ಕಾಂಗ್ರೆಸ್ ಸ್ಥಾಪಿಸಿದ್ದು ಬ್ರಿಟಿಷ್ ವ್ಯಕ್ತಿ: ಸಿಎಂ ಬಸವರಾಜ ಬೊಮ್ಮಾಯಿ
ಹಾವೇರಿ, ಅ.27: ಕಾಂಗ್ರೆಸ್ ಸ್ಥಾಪಿಸಿದ್ದು ಬ್ರಿಟೀಷ್ ವ್ಯಕ್ತಿ. ಅವರಂತೆಯೇ ಒಡೆದಾಳುವ ನೀತಿಯನ್ನು ಈಗಿನ ಕಾಂಗ್ರೆಸ್ ನಾಯಕರೂ ಸಹ ಅನುಸರಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ವಿವಿಧ ಉಪ್ಪುಣಶಿ, ಅಡೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೋಡ್ಶೋ ನಡೆಸಿ ಮಾತನಾಡಿದರು.
135 ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದ್ದು ಒಬ್ಬ ಬ್ರಿಟಿಷ್ ವ್ಯಕ್ತಿ. ಬ್ರಿಟಿಷರು ಸದಾ ಒಡೆದಾಳುವುದು ನೀತಿಯನ್ನೇ ಅನುಸರಿಸಿಕೊಂಡು ಬಂದವರು. ಈಗ ಅದೇ ಸಂಸ್ಕೃತಿಯನ್ನು ಕಾಂಗ್ರೆಸ್ ಮುಂದುವರಿಸಿಕೊಂಡು ದೇಶದ ಜನರ ಮಧ್ಯೆ ಒಡೆದಾಳುವ ರಾಜಕಾರಣ ಮಾಡುತ್ತಿದೆ. ಇಂದಿಗೂ ಕಾಂಗ್ರೆಸ್ ಪಕ್ಷ ಬ್ರಿಟಿಷರ ನೀತಿಯನ್ನೇ ಅನುಸರಿಸುತ್ತಿದೆ. ಹೀಗಾಗಿ ಕಾಂಗ್ರೆಸ್ಸನ್ನು ಪುಡಿ ಪುಡಿ ಮಾಡಿ ಎಂದು ಬೊಮ್ಮಾಯಿ ಮತದಾರರಿಗೆ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಹೆಸರಿನಲ್ಲಿ ಒಂದು ಆಯೋಗವನ್ನು ರಚಿಸಿತು. ಆಯೋಗದ ಮೂಲಕ ಯಾವುದೇ ಸಮೀಕ್ಷೆ ನಡೆಸದೆ ಕೇವಲ ಜಾತಿ ಉಪಜಾತಿಗಳ ಪಟ್ಟಿ ತಯಾರಿಸಲಾಯಿತು. ಸಮೀಕ್ಷೆ ಹೆಸರಲ್ಲಿ ಜಾತಿ ಉಪಜಾತಿಗಳನ್ನು ಪತ್ತೆಹಚ್ಚಿದರು. ಅಲ್ಪಸಂಖ್ಯಾತರಲ್ಲಿ 50ಕ್ಕೂ ಹೆಚ್ಚು ಉಪಜಾತಿಗಳಿವೆ ಎಂಬುದನ್ನು ಕಾಂಗ್ರೆಸ್ ಪತ್ತೆ ಮಾಡಿತು ಈ ಮೂಲಕ ಮತ ಗಳಿಸುವ ಹುನ್ನಾರವನ್ನು ಮಾಡಿದೆ. ಕಾಂಗ್ರೆಸ್ ಪಕ್ಷ ಯಾರನ್ನೂ ಗುತ್ತಿಗೆ ಪಡೆದಿಲ್ಲ. ಅದಕ್ಕೆ ಅವಕಾಶವನ್ನು ಕೊಡಬೇಡಿ ಎಂದು ಅವರು ಮತದಾರರಲ್ಲಿ ಮನವಿ ಮಾಡಿದರು.
ಅಲ್ಪಸಂಖ್ಯಾತರ ಸಮುದಾಯಕ್ಕೆ ಅತಿ ಹೆಚ್ಚು ಅನ್ಯಾಯ ಮಾಡಿದ ಯಾವುದಾದರೂ ಪಕ್ಷವಿದ್ದರೆ ಅದು ಕಾಂಗ್ರೆಸ್. ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಸುಳ್ಳಿನ ಕಂತೆಯನ್ನೇ ಹೇಳಿದರೂ ಜನ ತೀರ್ಮಾನ ಮಾಡಿದ್ದಾರೆ. ಜಾತ್ಯತೀತ ಪಕ್ಷವೆಂದು ಕರೆದುಕೊಳ್ಳುವ ಕಾಂಗ್ರೆಸ್ ಜಾತಿಯನ್ನೇ ಹಿಡಿದು ಜನರನ್ನು ಒಲೈಸುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಬಂಧುಗಳಿಗೆ ಕಾಂಗ್ರಸ್ ಏನು ಮಾಡಿದೆ. ಅವರ ಪರಿಸ್ಥಿತಿ ಏನಿತ್ತು ಹಾಗೆಯೇ ಇದೆ. ಈ ಸಮುದಾಯದ ಮಕ್ಕಳಿಗೆ 10 ವರ್ಷವಾದ ಕೂಡಲೇ ಕೈಯಲ್ಲಿ ಪುಸ್ತಕ ಪೆನ್ ಇರುವುದಿಲ್ಲ ಎಂದರು.
ಕಾಂಗ್ರೆಸ್ ಪಕ್ಷವು ಆರ್ಥಿಕ ಸಮೀಕ್ಷೆ ಆಯೋಗ ರಚಿಸಿ, ಜಾತಿ ಜಾತಿಗಳ ನಡುವೆ ಜಗಳ ತಂದು ಅದರ ಲಾಭ ಪಡೆಯಲು ನೋಡಿದರು. ಎಲ್ಲಾ ಸಮಾಜಗಳ ಉಪಜಾತಿಗಳ ಉಪಜಾತಿಗಳನ್ನು ಗುರುತಿಸುವ ಕೆಲಸವನ್ನು ಮಾಡಿದರು. ಇದನು ಅರಿತಿರುವ ಜನ ಹಾನಗಲ್ ತಾಲ್ಲೂಕಿನ ಜನ ಒಟ್ಟಾಗಿ ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಕಾರ್ಮಿಕರು, ಶ್ರಮಜೀವಿಗಳು, ಕುರಿ ಕಾಯುವವರು, ನೇಕಾರರು ಎಲ್ಲಾ ವೃತ್ತಿಯ ಬಾಂಧವರೂ ಕೂಡ ನನ್ನ ಸಮುದಾಯದವರು. ಬದುಕನ್ನು ಹಂಚಿಕೊಂಡು ಬಾಳ್ವೆ ಮಾಡಿದ್ದೇವೆ. ಅದನ್ನೇ ಹಾನಗಲ್ನಲ್ಲಿ ಮಾಡುತ್ತಿದ್ದೇವೆ. ಎಲ್ಲಾ ಸಮುದಾಯವದರೂ ಒಂದಾಗಬೇಕು. ಒಂದಾಗಿ ದೇಶವನ್ನು ಕಟ್ಟೋಣ ಎಂದು ತಿಳಿಸಿದರು.
ಚುನಾವಣೆಗಾಗಿ ಕಿಟ್ ಹಂಚಿಕೆ:
ಕೋವಿಡ್ ಸಂದರ್ಭದಲ್ಲಿ ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದ್ದು ಭಾರತೀಯ ಜನತಾ ಪಕ್ಷ. ವಿವಿಧ ಸಂಘ ಸಂಸ್ಥೆಗಳಿಮದ 10-15 ಸಾವಿರ ಕಿಟ್ಗಳನ್ನು ಸಣ್ಣಪುಟ್ಟ ಸಂಸ್ಥೆಗಳು ಹಂಚಿವೆ. ಕಾಂಗ್ರೆಸ್ ಕಿಟ್ ಕೊಟ್ಟಿದ್ದನ್ನೇ ದೊಡ್ಡ ಬಂಡವಾಳ ಮಾಡುತ್ತಾರೆ ಎಂದರೆ, ಕೋವಿಡ್ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಲೆಂದು ಮಾಡಿಲ್ಲ. ಚುನಾವಣೆ ದೃಷ್ಟಿಯಿಂದ ಹಂಚಿದ್ದಾರೆ ಎಂದು ಟೀಕಿಸಿದರು.
ಅಧಿಕಾರ ಬಂದಾಗ ಕೆಲಸ ಮಾಡಬಹುದೆಂಬ ತವಕ ಭಾಜಪಕ್ಕಿದೆ. ಅಧಿಕಾರ ಬಂದಾಗ ಅದನ್ನು ಚಲಾಯಿಸುವುದಲ್ಲ ಅಧಿಕಾರ ಬಂದರೆ ಅದನ್ನು ಜನರಿಗಾಗಿ ಬಳಸುವ ಧರ್ಮ ಮತ್ತು ಸಂಸ್ಕೃತಿ ನಮ್ಮದು. ಬಿಜೆಪಿಯಿಂದ ನೋಟು ತೆಗೆದುಕೊಳ್ಳಿ ನಮಗೆ ಮತ ಹಾಕಿ ಎಂದು ಕಾಂಗ್ರೆಸ್ನವರು ಹೇಳುತ್ತಾರೆ. ಅಡ್ಡದಾರಿ ಹಿಡಿಸುವ ಕೆಲಸ ಅವರದ್ದು. ನಿಮ್ಮ ಸ್ವಾಭಿಮಾನ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಗೆ ಮತ ಹಾಕಿ ಎಂದು ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
Recommended Video