ಈರುಳ್ಳಿ ಬೆಳೆವ ಹುಬ್ಬಳ್ಳಿಯಲ್ಲಿ ಸೇಬು ಸಸ್ತಾ, ಆದರೆ ಈರುಳ್ಳಿ ದುಬಾರಿ
ಹುಬ್ಬಳ್ಳಿ, ಡಿಸೆಂಬರ್ 10: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಈರುಳ್ಳಿ ದರ ಸೇಬು ಹಣ್ಣಿನ ದರಕ್ಕಿಂತ ಹೆಚ್ಚಾಗಿದೆ. ಹೆಚ್ಚಾಗಿ ಈರುಳ್ಳಿ ಬೆಳೆಯುವ ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರದಲ್ಲೇ ಈರುಳ್ಳಿ ಪ್ರತಿ ಕೆ.ಜಿ.ಗೆ 150 ರಿಂದ 180 ರೂಪಾಯಿ ಮಾರಾಟವಾಗುತ್ತಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸೇಬು ಸಸ್ತಾ ಆಗಿದ್ದರೆ, ಈರುಳ್ಳಿ ಬೆಲೆಯೇ ದುಬಾರಿಯಾಗಿದೆ. ಅತಿವೃಷ್ಠಿಯಿಂದಾಗಿ ಬೆಳೆದ ಈರುಳ್ಳಿ ನಷ್ಟವಾಗಿದ್ದು, ಉಳಿದ ಅಲ್ಪಸ್ವಲ್ಪ ಬೆಳೆಯ ಬೆಲೆಯೂ ಗಗನಮುಖಿಯಾಗುತ್ತಾ ಸಾಗಿದೆ.
ಸೇಬಿಗಿಂತ ಈರುಳ್ಳಿ ರೇಟ್ ಜಾಸ್ತಿ
ದೂರದ ಕಾಶ್ಮೀರದಲ್ಲಿ ಬೆಳೆಯುವ ಸೇಬು ಹಣ್ಣು ಪ್ರತಿ ಕಿಲೋಗೆ 100 ರಿಂದ 120 ರೂಪಾಯಿ ಮಾರಾಟವಾಗುತ್ತಿದೆ. ಆದರೆ ಇಲ್ಲಿ ಬೆಳೆಯುವ ಈರುಳ್ಳಿ ಮಾತ್ರ ಒಂದು ಕೆ.ಜಿ.ಗೆ 150 ರಿಂದ 180 ರೂಪಾಯಿ ಮಾರಾಟವಾಗುತ್ತಿದೆ. ನಗರದ ಪ್ರಮುಖ ಮಾರುಕಟ್ಟೆಯಾದ ಜನತಾ ಬಜಾರ್, ಹಳೇ ಹುಬ್ಬಳ್ಳಿ ಮಾರುಕಟ್ಟೆ, ದುರ್ಗದ ಬೈಲ್ ನಲ್ಲಿ, ಸೇರಿದಂತೆ ಚಿಲ್ಲರೆ ಮಾರುಕಟ್ಟೆಯಲ್ಲಿ ಇಷ್ಟೊಂದು ದುಬಾರಿ ಬೆಲೆಗೆ ಮಾರಾಟವಾಗುತ್ತಿರುವುದು ಗ್ರಾಹಕರ ಜೇಬಿಗೆ ಕತ್ತರಿ ಬೀಳಿಸಿದೆ. ಮಹಿಳೆಯರು ಆಪಲ್ ಖರೀದಿ ಮಾಡಬೇಕಾ ಅಥವಾ ಈರುಳ್ಳಿ ಖರೀದಿ ಮಾಡಬೇಕಾ ಎಂದು ಯೋಚಿಸುವಂಥ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾವಾರು ಈರುಳ್ಳಿ ಬೆಲೆ; ಬಂಗಾರದಂತೆ ಈರುಳ್ಳಿ ಅಳೆಯುತ್ತಿರುವ ವ್ಯಾಪಾರಿಗಳು
ಏಷ್ಯಾದ ಎರಡನೇ ದೊಡ್ಡ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಡಿಮ್ಯಾಂಡ್
ನಗರದ ಜಗಜ್ಯೋತಿ ಬಸವೇಶ್ವರ ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ತರ ಕರ್ನಾಟಕ ಸೇರಿದಂತೆ ನಾನಾ ಭಾಗಗಳಿಂದ ಈರುಳ್ಳಿ ಮಾರಾಟಕ್ಕೆ ಬರುತ್ತದೆ. ಆದರೆ ಈ ಬಾರಿ ಈರುಳ್ಳಿ ಬೆಲೆ ಹೆಚ್ಚಾಗಿದ್ದರಿಂದ ಒಂದು ಕ್ವಿಂಟಾಲ್ ಈರುಳ್ಳಿ 10,000 ರಿಂದ 15,000 ಸಾವಿರದವರೆಗೆ ಮಾರಾಟವಾಗುತ್ತಿದೆ. ಹಾಗಾಗಿ ಚಿಲ್ಲರೆ ವ್ಯಾಪಾರಸ್ಥರು ಪ್ರತಿ ಕೆ.ಜಿಗೆ 150ರಿಂದ 180 ರೂಪಾಯಿ ಮಾರಾಟ ಮಾಡುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ಅವಳಿ ನಗರದ ಜನತೆ ಹಾಗೂ ಗ್ರಾಮೀಣ ಭಾಗದ ಜನರು ಈರುಳ್ಳಿ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆದರೂ ಊಟಕ್ಕೆ ಈರುಳ್ಳಿ ಅನಿವಾರ್ಯ ಎಂದು ಎರಡು ಕೆ.ಜಿ ತೆಗೆದುಕೊಳ್ಳುವವರು ಒಂದು ಕೆ.ಜಿಗೆ ಇಳಿದಿದ್ದಾರೆ.
ಅತಿವೃಷ್ಠಿಯಿಂದ ಹಾನಿಯಾದ ಈರುಳ್ಳಿ
ಉತ್ತರ ಕರ್ನಾಟಕದಲ್ಲಿ ಈ ಬಾರಿ ಅತಿವೃಷ್ಠಿಯಿಂದ ಈರುಳ್ಳಿ ಬೆಳೆ ಅಪಾರ ಮಟ್ಟದಲ್ಲಿ ಹಾನಿಯಾಗಿದ್ದು, ಧಾರವಾಡ ಜಿಲ್ಲೆಯ ರೈತರು ಬಂಪರ್ ಬೆಲೆ ನಮಗೆ ಸಿಕ್ಕಿಲ್ಲ ಎಂದು ಮರಗುವಂತಾಗಿದೆ. ಅಲ್ಪಸ್ವಲ್ಪ ಈರುಳ್ಳಿ ಬೆಳೆದವರು ಸಹ ಈರುಳ್ಳಿ ಬೆಳೆ ಚೆನ್ನಾಗಿ ಫಸಲು ಇಲ್ಲ ಎಂದು ಕಡಿಮೆ ದರಕ್ಕೆ ಮಾರಾಟ ಮಾಡಿದ್ದಾರೆ. ಆದರೆ ಈಗ ಈರುಳ್ಳಿಗೆ ಚಿನ್ನದ ಬೆಲೆ ಬಂದಿದ್ದು, ರೈತರಲ್ಲಿ ಈರುಳ್ಳಿ ಇಲ್ಲದಂತಾಗಿದೆ.
ಈರುಳ್ಳಿ ಬೆಳೆದವರಿಗೆ ನಿಜಕ್ಕೂ ಲಾಭ ಸಿಗುತ್ತಿದೆಯೇ? ರೈತರ ಅಳಲು ಕೇಳಿ
ಈಜಿಪ್ಟ್ ಈರುಳ್ಳಿ ರುಚಿ ಇಲ್ಲ, ಖರೀದಿಗೆ ಗ್ರಾಹಕರ ಹಿಂದೇಟು
ನಗರದ ಎಪಿಎಂಸಿ ಮಾರುಕಟ್ಟೆಗೆ ಬಂದಿರುವ ಈಜಿಪ್ಟ್ ಈರುಳ್ಳಿ ಖರೀದಿ ಮಾಡಲು ಗ್ರಾಹಕರು ಹಾಗೂ ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದಾರೆ. ಮೊನ್ನೆ 25 ಕಂಟೇನರ್ ಮೂಲಕ ಈಜಿಪ್ಟ್ ಈರುಳ್ಳಿ ಬಂದಾಗ ಸಾಕಷ್ಟು ವ್ಯಾಪಾರಸ್ಥರು ಖರೀದಿ ಮಾಡಿದ್ದರು. ಈಗ ಗ್ರಾಹಕರು ಈಜಿಪ್ಟ್ ಈರುಳ್ಳಿ ರುಚಿ ಇಲ್ಲ ಅಂತ ಹೇಳುತ್ತಿರುವುದರಿಂದ ಈಜಿಪ್ಟ್ ಈರುಳ್ಳಿ ಖರೀದಿ ಮಾಡಲು ಮನಸ್ಸು ಮಾಡುತ್ತಿಲ್ಲ. ಹಾಗಾಗಿ ಹುಬ್ಬಳ್ಳಿಗೆ ಬಂದಿದ್ದ, ಈಜಿಪ್ಟ್ ಈರುಳ್ಳಿಯನ್ನು ಬೆಂಗಳೂರು, ಹೈದರಾಬಾದ್ ಸೇರಿದಂತೆ ಬೇರೆ ಕಡೆ ಕಳಿಸಲಾಗುತ್ತಿದೆ. ಹೀಗಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಈರುಳ್ಳಿ ದುಬಾರಿಯಾಗಿದ್ದು, ಈರುಳ್ಳಿ ಬೆಲೆ ಯಾವಾಗ ಕಡಿಮೆಯಾಗುತ್ತದೆ ಎಂದು ಗ್ರಾಹಕರು ಕಾಯುತ್ತಿದ್ದಾರೆ.