ಮುಂಬೈ ನೋಟು, ಬನ್ನಿಕೋಡಗೆ ಓಟು: ಸಿದ್ದರಾಮಯ್ಯ
ಹಾವೇರಿ, ನವೆಂಬರ್ 27: ಹಾವೇರಿ ಜಿಲ್ಲೆಯ ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, "ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಅವರ ಹತ್ತಿರ ನೋಟು ತೆಗೆದುಕೊಂಡು, ಕಾಂಗ್ರೆಸ್ ಅಭ್ಯರ್ಥಿ ಬಿ.ಹೆಚ್.ಬನ್ನಿಕೋಡ್ ಅವರಿಗೆ ಓಟು ಕೊಡಬೇಕು" ಎಂದು ಹೇಳಿದರು.
ಹಿರೇಕೆರೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಬಿ.ಸಿ.ಪಾಟೀಲ್ ಮತ್ತು ಇನ್ನೂ 16 ಶಾಸಕರು ಸೇರಿ ಸಮ್ಮಿಶ್ರ ಸರ್ಕಾರ ಇದ್ದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮುಂಬೈಗೆ ಓಡಿ ಹೋಗಿದ್ದರು. ಬಿಜೆಪಿಯವರ ಬಳಿ ಕೋಟ್ಯಾಂತರ ರೂಪಾಯಿ ಪಡೆದಿದ್ದಾರೆ. ಹೀಗಾಗಿ 'ಮುಂಬೈ ನೋಟು, ಬನ್ನಿಕೋಡ್ ಗೆ ಓಟು' ಎಂದು ಹೇಳಿ ನೆರೆದಿದ್ದ ಜನರನ್ನು ನಗಿಸಿದರು.
ನಾನು ಜೆಡಿಎಸ್ ಬಿಡಲಿಲ್ಲ, ಪಕ್ಷ ನನ್ನನ್ನು ಉಚ್ಚಾಟಿಸಿತ್ತು: ಸಿದ್ದರಾಮಯ್ಯ
ಸ್ವಾಭಿಮಾನಕ್ಕಾಗಿ ಬನ್ನಿಕೋಡ್ ಗೆ ಮತ ನೀಡಬೇಕು, ನೀವು ಹೀಗೆ ಮಾಡಿದಲ್ಲಿ ನಿಮ್ಮ ಸ್ವಾಭಿಮಾನಕ್ಕೆ ಜಯ ಸಿಗುತ್ತದೆ ಎಂದು ಹೇಳಿದರು. ಕಾಂಗ್ರೆಸ್ ಅಭ್ಯರ್ಥಿ ಮೌಲ್ಯಯುತ ರಾಜಕಾರಣಿ, ಅವರಿಗೆ ನೀವು ಕೊಡುವ ಮತಗಳು ವ್ಯರ್ಥವಾಗುವುದಿಲ್ಲ ಎಂದರು.
ಬಿ.ಸಿ.ಪಾಟೀಲ್ ಅಪ್ರಾಮಾಣಿಕ ರಾಜಕಾರಣಿ ಅವನ ಹತ್ತಿರ ಸಾಕಷ್ಟು ದುಡ್ಡಿರಬಹುದು, ಆದರೆ ಬನ್ನಿಕೋಡ್ ಪ್ರಾಮಾಣಿಕರು ಹಾಗಾಗಿ ಅವರ ಹತ್ತಿರ ದುಡ್ಡಿಲ್ಲ. ಈ ಚುನಾವಣೆ ಪ್ರಾಮಾಣಿಕ ಬಿ.ಹೆಚ್.ಬನ್ನಿಕೋಡ್ ಮತ್ತು ಅಪ್ರಾಮಾಣಿಕ ಬಿ.ಸಿ.ಪಾಟೀಲ್ ನಡುವಿನ ಚುನಾವಣೆ ಎಂದು ಬಣ್ಣಿಸಿದರು.
ರಾಜಕಾರಣ ಅಂದರೆ ಬಿ.ಸಿ.ಪಾಟೀಲ್ ಪೊಲೀಸ್ ಕೆಲಸ ಎಂದು ತಿಳಿದುಕೊಂಡಿದ್ದಾರೆ, ಆವರು ಇನ್ನೂ ಪೊಲೀಸ್ ಬುದ್ದಿ ಬಿಟ್ಟಿಲ್ಲ ಎಂದು ಮಾತಿನ ಮೂಲಕ ತಿವಿದರು. ಸುಪ್ರೀಂ ಕೋರ್ಟ್ ಅವರನ್ನು ಅನರ್ಹರೆಂದು ಹೇಳಿದೆ, ಅವರಿಗೆ ಮತ ಹಾಕಿ ನಿಮ್ಮ ಸ್ವಾಭಿಮಾನ ಕಳೆದುಕೊಳ್ಳಬೇಡಿ ಎಂದರು.
ಬಡಿಯೋದು ಕೊಟ್ಟು ಊದುವುದು ಕೊಂಡಂತಾಗುತ್ತದೆ : ಸಿದ್ದರಾಮಯ್ಯ
ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಿ.ಸಿ.ಪಾಟೀಲ್, ಕಾಂಗ್ರೆಸ್ ನಿಂದ ಬಿ.ಹೆಚ್.ಬನ್ನಿಕೋಡ್ ಉಪ ಚುನಾವಣಾ ಆಖಾಡದಲ್ಲಿದ್ದರೆ, ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ನಾಮಪತ್ರ ವಾಪಸ್ ಪಡೆದಿದ್ದರು. ಡಿಸೆಂಬರ್ 05 ರಂದು ಉಪ ಚುನಾವಣೆ ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.