ಕೇಂದ್ರ ಬಜೆಟ್-2021 ನಿರೀಕ್ಷೆ: ರಾಣೇಬೆನ್ನೂರು-ಶಿವಮೊಗ್ಗ ರೈಲು ಯೋಜನೆ ಕಾಮಗಾರಿ ಯಾವಾಗ?
ಹಾವೇರಿ, ಜನವರಿ 22: ಉತ್ತರ ಕರ್ನಾಟಕದ ಹೆಬ್ಬಾಗಿಲು ರಾಣೇಬೆನ್ನೂರು ಹಾಗೂ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಡುವಿನ ರೈಲು ಯೋಜನೆಗೆ ಕೇಂದ್ರ ಸರ್ಕಾರ ಈಗಾಗಲೇ ಹಸಿರು ನಿಶಾನೆ ತೋರಿದೆ. ಆದರೆ ಈ ರೈಲು ಯೋಜನೆಯ ಕಾಮಗಾರಿ ಯಾವಾಗ ಎಂಬುದು ಈ ಭಾಗದ ಜನರ ಯಕ್ಷ ಪ್ರಶ್ನೆಯಾಗಿದೆ.
ಕಳೆದ ಬಾರಿಯ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಹಾವೇರಿ ಜಿಲ್ಲೆಗೆ ರೈಲ್ವೆಯಲ್ಲಿ ಬಂಪರ್ ಕೊಡುಗೆ ಲಭಿಸಿತ್ತು. ಸೀಡ್ಸ್ ಬೆಳೆಯಲ್ಲಿ ಏಷ್ಯಾ ಖಂಡಕ್ಕೆ ಹೆಸರುವಾಸಿಯಾಗಿರುವ ರಾಣೇಬೆನ್ನೂರಿನಿಂದ ಮಲೆನಾಡಿನ ತವರು ಶಿವಮೊಗ್ಗಕ್ಕೆ ನೇರ ರೈಲು ಸಂಪರ್ಕ ಲಭಿಸಿತ್ತು. ಕೇಂದ್ರ ಸರ್ಕಾರ ಈ ಯೋಜನೆಗೆ 150 ಕೋಟಿ ರೂ. ಮೀಸಲಿಟ್ಟಿದೆ.
ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ; ರೈತರ ಬೇಡಿಕೆಗಳು
ಶಿವಮೊಗ್ಗದಿಂದ ರೈಲು ಹಳಿ ಆರಂಭಗೊಂಡು ಸವಳಂಗ, ಶಿಕಾರಿಪುರ, ಮಾಸೂರು, ರಟ್ಟೀಹಳ್ಳಿ, ಹಲಗೇರಿ ಮಾರ್ಗವಾಗಿ ರಾಣೇಬೆನ್ನೂರು ತಲುಪಲಿದ್ದು, ರಾಣೇಬೆನ್ನೂರಿನಲ್ಲಿ ಜಂಕ್ಷನ್ ನಿರ್ಮಾಣವಾಗಲಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದ ಶಿವಕುಮಾರ್ ಉದಾಸಿ ಅವರುಗಳ ಪ್ರಯತ್ನದಿಂದ ಈ ರೈಲು ಯೋಜನೆ ಲಭಿಸಿದ್ದರೂ, ಯೋಜನೆ ಆರಂಭ ಯಾವಾಗ ಹಾಗೂ ಕಾಮಗಾರಿ ಮುಗಿಯುವ ನಿರ್ದಿಷ್ಟ ದಿನಾಂಕ ನಿಗದಿಯಾಗಿಲ್ಲ.
Recommended Video
ಇನ್ನೂ ಭೂಸ್ವಾಧೀನ ಕಾರ್ಯ ನಡೆಯುತ್ತಿದ್ದು, ಆದಷ್ಟೂ ಬೇಗ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು, ೨೦೨೧ರ ಕೇಂದ್ರ ಬಜೆಟ್ ನಲ್ಲಿ ಶೀಘ್ರವಾಗಿ ಕಾಮಗಾರಿ ಆರಂಭಗೊಳ್ಳುವಂತೆ ನಿರ್ದೇಶಿಸಲಿ ಮತ್ತು ಈ ಭಾಗದ ಬಹುದಿನಗಳ ಕನಸಾಗಿರುವ ಬಯಲುಸೀಮೆ ಹಾಗೂ ಮಲೆನಾಡು ರೈಲು ಸಂಪರ್ಕ ಸಾಕಾರಗೊಳ್ಳಲಿ ಎಂಬುದಾಗಿದೆ.