ಬ್ಯಾಡಗಿಯ ಸರ್ಕಾರಿ ಶಾಲೆ ಆವರಣದಲ್ಲೇ 3 ಮಕ್ಕಳ ಜಲಸಮಾಧಿ
ಹಾವೇರಿ, ಅಕ್ಟೋಬರ್.25: ದಸರಾ ಹಬ್ಬದ ಸಂಭ್ರಮದಲ್ಲಿದ್ದ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ. ನಾಡಹಬ್ಬದ ಖುಷಿಯಲ್ಲಿ ನಳನಳಿಸುತ್ತಿದ್ದ ನಗರದಲ್ಲಿ ಮಕ್ಕಳ ಸಾವಿನ ಸುದ್ದಿ ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡಿದೆ. ವಿದ್ಯಾಮಂದಿರದ ಆವರಣದಲ್ಲೇ ನಡೆದ ದುರ್ಘಟನೆಯಿಂದ ಮಕ್ಕಳನ್ನು ಕಳೆದುಕೊಂಡ ಹೆತ್ತವರು ಕಣ್ಣೀರು ಸುರಿಸುತ್ತಿದ್ದಾರೆ.
ಬ್ಯಾಡಗಿ ನಗರದ ಕದರಮಂಡಲಗಿ ರಸ್ತೆಯಲ್ಲಿರುವ 2ನೇ ನಂಬರ್, ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಆವರಣದಲ್ಲಿ ತೋಡಿದ್ದ ಕಾಲಂ ಗುಂಡಿಯಲ್ಲಿ ಬಿದ್ದು ಮೂವರು ಮಕ್ಕಳು ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ.
ಅಬ್ಬಬ್ಬಾ..! ಬ್ಯಾಡಗಿಯಲ್ಲಿ ಮದ್ಯಪ್ರಿಯರಿಗೆ ಅದೇನು ಶಿಸ್ತು?
ಕಳೆದ ನಾಲ್ಕು ದಿನಗಳಿಂದ ನಗರದಲ್ಲಿ ಸುರಿದ ಮಳೆಯಿಂದಾಗಿ ಕಾಲಂ ಗುಂಡಿಯಲ್ಲಿ ನೀರಿನಿಂದ ತುಂಬಿ ಹೋಗಿತ್ತು. ಅಕ್ಟೋಬರ್.24ರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಶಾಲಾ ಆವರಣದಲ್ಲಿ ಆಟವಾಡಲು ತೆರಳಿದ ವಿದ್ಯಾರ್ಥಿಗಳು ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಮೃತರನ್ನು ಸೈಯದ್ ಅಕ್ಮಲ್(9), ಸೈಯದ್ ಅಜ್ಮಲ್(6), ಹಾಗೂ ಜಾಫರ್ ಸವಣೂರು(12) ಎಂದು ಗುರುತಿಸಲಾಗಿದೆ.
ರಜೆ ಹಿನ್ನೆಲೆ ಅಜ್ಜಿಯ ಮನೆಗೆ ಬಂದಿದ್ದ ಮಕ್ಕಳು
ಕೊರೊನಾವೈರಸ್ ಸೋಂಕು ಹರಡುವಿಕೆ ಪ್ರಭಾವ ಹೆಚ್ಚಾದ ಹಿನ್ನೆಲೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಹಿನ್ನೆಲೆ ಗೋವಾದಿಂದ ಹಾವೇರಿ ಜಿಲ್ಲೆಯ ಬ್ಯಾಡಗಿ ನಗರದಲ್ಲಿರುವ ಅಜ್ಜಿ ಮನೆಗೆ ಸೈಯದ್ ಅಕ್ಮಲ್ ಮತ್ತು ಸೈಯದ್ ಅಜ್ಮಲ್ ಬಂದಿದ್ದರು. ಜಾಫರ್ ಸವಣೂರು ಜೊತೆಗೂಡಿ ಮನೆಯ ಸಮೀಪದಲ್ಲಿದ್ದ ಶಾಲೆಯ ಆವರಣಕ್ಕೆ ಐವರು ಮಕ್ಕಳು ಆಟವಾಡಲು ತೆರಳಿದ್ದಾರೆ. ಮೊದಮೊದಲು ಕಾಲಿನೆತ್ತರಕ್ಕಿದ್ದ ನೀರಿಗೆ ಇಳಿದ ಮಕ್ಕಳು ಅಲ್ಲಿಂದ ಮುಂದೆ ಹೋಗುತ್ತಿದ್ದಂತೆ ಮೂವರು ಕಾಲಂ ಗುಂಡಿಯಲ್ಲಿ ಜಾರಿ ಬಿದ್ದಿದ್ದಾರೆ.
ಓಡಿ ಬಂದು ಸಂಬಂಧಿಕರಿಗೆ ಮಾಹಿತಿ ನೀಡಿದ ಸಹಪಾಟಿ
ನೀರಿನಲ್ಲಿ ಇಳಿದ ಮೂವರು ಕಣ್ಣಿಗೆ ಕಾಣದಂತೆ ಮುಳುಗಿದ ದೃಶ್ಯವನ್ನು ಕಂಡ ಇಬ್ಬರು ಸಹಪಾಟಿಗಳು ಓಡಿ ಹೋಗಿ ಸಂಬಂಧಿಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ತಕ್ಷಣಕ್ಕೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಮಕ್ಕಳನ್ನು ರಕ್ಷಿಸುವ ಕಾರ್ಯಾಚರಣೆ ಆರಂಭಿಸಿದರು. ಆದರೆ ಮಕ್ಕಳನ್ನು ಬದುಕಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಮಧ್ಯಾಹ್ನ 3.45ರ ವೇಳೆಗೆ ಗುಂಡಿನ ಬಿದ್ದಿದ್ದ ಮಕ್ಕಳ ಮೃತದೇಹವನ್ನು ಹೊರ ತೆಗೆಯಲಾಯಿತು.
ಕಾಂಟ್ರ್ಯಾಕ್ಟರ್ ವಿರುದ್ಧ ಕೆರಳಿದ ಕುಟುಂಬ ಸದಸ್ಯರು
ಕಾಲಂ ಗುಂಡಿಯಿಂದ ಮೂವರು ಮಕ್ಕಳ ಮೃತದೇಹವನ್ನು ಹೊರ ತೆಗೆಯುತ್ತಿದ್ದಂತೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಶಾಲೆ ಆವರಣದಲ್ಲೇ ನಿಂತು ಕಾರ್ಯಾಚರಣೆ ವೀಕ್ಷಿಸುತ್ತಿದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಮತ್ತು ವೈಯಕ್ತಿಕವಾಗಿ 25 ಸಾವಿನ ರೂಪಾಯಿ ಪರಿಹಾರ ಘೋಷಿಸಿದರು.
ಗುತ್ತಿಗೆದಾರನ ತಪ್ಪಿನಿಂದಲೇ ಮಕ್ಕಳ ಸಾವು?
ನಗರದ ಸಂತೆ ಆವರಣದ ಪಕ್ಕದಲ್ಲೇ ಇರುವ 2ನೇ ನಂಬರ್ ಉರ್ದು ಶಾಲೆಯ ಸುತ್ತಮುತ್ತಲೂ ಜನ ಸಂಚಾರ ನಿರಂತರವಾಗಿರುತ್ತದೆ. ಶಾಲೆ ಆವರಣ ಎಂದ ಮೇಲೆ ಮಕ್ಕಳು ಆಟಕ್ಕಾಗಿ ಹೋಗುವುದು ಸರ್ವೇ ಸಾಮಾನ್ಯ. ಹೀಗಿರುವಾಗ ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ಲಕ್ಷ್ಯ ತೋರಿದ ಗುತ್ತಿಗೆದಾರ ಮಾರುತಿ ಹಂಜಗಿ ವಿರುದ್ಧ ಪೊಲೀಸರು 304ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Recommended Video
ಕಾಂಟ್ರ್ಯಾಕ್ಟರ್ ನಿರ್ಲಕ್ಷ್ಯಕ್ಕೆ ನಿದರ್ಶನ:
- ಶಾಲೆ ಆವರಣದಲ್ಲಿ ಗುಂಡಿ ತೋಡಿದ್ದರೂ ಗೇಟ್ ಮುಚ್ಚದೇ ತೆರೆದಿಟ್ಟಿದ್ದು.
- ಕಾಲಂ ಗುಂಡಿ ತೋಡಿಸಿದ್ದು ಅಥವಾ ಕಾಮಗಾರಿ ಪ್ರಗತಿ ಬಗ್ಗೆ ಸೂಚನಾ ಫಲಕಗಳಿಲ್ಲ.
- ನಾಲ್ಕು ದಿನ ಸುರಿದ ಮಳೆ ಬಳಿಕವೂ ಎಚ್ಚೆತ್ತುಕೊಳ್ಳದೇ ನಿರ್ಲಕ್ಷ್ಯ ತೋರಿರುವುದು.
- ಕಾಮಗಾರಿ ನಡೆಸುತ್ತಿರುವ ಸ್ಥಳದಲ್ಲಿ ವಾಸ್ತವ ಸ್ಥಿತಿಯ ಬಗ್ಗೆ ಅರಿತುಕೊಳ್ಳದಿರುವುದು.
- ಶಾಲೆ ಆವರಣದಲ್ಲಿ ಗುಂಡಿ ತೋಡಿದ ಬಳಿಕ ಕಾವಲುಗಾರನ ನೇಮಿಸದೇ ಇರುವುದು.