ಹಿರೇಕೆರೂರು ಆಖಾಡದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ವಾಮೀಜಿ ಅಚ್ಚರಿ ಆಯ್ಕೆ
ಹಾವೇರಿ, ನವೆಂಬರ್ 18: ಡಿಸೆಂಬರ್ ೦೫ ರಂದು ನಡೆಯಲಿರುವ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದ್ದು, ಕೆಲವು ಕಡೆ ಅಭ್ಯರ್ಥಿಗಳೇ ಬದಲಾವಣೆಯಾಗುತ್ತಿದ್ದಾರೆ. ಹೌದು, ಹಿರೇಕೆರೂರು ವಿಧಾನಸಭಾ ಉಪ ಚುನಾವಣಾ ಆಖಾಡಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ರಟ್ಟಿಹಳ್ಳಿಯ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಕಣಕ್ಕಿಳಿಯಲಿದ್ದಾರೆ.
ಈ ಮೊದಲು ಉಜಿನೆಪ್ಪ ಕೋಡಿಹಳ್ಳಿಗೆ ಟಿಕೆಟ್ ನೀಡಿದ್ದ ಜೆಡಿಎಸ್, ಅಚ್ಚರಿಯ ಬೆಳವಣಿಗೆಯಲ್ಲಿ ಭಾನುವಾರ ರಾತ್ರಿ ಇದ್ದಕ್ಕಿಂದಂತೆಯೇ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗೆ ಟಿಕೆಟ್ ನೀಡಿದೆ. ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿದ್ದು, ಇಂದೇ ನಾಮಪತ್ರ ಸಲ್ಲಿಸಲು ಸ್ವಾಮೀಜಿ ತಯಾರಾಗಿದ್ದಾರೆ. ಜೆಡಿಎಸ್ ನಿಂದ ಸ್ವಾಮೀಜಿ ಚುನಾವಣೆಗೆ ಸ್ಪರ್ಧಿಸುತ್ತಿರುವುದರಿಂದ ಬಾರತೀಯ ಜನತಾ ಪಕ್ಷಕ್ಕೆ ದೊಡ್ಡ ಆಘಾತವಾಗಿದೆ.
ಉಪ ಚುನಾವಣೆ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ
ಶಿವಾಚಾರ್ಯ ಸ್ವಾಮೀಜಿ ಮನವೊಲಿಕೆಗೆ ಬಿಜೆಪಿ ಇನ್ನಿಲ್ಲದಂತೆ ಕಸರತ್ತು ನಡೆಸುತ್ತಿದೆ. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮತ್ತು ಮಾಜಿ ಶಾಸಕ ಯು.ಬಿ.ಬಣಕಾರ ಸಂಧಾನ ಸಭೆ ನಡೆಸಿದ್ದಾರೆ. ಸಿಎಂ ಪುತ್ರನ ಮನವೊಲಿಕೆಗೂ ಸ್ವಾಮೀಜಿ ಬಗ್ಗುತ್ತಿಲ್ಲ. ನಾಮಪತ್ರ ಸಲ್ಲಿಸಿ ಚುನಾವಣೆಗೂ ಸ್ಪರ್ಧಿಸುತ್ತೇನೆ ಎಂದಿದ್ದಾರೆ.
ಬಿಜೆಪಿಯಿಂದ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್ ನಿಂದ ಬಿ.ಹೆಚ್.ಬನ್ನಿಕೋಡ್ ಅಭ್ಯರ್ಥಿಯಾಗಿ ಉಪ ಚುನಾವಣಾ ಕಣದಲ್ಲಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿರುವ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸ್ಪರ್ಧೆಯಿಂದ ಕಂಗಾಲಾಗಿರುವ ಬಿಜೆಪಿ, ಮತ ವಿಭಜನೆ ಎದುರಾಗುವ ಭೀತಿ ಎದುರಿಸುತ್ತಿದೆ.
ಈ ಬಗ್ಗೆ ಮಾತನಾಡಿರುವ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ "ಸ್ವಾಮೀಜಿ ಸ್ಪರ್ಧೆಯಿಂದ ಯಾವುದೇ ತೊಂದರೆ ಇಲ್ಲ, ನಮಗೇನೂ ಆಗುವುದಿಲ್ಲವೆಂದು" ತಿರುಗೇಟು ನೀಡಿದ್ದಾರೆ.