ಹಾವೇರಿ: ಸಹಾಯ ಮಾಡುವೆನೆಂದು ಹಣ ಎಗರಿಸುತ್ತಿದ್ದ ಮಹಿಳೆ ಬಂಧನ
ಹಾವೇರಿ, ಅಕ್ಟೋಬರ್ 12: ಎಟಿಎಂನಿಂದ ಹಣ ತೆಗೆಯಲು ಬರದವರಿಗೆ ಸಹಾಯ ಮಾಡುವೆನೆಂದು ಹೇಳಿಕೊಂಡು ಅವರಿಂದ ಎಟಿಎಂ ಕಾರ್ಡ್ ಪಡೆದು ಅವರಿಗೇ ತಿಳಿಯದಂತೆ ಹಣ ದೋಚುತ್ತಿದ್ದ ಮಹಿಳೆಯನ್ನು ಇಂದು ಹಾನಗಲ್ ಪೊಲೀಸರು ಬಂಧಿಸಿದ್ದಾರೆ.
ಹಾವೇರಿಯ ಹಾನಗಲ್ ತಾಲೂಕಿನ ಬಾಳೂರು ಗ್ರಾಮದ ನಿವಾಸಿ ಕೌಸರಬಾನು ಬಂಕಾಪುರ (38) ಬಂಧಿತ ಮಹಿಳೆ. ಎಟಿಎಂನಲ್ಲಿ ಹಣ ತೆಗೆಯಲು ಬರುವ ಅಮಾಯಕರನ್ನೇ ನೋಡಿಕೊಂಡು, ಸಹಾಯ ಮಾಡುವೆ ಎಂದು ಅವರಿಂದ ಎಟಿಎಂ ಕಾರ್ಡ್ ಪಡೆಯುತ್ತಿದ್ದಳು. ಪಾಸ್ ವರ್ಡ್ ಕೇಳಿ, ನಂತರ ಹಣ ತೆಗೆದುಕೊಟ್ಟು ಅವರೊಂದಿಗೆ ಮಾತನಾಡುತ್ತಾ, ಅವರಿಗೆ ಗೊತ್ತೇ ಆಗದಂತೆ ಕಾರ್ಡ್ ಅನ್ನು ಬದಲಿಸಿಕೊಡುತ್ತಿದ್ದಳು ಎಂದು ತಿಳಿದುಬಂದಿದೆ.
ಮೈಸೂರು; ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ವಂಚನೆ
ನಂತರ ಅದೇ ಕಾರ್ಡ್ ನಿಂದ ಬೇರೆ ಬೇರೆ ಎಟಿಎಂಗಳಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದಳು. ಸೆಕ್ಯುರಿಟಿ ಗಾರ್ಡ್ ಇಲ್ಲದ ಎಟಿಎಂ ಕೇಂದ್ರಗಳನ್ನೇ ನೋಡಿಕೊಂಡು ಈ ರೀತಿ ಹಣ ಎಗರಿಸುವ ಕೆಲಸ ಮಾಡುತ್ತಿದ್ದಳು. ಹಾನಗಲ್, ಹಿರೇಕೆರೂರು, ರಾಣೆಬೆನ್ನೂರು, ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ, ಶಿಕಾರಿಪುರ ಸೇರಿದಂತೆ ಹಲವೆಡೆ ಹೀಗೆಯೇ ಜನರನ್ನು ವಂಚಿಸಿ ಎಟಿಎಂ ಕಾರ್ಡ್ ಎಗರಿಸಿ ಹಣ ಲಪಟಾಯಿಸಿದ್ದಾಳೆ. ಈಕೆಯಿಂದ ವಂಚನೆಗೊಳಗಾಗಿದ್ದ ಇಬ್ಬರು ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Recommended Video
ಸಿಪಿಐ ಶಿವಶಂಕರ ಗಣಾಚಾರಿ ಮತ್ತು ಪಿಎಸ್ ಐ ಶ್ರೀಶೈಲ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಈಕೆಯನ್ನು ಬಂಧಿಸಿದ್ದಾರೆ. ಬಂಧಿತಳಿಂದ ಎಂಟು ಎಟಿಎಂ ಕಾರ್ಡ್ ಮತ್ತು ಐವತ್ತೈದು ಸಾವಿರ ರೂ. ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.