ಯಡಿಯೂರಪ್ಪ ಹಾಲು ನೀಡೋ ಕಾಮಧೇನು, ಜಿಲ್ಲೆ ಅಭಿವೃದ್ದಿಗೆ ಹಿಂಡ್ಕೊಳ್ತೀನಿ
ಹಾವೇರಿ, ನವೆಂಬರ್ 20: ಮುಖ್ಯಮಂತ್ರಿ ಯಡಿಯೂರಪ್ಪ ಒಂದು ರೀತಿ ಕಾಮಧೇನು ಇದ್ದಂತೆ, ಅವರಿಂದ ಕ್ಷೇತ್ರಕ್ಕೆ, ಜಿಲ್ಲೆಗೆ ಬೇಕಾಗಿದ್ದೆಲ್ಲವನ್ನೂ ಹಿಂಡ್ಕೊಳ್ತೆನೆಂದು ಹೇಳಿದ್ದು ಬೇರಾರು ಅಲ್ಲ, ಹಿರೆಕೇರೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಬಿ.ಸಿ.ಪಾಟೀಲ್. ಹಿರೆಕೇರೂರಿನ ಚುನಾವಣಾ ಪ್ರಚಾರದಲ್ಲಿ ಹೀಗೆ ಮಾತನಾಡಿದರು.
ಕಾಂಗ್ರೆಸ್ ಬಿಟ್ಟಿದ್ದು ಒಳ್ಳೆಯದೇ ಆಯಿತು. ಅಲ್ಲಿ ಪ್ರಾಮಾಣಿಕರಿಗೆ ಅಸ್ತಿತ್ವವಿಲ್ಲ. ನನ್ನನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ನಡೆಸಿಕೊಂಡರು ಎಂದು ಹೇಳಿದರು. ಯು.ಬಿ.ಬಣಕಾರ್ ಗೆ ಧನ್ಯವಾದ ತಿಳಿಸುತ್ತೇನೆ. ಏಕೆಂದರೆ ಅವರು ನನಗಾಗಿ ಹಾಗೂ ಯಡಿಯೂರಪ್ಪರಿಗಾಗಿ ತ್ಯಾಗ ಮಾಡಿದ್ದಾರೆ. ಬಿ.ಸಿ.ಪಾಟೀಲ್ ನನ್ನು ಚುನಾವಣೆಗೆ ನಿಲ್ಲಿಸಬೇಕು, ಬಣಕಾರ್ ನೀವು ಕ್ಷೇತ್ರ ತ್ಯಾಗ ಮಾಡಬೇಕು ಎಂದು ಸಿಎಂ ಹೇಳಿದಾಗ ಬಿಟ್ಟು ಕೊಟ್ಟಿದ್ದಾರೆ.
ಹಿರೇಕೆರೂರು: ಜೆಡಿಎಸ್ಗೆ ಆಘಾತ, ನಾಮಪತ್ರ ಹಿಂಪಡೆದ ಅಭ್ಯರ್ಥಿ
ಈಗ ನಾನು, ಬಣಕಾರ್ ಜೊತೆಯಲ್ಲೇ ಇದ್ದೇವೆ, ಇಬ್ಬರೂ ಸೇರಿ ಕ್ಷೇತ್ರವನ್ನು ಅಭಿವೃದ್ದಿಯತ್ತ ಕೊಂಡೊಯ್ಯಲಿದ್ದೇವೆ ಎಂದರು. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಯಡಿಯೂರಪ್ಪನವರು ಕ್ಷೇತ್ರಕ್ಕೆ 250 ಕೋಟಿ ರೂ, ನೀಡಿದ್ದಾರೆ. ಕಾಂಗ್ರೆಸ್ ನಲ್ಲಿದ್ದಿದ್ದರೆ ಇಷ್ಟು ಅನುದಾನ ಬರುತ್ತಿರಲಿಲ್ಲ, ರಾಜೀನಾಮೆ ನೀಡಿದ್ದಕ್ಕೂ ಸಾರ್ಥಕವಾಯಿತು ಎಂದರು.
ಸಿಎಂ ಹೇಳಿದ್ದಾರೆ, ಉಪ ಚುನಾವಣೆಯಲ್ಲಿ ಗೆದ್ದು ಶಾಸಕನಾದ ನಂತರ 24 ಗಂಟೆಯೊಳಗೆ ಸಚಿವರನ್ನಾಗಿ ಮಾಡುತ್ತೇನೆಂದು ಭರವಸೆ ಕೊಟ್ಟಿದ್ದಾರೆ. ಯಡಿಯೂರಪ್ಪ ಸಿಎಂ ಆಗಲು ನಾನು ತ್ಯಾಗ ಮಾಡಿದ್ದೇನೆ, ಸರ್ಕಾರ ಸುಭದ್ರವಾಗಿರಲು ಬಣಕಾರ್ ತ್ಯಾಗ ಮಾಡಿದ್ದಾರೆ. ಇದೇ ನಮ್ಮ ಗೆಲುವಿಗೆ ಸಹಕಾರಿ ಎಂದು 'ಕೌರವ' ಹೇಳಿದರು.