ಬಿದ್ದರೂ ಮೀಸೆ ಮಣ್ಣಾಗಲಿಲ್ಲ; ಡಿಕೆಶಿಗೆ ಬಿ.ಸಿ.ಪಾಟೀಲ್ ತಿರುಗೇಟು
ಹಾವೇರಿ, ನವೆಂಬರ್ 24: "ಬಿಜೆಪಿಗೆ ಬಂದ ಶಾಸಕರು ಕಾಂಗ್ರೆಸ್ ಗೆ ವಾಪಸ್ ಹೋಗುವ ಪ್ರಮೇಯವೇ ಇಲ್ಲ" ಎಂದು ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ ಕೃಷಿ ಸಚಿವ ಬಿ.ಸಿ.ಪಾಟೀಲ್.
ಹಾವೇರಿಯಲ್ಲಿ ಮಂಗಳವಾರ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷವನ್ನು ಸೇರಲು ಬಿಜೆಪಿ ಸೇರಿದಂತೆ ಬೇರೆ ಪಕ್ಷದ ನಾಯಕರು ನನ್ನ ಬಳಿ ಬಂದಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಈ ಹೇಳಿಕೆ ಸತ್ಯಕ್ಕೆ ದೂರವಾದದ್ದು" ಎಂದಿದ್ದಾರೆ. ಡಿ.ಕೆ.ಶಿವಕುಮಾರ್ ಶಿರಾ ಮತ್ತು ಆರ್.ಆರ್. ನಗರದಲ್ಲಿ ಟುಸ್ ಆಗಿದ್ದಾರೆ. ತಮ್ಮ ಮೇಲೆ ಸಿಬಿಐ ದಾಳಿಗೆ ಬಿಜೆಪಿ ಕಡೆ ಕೈ ತೋರಿಸುವ ಡಿ.ಕೆ. ಶಿವಕುಮಾರ್ ಬೇರೆ ಪಕ್ಷದ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಮನೋಭಾವದಲ್ಲಿದ್ದಾರೆ ಎಂದರು.
"ಕಾಂಗ್ರೆಸ್ ಸೇರಲು ಬೇರೆ ಪಕ್ಷದ ನಾಯಕರು ನನ್ನ ಬಳಿ ಬಂದಿದ್ದಾರೆ''
ಇದೇ ಸಂದರ್ಭ ಕೋಡಿ ಶ್ರೀಗಳ ರಾಜಕೀಯ ಭವಿಷ್ಯದ ಕುರಿತು ಪ್ರತಿಕ್ರಿಯಿಸಿ, "ನಾನು ರಾಜಕೀಯಕ್ಕೆ ಬರುವ ಮೊದಲು ಕೋಡಿಹಳ್ಳಿ ಶ್ರೀಗಳನ್ನು ಭೇಟಿ ಮಾಡಿದ್ದೆ. ಅವರು ನಿನಗೆ ರಾಜಕೀಯದಲ್ಲಿ ಭವಿಷ್ಯವಿಲ್ಲ ಎಂದಿದ್ದರು. ಆದರೆ ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ, ಒಂದು ಬಾರಿ ಸಚಿವನಾಗಿದ್ದೇನೆ. ಭವಿಷ್ಯದ ಮೇಲೆ ಎಲ್ಲ ನಿರ್ಧಾರವಾಗಿಲ್ಲ. ಜನರ ಪ್ರೇಮ ಇಟ್ಟುಕೊಂಡವರಿಗೆ ರಾಜಕೀಯದಲ್ಲಿ ನೆಲೆ ಇದೆ" ಎಂದು ಪರೋಕ್ಷವಾಗಿ ಭವಿಷ್ಯವನ್ನು ತಳ್ಳಿಹಾಕಿದರು.
ವಿಜಯನಗರ ನೂತನ ಜಿಲ್ಲೆಯಾಗಿರುವುದನ್ನು ಸ್ವಾಗತಿಸಿದ ಅವರು, ಪ್ರತ್ಯೇಕ ಜಿಲ್ಲೆ ರಚನೆಯಿಂದ ಜನರಿಗೆ ಒಳ್ಳೆಯದಾಗಲಿದೆ. ಇದು ವಿಜಯನಗರ ಕೃಷ್ಣದೇವರಾಯನಿಗೆ ಗೌರವ ಸಲ್ಲಿಸಿದಂತೆ. ರಾಜ್ಯದಲ್ಲಿ ಬೇರೆ ನೂತನ ಜಿಲ್ಲೆಗಳ ಸ್ಥಾಪನೆಯಾದಾಗ ವಿರೋಧ ವ್ಯಕ್ತವಾಗಲಿಲ್ಲ. ಆದರೆ ವಿಜಯನಗರ ಜಿಲ್ಲೆ ಸ್ಥಾಪನೆಗೆ ಯಾಕಿಷ್ಟು ವಿರೋಧ ಎಂದು ಪ್ರಶ್ನಿಸಿದರು.