ಡ್ರಗ್ಸ್ ಬಗ್ಗೆ ಮತ್ತೊಂದು ಆಘಾತಕಾರಿ ಸುದ್ದಿ ತಿಳಿಸಿದ ಪ್ರಮೋದ್ ಮುತಾಲಿಕ್
ಹಾವೇರಿ, ಸೆಪ್ಟೆಂಬರ್ 2: ಸ್ಯಾಂಡಲ್ ವುಡ್ ಕೆಲ ನಟ ನಟಿಯರ ಡ್ರಗ್ಸ್ ಸೇವನೆ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿ, ಡ್ರಗ್ ಮಾಫಿಯಾ ಜೊತೆ ಸೆಕ್ಸ್ ಮಾಫಿಯಾ ಕೂಡಾ ರಾಜ್ಯದಲ್ಲಿ ಸಕ್ರಿಯವಾಗಿದೆ ಎಂಬ ಆಘಾತಕಾರಿ ಸುದ್ದಿ ಹೊರಹಾಕಿದರು.
ಇದರ ಬಗ್ಗೆ 2009 ರಲ್ಲೇ ನಾನು ಸರ್ಕಾರದ ಗಮನಕ್ಕೆ ತಂದಿದ್ದೆ, ಅಂದು ಇಡೀ ದೇಶದಲ್ಲಿ ನನ್ನನ್ನು ಟಾರ್ಗೆಟ್ ಮಾಡಿದರು. ರಾಜ್ಯದಲ್ಲಿ ಡ್ರಗ್ ಮಾಫಿಯಾ ಸಕ್ರಿಯವಾಗಿದೆ ಎಂದರು.
ಡ್ರಗ್ಸ್ ಮಾಫಿಯಾ ಮಟ್ಟಹಾಕಲು ಈಗ ಸಮಯ ಬಂದಿದೆ: ಎಚ್.ವಿಶ್ವನಾಥ್
ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ಹರಿಹಾಯ್ದ ಪ್ರಮೋದ್ ಮುತಾಲಿಕ್, ""ಡ್ರಗ್ ವಿಚಾರದಲ್ಲಿ ಇಂದ್ರಜಿತ್ ಲಂಕೇಶ್ ಹೀರೋ ಆಗೋಕೆ ಹೊರಟಿದ್ದಿರಲ್ಲ. ನಿಮ್ಮ ಅಕ್ಕ ಗೌರಿ ಲಂಕೇಶ್ ಡ್ರಗ್ ಅಡಿಕ್ಟ್ ಆದಾಗ ನೀವು ಎಲ್ಲಿ ಹೋಗಿದ್ರಿ? ಅಂದು ಯಾಕೆ ಈ ವಿಚಾರದ ಬಗ್ಗೆ ನೀವು ಮಾತನಾಡಲಿಲ್ಲ? ಗೌರಿ ಲಂಕೇಶ್ರನ್ನು ಸುಧಾರಿಸುವ ಪ್ರಯತ್ನ ಏಕೆ ಮಾಡಲಿಲ್ಲ?'' ಎಂದು ಪ್ರಶ್ನಿಸಿದರು.
ಆದರೆ ಇಂದು ನಟ-ನಟಿಯರ ಮೇಲೆ ಆರೋಪ ಮಾಡುತ್ತಿರುವುದು ಎಷ್ಟು ಸರಿ? ಇಂತಹ ಸಂದರ್ಭದಲ್ಲಿ ಚಿರಂಜೀವಿ ಸರ್ಜಾ ಹೆಸರು ತೆಗೆದುಕೊಳ್ಳುವ ಅವಶ್ಯಕತೆ ಏನಿತ್ತು. ಸರ್ಜಾ ಫ್ಯಾಮಿಲಿ ಉತ್ತಮ ಸಂಸ್ಕಾರದಿಂದ ಬಂದಿರುವ ಫ್ಯಾಮಿಲಿ ಎಂದು ಸರ್ಜಾ ಕುಟುಂಬದ ಬೆನ್ನಿಗೆ ಪ್ರಮೋದ್ ಮುತಾಲಿಕ್ ನಿಂತರು.
ಈ ಡ್ರಗ್ ಮಾಫಿಯಾದಲ್ಲಿ ಮುಖ್ಯವಾಗಿ ಪೊಲೀಸರು, ರಾಜಕಾರಣಿಗಳು ಭಾಗಿಯಾಗಿದ್ದು, ಡ್ರಗ್ಸ್ ಬಗ್ಗೆ ಪೊಲೀಸ್ ಇಲಾಖೆಗೆ ಇಂಚಿಂಚೂ ಮಾಹಿತಿ ಇರುತ್ತದೆ. ಬೆಂಗಳೂರಿನ ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಇದರಲ್ಲಿ ಇದ್ದಾನೆ ಎಂಬ ಆರೋಪ ಮಾಡಿದರು.
ಡ್ರಗ್ಸ್ ದಂಧೆಕೋರರಿಗೆ ರಾಜಕಾರಣಿಗಳ ಬೆಂಬಲ: ಶಿವರಾಮೇಗೌಡ
ನಮ್ಮ ಕೈಯಲ್ಲಿ ಹುಡುಕುವುದಕ್ಕೆ ಆಗಿಲ್ಲ ಅಂತಾ ಪೊಲೀಸರು ಹೇಳಲಿ ನೋಡೋಣ. ನಾನು ಚಾಲೆಂಜ್ ಮಾಡ್ತೇನೆ, ಯಾರ್ಯಾರು ಎಲ್ಲಿಲ್ಲಿ ಮಾಡುತ್ತಿದ್ದಾರೆ ಅಂತಾ ಗೊತ್ತಿದೆ. ಸಾವಿರಾರು ಕೋಟಿ ರೂ. ವ್ಯವಹಾರ ಈ ದಂಧೆಯಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.