15 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಮಗ!
ಬೆಂಗಳೂರು, ಮಾ. 06: ಒಂದೆಡೆ ಹೆತ್ತಮ್ಮ, ಮತ್ತೊಂದೆಡೆ ಸಾಕಿ ಸಲುಹಿದ ತಾಯಿ. ಆ ಮನೆಯಲ್ಲಿ ಒಂದು ಕ್ಷಣ ಸಂಭ್ರಮ, ಮತ್ತೊಂದು ಕ್ಷಣದಲ್ಲಿ ದುಃಖ. 15 ವರ್ಷಗಳಿಂದ ಹೆತ್ತ ಮಗನಿಗಾಗಿ ಹಾತೊರೆಯುತ್ತಿದ್ದ ತಾಯಿ ಜೀವ ಒಂದು ಕಡೆಯಾದ್ರೆ, ಅಷ್ಟೇ ವರ್ಷಗಳಿಂದ ಪ್ರೀತಿಯಿಂದ ಸಾಕಿ ಸಲುಹಿದ ತಾಯಿ ಜೀವ ಮತ್ತೊಂದೆಡೆ.
ಈ ಅಪರೂಪದ ದೃಶ್ಯಗಳು ಕಂಡು ಬಂದಿದ್ದು ವಾಣಿಜ್ಯ ನಗರಿ ಹುಬ್ಬಳ್ಳಿಯ ಗೋಕುಲ್ ರಸ್ತೆಯ ನಿವಾಸಿ ರಾಘವೇಂದ್ರ ಅವರ ಮನೆಯಲ್ಲಿ. ತಾನು ಯಾರೊಂದಿಗೆ ಇರಬೇಕು ಎಂಬ ಗೊಂದಲದಲ್ಲಿ ಇದ್ದುದ್ದು ಆ ಯುವಕ. ಇದು ಆಕಾಶ್ ಎಂಬ ಯುವಕ ಅಗಸ್ಟಿನ್ ಆದ ಕಥೆ.
ಸತ್ತ ಎಂದುಕೊಂಡವ 4 ವರ್ಷದ ಬಳಿಕ ಬೆಂಗಳೂರಲ್ಲಿ ಪತ್ತೆ, ಚಿತ್ರ ಕೊಟ್ಟಿತು ಸುಳಿವು
ಕಳೆದ 15 ವರ್ಷಗಳ ಹಿಂದೆ ಹಾಸ್ಟೆಲ್ನಿಂದ ತಪ್ಪಿಸಿಕೊಂಡಿದ್ದ ಆಕಾಶ್ ಮತ್ತೆ ಅಗಸ್ಟಿನ್ ಆಗಿದ್ದು ಆಕಸ್ಮಿಕವಾಗಿ. ಅದು ಅಜ್ಜಿಯ ಸಹಾಯದಿಂದ. ಅಜ್ಜಿಯನ್ನು ಕಂಡಕೂಡಲೇ ಕಳೆದ 15ವರ್ಷಗಳಿಂದ ಹೇಳದ ಸತ್ಯವನ್ನು ಹೇಳಿಕೊಂಡಿದ್ದ. ಅದು ಹೆತ್ತೊಡಲಿನ ಹಾರೈಕೆಯೊ? ಗೋಕುಲ್ ರಸ್ತೆಯ ರಾಘವೇಂದ್ರ ಅವರ ಒಳ್ಳೇಯತನವೊ ಜೀತದಾಳಾಗಬೇಕಿದ್ದ ಅಗಸ್ಟಿನ್ ಒಂದೂವರೆ ದಶಕದ ಬಳಿಕ ಹೆತ್ತೊಡಲನ್ನು ಸೇರಿದ್ದಾನೆ.
ಶಿವಮೊಗ್ಗದ ಅಗಸ್ಟಿನ್ ಹುಬ್ಬಳ್ಳಿಯಲ್ಲಿ ಆಕಾಶ್ ಆಗಿದ್ದು
ಮೂಲತಃ ಶಿವಮೊಗ್ಗ ಜಿಲ್ಲೆಯ ಅಗಸ್ಟಿನ್ನನ್ನು ಮೊಟೆಬೆನ್ನೂರಿನ ಶಾಲೆಗೆ ಸೇರಿಸಿದ್ದ ಪಾಲಕರು, ಹಾಸ್ಟೆಲ್ನಲ್ಲಿ ಬಿಟ್ಟಿದ್ದರು. ಸುಮಾರು 15 ವರ್ಷಗಳ ಹಿಂದೆ ಹಾಸ್ಟೆಲ್ನಿಂದ ತಪ್ಪಿಸಿಕೊಂಡಿದ್ದ ಅಗಸ್ಟಿನ್ ಸೇರಿಕೊಂಡಿದ್ದು ಹುಬ್ಬಳ್ಳಿಯ ಗಾಂಧಿ ಬಜಾರ್. ಸ್ನೇಹಿತರೊಂದಿಗೆ ಹಾಸ್ಟೆಲ್ನಿಂದ ಹೊರಗೆ ಬಂದು ಹುಬ್ಬಳ್ಳಿಯ ಗಾಂಧಿ ಬಜಾರ್ನಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಅಲೆಯುತ್ತಿದ್ದಾಗ ಅಲ್ಲಿಯೆ ಗೇಮ್ ಝೋನ್ ಅಂಗಡಿಯ ಮಾಲೀಕ ರಾಘವೇಂದ್ರ ಎಂಬುವರಿಗೆ ಸಿಕ್ಕಿದ್ದ. ಅವನನ್ನು ವಿಚಾರಿಸಿ ಮನೆಗೆ ಕರೆದುಕೊಂಡು ಬಂದಿದ್ದರು. ನಂಗೆ ಏನೂ ನೆನಪಿಲ್ಲ, ಯಾವ ಊರು ಅಂತಾ ಗೊತ್ತಿಲ್ಲ ಎಂದು ಹೇಳಿದ್ದ ಹುಡುಗನನ್ನು ಆಕಾಶ್ ಎಂದು ಕರೆದು ತಮ್ಮ ಮನೆಯಲ್ಲಿಯೆ ಇಟ್ಟುಕೊಂಡಿದ್ದರು ರಾಘವೇಂದ್ರ ದಂಪತಿ.
ಯಾವುದೇ ದಾಖಲಾತಿಗಳು ಇಲ್ಲದೆ ಇದ್ದುದರಿಂದ ಹಾಗೂ ಶಾಲೆಗೆ ಹೋಗಲು ಒಪ್ಪದೆ ಇದ್ದುದರಿಂದ ಆಕಾಶ್ ಅಂಗಡಿಯಲ್ಲಿ ರಾಘವೇಂದ್ರ ಅವರಿಗೆ ಸಹಾಯ ಮಾಡಿಕೊಂಡು ಮನೆಮಗನಂತೆ ಇದ್ದುಬಿಟ್ಟಿದ್ದ. ರಾಘವೇಂದ್ರ ಅವರ ಪತ್ನಿ ಲಕ್ಷ್ಮೀ ಅವರು ಕೂಡ ತಮ್ಮ ಮಗನಂತೆಯೆ ರಾಘವೇಂದ್ರನನ್ನು ನೋಡಿಕೊಂಡಿದ್ದರು.
ಅಗಸ್ಟಿನ್ಗಾಗಿ ಹುಡುಕಾಟ ನಡೆಸಿದ್ದ ಮನೆಯವರು
ಅಗಸ್ಟಿನ್ ಹಾಸ್ಟೆಲಿನಿಂದ ಕಾಣೆಯಾಗುತ್ತಿದ್ದಂತೆಯೆ ಅತ್ತ ಆತನ ತಂದೆ ತಾಯಿ ಮಗನನ್ನ ಹುಡುಕಿಕೊಡುವಂತೆ ಪೊಲೀಸ್ ಠಾಣೆಗೆ ದೂರು ನೀಡಿ. ಸಿಕ್ಕ ಸಿಕ್ಕ ದೇವರಿಗೆಲ್ಲಾ ಹರಕೆ ಹೊತ್ತಿದ್ದರು. ಆದ್ರೆ ಹೆತ್ತ ಮಗನ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಮಗನಿಗಾಗಿ ಹುಡುಕದ ಸ್ಥಳಗಳಿಲ್ಲ. ಆದರೆ ಅಗಸ್ಟಿನ್ ಮಾತ್ರ ಪತ್ತೆ ಆಗಿರಲಿಲ್ಲ. ಅಗಸ್ಟಿನ್ ತಾಯಿ ಅಂಥೋನ್ಗೆ ಸಿಕ್ಕಿದ್ದು ಕೂಡ ಆಕಸ್ಮಿಕವಾಗಿ.
ಕಾಡಂಚಿನ ಕಾಫಿ ತೋಟದಿಂದ ನಿಗೂಢವಾಗಿ ಕಣ್ಮರೆಯಾಗಿದ್ದ 2 ವರ್ಷದ ಕಂದಮ್ಮ ಪತ್ತೆಯಾಗಿದ್ದು ಎಲ್ಲಿ?
ಕೆಲ ದಿನಗಳ ಹಿಂದೆ ಹುಬ್ಬಳ್ಳಿಗೆ ಬಂದಿದ್ದ ಅಗಸ್ಟಿನ್ ಅಜ್ಜಿ
ಕಳೆದವಾರ ಗಾಂಧಿ ಮಾರ್ಕೆಟ್ಗೆ ಬಂದಿದ್ದ ಆಕಾಶ್ ಅಜ್ಜಿ, ಇವನ ಚಲನವಲನ ನೋಡಿ ಅನುಮಾನಗೊಂಡು ಮಾಹಿತಿ ಕೇಳಿದ್ದಾಳೆ. ಆಗ ಆಕಾಶ್ ತನ್ನ ನಿಜವಾದ ತಂದೆ ತಾಯಿ ಹೆಸರು ಹೇಳಿದ್ದಾನೆ. ಅಲ್ಲದೆ ತಾನು ತಪ್ಪಿಸಿಕೊಂಡು ಬಂದಿರೋ ಬಗ್ಗೆ ಮಾಹಿತಿ ನೀಡಿದ್ದಾನೆ. ತಕ್ಷಣವೇ ಅಜ್ಜಿ ಆಕಾಶ್ ಹೆತ್ತಮ್ಮನಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾಳೆ. ಹೀಗಾಗಿ ತನ್ನ ಹೆತ್ತ ಮಗನನ್ನ ನೋಡಲು ಹುಬ್ಬಳ್ಳಿಗೆ ಬಂದಿದ್ದಾರೆ. ತಾಯಿಯನ್ನು ನೋಡಿದ ಅಗಸ್ಟಿನ್ ಎಲ್ಲವನ್ನೂ ಜ್ಞಾಪಿಸಿಕೊಂಡಿದ್ದಾನೆ. ಹೆತ್ತ ತಾಯಿಯನ್ನು ನೋಡುತ್ತಲೇ ತಾನೂ ಕಣ್ಣೀರಾಗಿದ್ದಾನೆ.
ಅಜ್ಜಿ ಭೇಟಿಯಾದಾಗಲೇ ಕಥೆಗೆ ಟ್ವಿಸ್ಟ್ ಸಿಕ್ಕಿದ್ದು, ಆಕಾಶ್ ನಿಜವಾದ ತಂದೆ ತಾಯಿ ಯಾರು ಎನ್ನುವದು ಗೊತ್ತಾಗಿದೆ. ಹೀಗಾಗಿ ಹೆತ್ತ ಮಗನನ್ನ ಕರೆದುಕೊಂಡು ಹೊಗಲು ಹೆತ್ತಮ್ಮ ಬಂದ್ರೆ ಇತ್ತ ಇಷ್ಟು ದಿನ ಸಾಕಿ ಸಲುಹಿದ್ದ ತಾಯಿಗೆ ಕಣ್ಣಂಚಲ್ಲಿ ನೀರು ಜಿನುಗುತ್ತಿತ್ತು.
ನೋವಿನ ಮಧ್ಯೆ ಸಂತೋಷದಿಂದಲೇ ಕಳಿಸಿಕೊಟ್ಟರು
ಒಂದೆಡೆ ಹೆತ್ತ ತಾಯಿಯ ಕಣ್ಣೀರು, ಮತ್ತೊಂದೆಡೆ ಸಾಕಿ ಬೆಳೆಸಿದ ತಾಯಿಯ ಮಮತೆ. ಕೊನೆಗೆ ಹೆತ್ತ ತಾಯಿಯೊಡನೆ ಹೋಗಲು ಆಕಾಶ್ ಅಲಿಯಾಸ್ ಅಗಸ್ಟಿನ್ ಒಪ್ಪಿಕೊಂಡಿದ್ದಾನೆ. ಆಕಾಶನನ್ನು ಇಷ್ಟು ದಿನ ಸಾಕಿ ಸಲುಹಿ ದೊಡ್ಡವನ್ನಾಗಿ ಮಾಡಿ ಮನೆ ಮಗನಂತೆ ಬೆಳೆಸಿದ್ದ ರಾಘವೇಂದ್ರ ಕುಟುಂಬ ಕೂಡಾ ಹೆತ್ತ ತಾಯಿ ಕರುಳಿಗೆ ನೋವಾಗಬಾರದೆಂದು ಆಕಾಶನನ್ನು ಕಳುಹಿಸಿ ಕೊಟ್ಟಿದ್ದಾರೆ.
ಸತ್ತಿದ್ದಾಳೆಂದುಕೊಂಡವಳು 12 ವರ್ಷದ ಬಳಿಕ ಮಂಗಳೂರಲ್ಲಿ ಕಂಡಾಗ...
ಎರಡೂ ಕುಟುಂಬಗಳಿಗೆ ಆಸರೆ ಆಗುತ್ತೇನೆ ಎಂದ ಅಗಸ್ಟಿನ್
ಕೊನೆಗೆ ಹೆತ್ತ ತಾಯಿಯೊಂದಿಗೆ ಹೋಗಲು ಅಗಸ್ಟಿನ್ ಒಪ್ಪಿಕೊಂಡರೂ, ಎರಡೂ ಕುಟುಂಬಗಳಿಗೆ ಆಸರೆಯಾಗಿರುತ್ತೇನೆ ಎಂದಿದ್ದಾನೆ. ಈ ಕಡೆ ಹದಿನೈಟ ವರ್ಷಗಳಿಂದ ಮಗನಂತೆಯೆ ಕಂಡಿದ್ದ ರಾಘವೇಂದ್ರ-ಲಕ್ಷ್ಮೀ ದಂಪತಿ ಕೂಡ ಒಲ್ಲದ ಮನಸ್ಸಿನಿಂದಲೇ ಮಗನನ್ನು ಕಳಿಸಿ ಕೊಟ್ಟಿದ್ದಾರೆ.