ್ ಜಾರಿಯಾಗಿ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ ನಿರ್ಗತಿಕಕರು, ಬಡವರು, ಕಾರ್ಮಿಕರು, ಪೋಷಕರಿಂದ ದೂರವಾದ ಸಣ್ಣ ಮಕ್ಕಳ ಪರಿಸ್ಥಿತಿಯಂತೂ ಹೇಳತೀರದು.
ಲಾಕ್ಡೌನ್ ಜಾರಿಯಿಂದಾಗಿ ಹುಬ್ಬಳ್ಳಿಯಲ್ಲಿ ಸಿಲುಕಿಕೊಂಡು, ರಾಜಸ್ಥಾನದಲ್ಲಿದ್ದ ತಮ್ಮ ಪಾಲಕರನ್ನು ಸೇರಲಾಗದೇ ತೀವ್ರ ಆತಂಕಕ್ಕೀಡಾಗಿದ್ದ ಇಬ್ಬರು ಬಾಲಕಿಯರನ್ನು ಧಾರವಾಡ ಜಿಲ್ಲಾಡಳಿತ ಪಾಲಕರ ಬಳಿ ಸೇರಿಸಿ ಮಾನವೀಯತೆ ಮೆರದಿದೆ.
Recommended Video
ರಾಜಸ್ತಾನ್ ಮೂಲದ 10 ವರ್ಷದ ರೋಮುಕುಮಾರಿ, 8 ವರ್ಷದ ಪೋಸುಕುಮಾರಿ ಎಂಬ ಇಬ್ಬರು ಬಾಲಕಿಯರು ಲಾಕ್ಡೌನ್ ಜಾರಿಯಾಗುವಕ್ಕಿಂತ ಮುಂಚೆ ಅದೇಗೋ ಮನೆ ಬಿಟ್ಟು ಮುಂಬೈ ಮಾರ್ಗವಾಗಿ ಹುಬ್ಬಳ್ಳಿಗೆ ಬಂದಿದ್ದರು. ರೈಲ್ವೆ ಪೊಲೀಸರ ಸಹಾಯದಿಂದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಕಳೆದ ಐವತ್ತು ದಿನಗಳಿಂದ ತಮ್ಮ ಪೋಷಕರಿಗಾಗಿ ಅಳುತ್ತಾ ಕಾಲ ಕಳೆಯುತ್ತಿದ್ದರು.
ಲಾಕ್ಡೌನ್ ಸಮಯದಲ್ಲಿ ಮೋದಿ ಮೆಚ್ಚುವ ಕೆಲಸ ಮಾಡಿದ ಹುಬ್ಬಳ್ಳಿ ಹುಡುಗಿ
ವಿಷಯ ತಿಳಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಮಕ್ಕಳನ್ನು ಪಾಲಕರ ಬಳಿ ಕಳಿಸಲು ವಿಶೇಷ ಆಸಕ್ತಿ ವಹಿಸಿದರು. ಹುಬ್ಬಳ್ಳಿಯ ರಮೇಶ್ ರಾವಲ್ ಎನ್ನುವರು ಜಿಲ್ಲಾಧಿಕಾರಿ ಒಪ್ಪಿಗೆ ಮೂಲಕ ತಮ್ಮ ಸ್ವಂತ ಕಾರನ್ನು ಚಾಲನೆ ಮಾಡಿಕೊಂಡು ಮಕ್ಕಳನ್ನು ರಾಜಸ್ಥಾನದ ಸಿರೋಹಿ ಜಿಲ್ಲೆಯ ಮೆಮಂಡ್ವಾರ ಗ್ರಾಮದಲ್ಲಿರುವ ತಂದೆ ತಾಯಿಗಳ ಮಡಿಲು ಸೇರಿಸಿದ್ದಾರೆ.
ಐವತ್ತು ದಿನಗಳಿಂದ ಹೆತ್ತವರಿಂದ ಅಗಲಿ ಮಕ್ಕಳ ರಕ್ಷಣಾ ಘಟಕದಲ್ಲಿದ್ದ ಈ ಮಕ್ಕಳನ್ನು ಅವರ ಪಾಲಕರೊಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್, ಹುಬ್ಬಳ್ಳಿ ಶಹರ ತಹಸೀಲ್ದಾರ ಶಶಿಧರ ಮಾಡ್ಯಾಳ ಸೇರಿದಂತೆ ಹಲವರು ವಿಶೇಷ ಪ್ರಯತ್ನ ಮಾಡಿದ್ದರು.
ಮಕ್ಕಳು ತಲುಪಿರುವ ಕುರಿತು ರಾಜಸ್ಥಾನದ ಸಿರೋಹಿ ಜಿಲ್ಲಾಧಿಕಾರಿ ಭಗವತಿ ಪ್ರಸಾದ ಅವರು ಧಾರವಾಡ ಜಿಲ್ಲಾಧಿಕಾರಿಗಳಿಗೆ ಲಿಖಿತ ಪತ್ರವನ್ನೂ ಸಹ ಬರೆದು, ಧನ್ಯವಾದ ಸಲ್ಲಿಸಿದ್ದಾರೆ.