ಡಿಕೆಶಿ-ಸಿದ್ದರಾಮಯ್ಯ ನಡುವೆ ಒಡಕು: ನಿಜವೇ ಸಚಿವರ ಈ ಮಾತು?
ಹಾವೇರಿ, ಜುಲೈ.15: ನೊವೆಲ್ ಕೊರೊನಾವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸಮರ್ಥವಾಗಿ ಕೆಲಸ ಮಾಡುತ್ತಿದೆ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
Recommended Video
ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ಎಪಿಎಂಸಿಯಲ್ಲಿ ಮಾತನಾಡಿದ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್, ಬಿಜೆಪಿ ಸರ್ಕಾರದ ಮಂತ್ರಿ ಮಂಡಲದ ಸಚಿವರಲ್ಲಿ ಹೊಂದಾಣಿಕೆಯ ಕೊರತೆಯಿದೆ ಎಂಬ ಕಾಂಗ್ರೆಸ್ ಆರೋಪವನ್ನು ತಳ್ಳಿ ಹಾಕಿದರು.
ಜನರು ಬೆಂಗಳೂರು ಬಿಟ್ಟು ಹೊರಟಿದ್ದೇಕೆ; ಸೀಕ್ರೆಟ್ ಬಿಚ್ಚಿಟ್ಟ ಡಿಕೆಶಿ!
ಬಿಜೆಪಿ ಸರ್ಕಾರ ಮತ್ತು ಸಚಿವರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಮ್ಮ ಮಂತ್ರಿಗಳ ನಡುವೆ ಕಾಂಗ್ರೆಸ್ ಆರೋಪಿಸುತ್ತಿರುವಂತೆ ಹೊಂದಾಣಿಕೆಯ ಕೊರತೆಯೂ ಇಲ್ಲ. ಸರ್ಕಾರದ ಎಲ್ಲ ಸಚಿವರು ಒಂದಾಗಿ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರಿಗೆ ತಿರುಗೇಟು ಕೊಟ್ಟ ಸೋಮಶೇಖರ್
ಬಿಜೆಪಿ ಸಚಿವರಲ್ಲಿ ಹೊಂದಾಣಿಕೆಯಿಲ್ಲ ಎನ್ನುವ ಕೆಪಿಸಿಸಿ ಅಧ್ಯಕ್ಷರು ಮೊದಲು ತಮ್ಮ ಪಕ್ಷದ ಬಗ್ಗೆ ಯೋಚಿಸಲಿ ಎನ್ನುವ ಮೂಲಕ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಹೊಂದಾಣಿಕೆ ಇದೆಯಾ. ನೂರಕ್ಕೆ ನೂರರಷ್ಟು ಇಬ್ಬರು ನಾಯಕರ ನಡುವೆ ಹೊಂದಾಣಿಕೆಯಿಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಆರೋಪಿಸಿದ್ದಾರೆ.
ಹಣವೇ ಖರ್ಚು ಆಗಿಲ್ಲ ಎಂದ ಮೇಲೆ ಅವ್ಯವಹಾರ ಎಲ್ಲಿ?
ಕೊರೊನಾವೈರಸ್ ಸೋಂಕು ನಿಯಂತ್ರಿಸುವ ವಿಚಾರದಲ್ಲಿ ಸರ್ಕಾರವು ಭಾರೀ ಅವ್ಯವಹಾರ ನಡೆಸಿರುವ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಆರೋಪಿಸುತ್ತಿರುವುದಕ್ಕೂ ಸರ್ಕಾರವು ಖರ್ಚು ಮಾಡಿರುವ ಹಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಖರ್ಚು ಮಾಡಿರುವ ಹಣವೇ ಕಡಿಮೆ ಆಗಿರುವಾಗ ಅವರು ಆರೋಪಿಸುವಷ್ಟು ಅವ್ಯವಹಾರ ಮಾಡುವುದಕ್ಕೆ ಹೇಗೆ ತಾನೇ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯನವರು ಪ್ರಚಾರಕ್ಕಾಗಿ ಲೆಕ್ಕ ಕೇಳುತ್ತಿದ್ದಾರಾ?
ಸರ್ಕಾರವು ಅವ್ಯವಹಾರ ನಡೆಸಿದೆ ಎಂದು ಆರೋಪಿಸುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಸುಖಾಸುಮ್ಮನೆ ಪ್ರಚಾರಕ್ಕಾಗಿ ಲೆಕ್ಕಕೊಡಿ ಲೆಕ್ಕಕೊಡಿ ಅಂತಿದ್ದಾರೆ. ಲೆಕ್ಕ ಕೊಡುವುದಕ್ಕೆ ನಾವು ಸಿದ್ಧರಿದ್ದರೂ, ಅವರು ಕೇಳುವುದಕ್ಕೆ ತಯಾರಿಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಕಿಡಿಕಾರಿದ್ದಾರೆ.
ಸಿಎಂ ಪರಮಾಧಿಕಾರ ಪ್ರಶ್ನೆ ಮಾಡುವುದಕ್ಕೆ ಸಾಧ್ಯವೇ?
ಸರ್ಕಾರದಲ್ಲಿ ಯಾರನ್ನು ಸಚಿವರನ್ನು ಮಾಡಬೇಕು. ಯಾರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಬೇಕು ಎನ್ನುವುದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತೀರ್ಮಾನಿಸುತ್ತಾರೆ. ರಾಜೀನಾಮೆ ಕೊಟ್ಟ ಕೆಲವರನ್ನು ಎಂಎಲ್ ಸಿ ಮಾಡಿದ್ದಾರೆ. ಯಾರಿಗೆ ಏನು ಮಾಡಬೇಕೋ ಅದನ್ನು ಸಿಎಂ ಮಾಡುತ್ತಾರೆ. ಈಗ ನಾವು ರಾಜೀನಾಮೆ ನೀಡುವ ಪ್ರಮೇಯವೇ ಬರುವುದಿಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಸರ್ಕಾರದ ವಿರುದ್ಧ ಸಿಡಿಮಿಡಿಗೊಂಡಿದ್ದ ಡಿ.ಕೆ.ಶಿವಕುಮಾರ್
ರಾಜ್ಯದಲ್ಲಿ ಸರ್ಕಾರವನ್ನು ನಡೆಸುತ್ತಿರುವ ಬಿಜೆಪಿಯ ಶಾಸಕರು ಮತ್ತು ಸಚಿವರ ನಡುವೆ ಹೊಂದಾಣಿಕೆ ಕೊರತೆ ಎದ್ದು ಕಾಣುತ್ತಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಅವರ ನಡುವೆಯೇ ಹೊಂದಾಣಿಕೆಯಿಲ್ಲ. ಒಬ್ಬೊಬ್ಬ ಸಚಿವರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅವರಲ್ಲಿಯೇ ಅವರಿಗೆ ಸರಿಯಾದ ನಂಬಿಕೆಯಿಲ್ಲ. ಅಧಿಕಾರಿಗಳನ್ನೂ ಸರಿಯಾಗಿ ನಂಬುತ್ತಿಲ್ಲ ಎಂದು ಡಿಕೆಶಿ ಆರೋಪಿಸಿದ್ದರು. ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳಲು ಬಂದ ಸಾವಿರಾರು ಜನರಿಗೆ ಕೊರೊನಾವೈರಸ್ ಸೋಂಕಿತ ಭೀತಿ ಎದುರಾಗಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ಸರಿಯಾದ ಭರವಸೆನೀಡುತ್ತಿಲ್ಲ. ಸರ್ಕಾರವನ್ನೂ ಸರಿಯಾಗಿ ನಡೆಸುತ್ತಿಲ್ಲ. ಇದರಿಂದಾಗಿಯೇ ಜನರು ಬೆಂಗಳೂರನ್ನು ತೊರೆದು ತಮ್ಮ ತಮ್ಮ ಊರುಗಳಿಗೆ ವಾಪಸ್ ತೆರಳುತ್ತಿದ್ದಾರೆ ಎಂದು ಡಿಕೆಶಿ ಕಿಡಿ ಕಾರಿದ್ದರು.